ನಿಮ್ಮ ನಾಮಕಾವಸ್ತೆಯ ಕ್ಷಮೆಯಾಚನೆ ಯಾರಿಗೆ ಬೇಕ್ರೀ.. ಮಾಡಿದ ತಪ್ಪಿಗೆ ಕಾನೂನು ಕ್ರಮ ಎದುರಿಸಿ: ಪತಂಜಲಿ ಸಂಸ್ಥಾಪಕರಿಗೆ ಎಚ್ಚರಿಕೆ ಕೊಟ್ಟ ಸುಪ್ರೀಂಕೋರ್ಟ್

Patanjali controversy: ಪತಂಜಲಿ ಸಂಸ್ಥಾಪಕರಾದ ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಅವರನ್ನು ಸುಪ್ರೀಂಕೋರ್ಟ್ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ಉತ್ತರಾಖಂಡ್ ಮತ್ತು ಕೇಂದ್ರದ ಸರ್ಕಾರಗಳ ಬಗ್ಗೆಯೂ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತಂಜಲಿ ಸಂಸ್ಥಾಪಕರು ನಿನ್ನ ಕ್ಷಮೆ ಯಾಚಿಸಿದ ರೀತಿಗೆ ಕೋರ್ಟ್ ವ್ಯಗ್ರಗೊಂಡಿದೆ. ಕ್ಷಮೆ ಯಾಚನೆಯನ್ನು ಮೊದಲು ಕೋರ್ಟ್​ಗೆ ಕೊಡುವ ಬದಲು, ಮಾಧ್ಯಮಗಳಿಗೆ ಕಳುಹಿಸಲಾಗಿದ್ದು ನ್ಯಾಯಾಲಯಕ್ಕೆ ಸಿಟ್ಟು ತರಿಸಿದೆ.

ನಿಮ್ಮ ನಾಮಕಾವಸ್ತೆಯ ಕ್ಷಮೆಯಾಚನೆ ಯಾರಿಗೆ ಬೇಕ್ರೀ.. ಮಾಡಿದ ತಪ್ಪಿಗೆ ಕಾನೂನು ಕ್ರಮ ಎದುರಿಸಿ: ಪತಂಜಲಿ ಸಂಸ್ಥಾಪಕರಿಗೆ ಎಚ್ಚರಿಕೆ ಕೊಟ್ಟ ಸುಪ್ರೀಂಕೋರ್ಟ್
ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ

Updated on: Apr 10, 2024 | 5:31 PM

ನವದೆಹಲಿ, ಏಪ್ರಿಲ್ 10: ಜಾಹೀರಾತು ವಿಚಾರದಲ್ಲಿ ಪತಂಜಲಿ ಸಂಸ್ಥೆಯ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಸುಪ್ರೀಂಕೋರ್ಟ್ ಕೆಂಡಾಮಂಡಲವಾಗಿದೆ. ಪತಂಜಲಿ ಸಂಸ್ಥಾಪಕರು ‘ಮಾಡಿದ’ ಕ್ಷಮಯಾಚನೆಯನ್ನು (Apologies) ಕೋರ್ಟ್ ತಿರಸ್ಕರಿಸುವುದಾಗಿ ಹೇಳಿದೆ. ಕ್ಷಮೆ ಯಾಚನೆ ಸಾಲದು, ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ (Supreme Court) ಹೇಳಿದೆ. ‘ಈ ಪ್ರಕರಣದಲ್ಲಿ ನಾವು ಉದಾರವಾಗಿರದು ಎನಿಸುತ್ತಿದೆ. ನಮ್ಮ ಕೋರ್ಟ್ ಆದೇಶಕ್ಕೆ ನೀವೇನು ಬೆಲೆ ಕೊಟ್ಟಿರುವಿರಿ, ನಿಮ್ಮ ಕ್ಷಮೆಯಾಚನೆಗೂ ಅಷ್ಟೇ ಬೆಲೆ ಕೊಡುತ್ತೇವೆ,’ ಎಂದು ಕೋರ್ಟ್ ಟೀಕಿಸಿದೆ.

‘ನಾಮಕಾವಸ್ತೆಗೆ ಕ್ಷಮೆಯಾಚಿಸಿದಂತಿದೆ. ಏನೋ ತಪ್ಪಿಸಿಕೊಳ್ಳಬೇಕೆಂದು ಇದನ್ನು ಮಾಡಿದಂತಿದೆ. ನಿಮ್ಮ ಅಫಿಡವಿಟ್ ಅನ್ನು ಒಪ್ಪಲು ನಿರಾಕರಿಸುತ್ತೇವೆ. ನಮ್ಮ ಆದೇಶಗಳನ್ನು ಬೇಕಂತಲೇ ಬಾರಿ ಬಾರಿ ಉಲ್ಲಂಘನೆ ಮಾಡಿದ್ದೀರಿ ಎಂದು ಭಾವಿಸುತ್ತೇನೆ’ ಎಂದು ಸುಪ್ರೀಂ ನ್ಯಾಯಪೀಠದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಪ್ರಕರಣ: ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಕೇಜ್ರಿವಾಲ್

ಈ ನ್ಯಾಯಪೀಠವು ಕೇಂದ್ರ ಸರ್ಕಾರ ಮತ್ತು ಉತ್ತರಾ ಖಂಡ್ ಸರ್ಕಾರದ ಧೋರಣೆ ಬಗ್ಗೆಯೂ ಅಸಮಾಧಾನಗೊಂಡಿದೆ. ಪತಂಜಲಿ ಸಂಸ್ಥಾಪಕರ ಕ್ಷಮೆ ಯಾಚನೆ ಬಗ್ಗೆ ಕೋರ್ಟ್ ವ್ಯಗ್ರಗೊಳ್ಳಲು ಕಾರಣ ಇದೆ. ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಅವರು ಕೋರ್ಟ್​ಗೆ ಅಫಿಡವಿಟ್ ಸಲ್ಲಿಸುವ ಮುನ್ನ ಮಾಧ್ಯಮಗಳ ಮುಂದೆ ಹೋಗಿ ಮೊದಲು ಕ್ಷಮೆಯಾಚನೆಯ ವಿಚಾರವನ್ನು ಅರುಹಿದ್ದು ಕೋರ್ಟ್ ಕೆಂಗಣ್ಣಿಗೆ ಕಾರಣವಾಗಿದೆ.

‘ನಿಮಗೆ ಪ್ರಚಾರ ಮಾತ್ರ ಬೇಕು ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಮನಸ್ಸಿನಿಂದ ನೀವು ಕ್ಷಮೆ ಯಾಚಿಸಿದಂತೆ ಅನಿಸುತ್ತಿಲ್ಲ. ನಮ್ಮ ಆದೇಶಗಳಿಗೆ ಕಡವೆಕಾಸು ಕಿಮ್ಮತ್ತು ಕೊಡದ ನಿಮ್ಮ ಕ್ಷಮೆಯಾಚನೆಗೆ ನಾವ್ಯಾಕೆ ಬೆಲೆ ಕೊಡಬೇಕು ಹೇಳಿ,’ ಎಂದು ಸುಪ್ರೀಂ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತು.

ಪತಂಜಲಿಯಿಂದ ದಾರಿ ತಪ್ಪಿಸುವಂತಹ ಜಾಹೀರಾತುಗಳು ಬರುತ್ತಿದ್ದರೂ ಉತ್ತರಾಖಂಡ್ ಅಧಿಕಾರಿಗಳು ಯಾಕೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಎಂದೂ ನ್ಯಾಯಮೂರ್ತಿಗಳು ಕೇಳಿದ್ದು, ಸಂಬಂಧಿತ ಅಧಿಕಾರಿಗಳನ್ನು ಅಮಾನತುಗೊಳಿಸಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಖಿಲೇಶ್​ ಯಾದವ್

ಏನಿದು ಪತಂಜಲಿ ವಿವಾದ…?

ಕೋವಿಡ್ ಹಾಗೂ ಲಸಿಕೆ ವಿತರಣೆ ಸಂದರ್ಭದಲ್ಲಿ ಪತಂಜಲಿ ಸಂಸ್ಥೆ ನಕಾರಾತ್ಮಕ ರೀತಿಯಲ್ಲಿ ಜಾಹೀರಾತು ನೀಡುತ್ತಿತ್ತು. ಈ ಲಸಿಕೆ, ಕೋವಿಡ್ ಔಷಧ ನಿರುಪಯುಕ್ತವಾಗಿದ್ದು, ತಮ್ಮ ಔಷಧಗಳು ಪರಿಣಾಮಕಾರಿ ಆಗಿವೆ ಎಂದು ಅದರ ಜಾಹೀರಾತಿನಲ್ಲಿ ಹೇಳಲಾಗುತ್ತಿತ್ತು. ಪತಂಜಲಿಯಿಂದ ಆಧುನಿಕ ಔಷಧಗಳ ವಿರುದ್ಧ ಅಪಪ್ರಚಾರ ಆಗುತ್ತಿದೆ ಎಂದು ಇಂಡಿಯನ್ ಮೆಡಕಲ್ ಅಸೋಸಿಯೇಶನ್ ಸಂಸ್ಥೆ ದೂರು ದಾಖಲಿಸಿತ್ತು. ಈ ಸಂಬಂಧ ಸುಪ್ರೀಂಕೋರಟ್ ವಿಚಾರಣೆ ನಡೆಸುತ್ತಿದೆ.

ವಿಚಾರಣೆಗೆ ಹಾಜರಾಗುವಂತೆ ಪತಂಜಲಿ ಸಂಸ್ಥಾಪಕರಿಗೆ ಕೋರ್ಟ್ ಹಲವು ಬಾರಿ ತಿಳಿಸಿದರೂ, ಇಬ್ಬರೂ ಕೂಡ ಹಾಜರಾಗಿರಲಿಲ್ಲ. ಇದು ಕಂಟೆಂಪ್ಟ್ ಆಫ್ ಕೋರ್ಟ್ ಎಂದು ಪರಿಗಣಿತವಾಗಿದೆ. ಕೋರ್ಟ್ ಆದೇಶಕ್ಕೆ ಬೆಲೆ ಕೊಡದ ಪತಂಜಲಿ ಸಂಸ್ಥಾಪಕರ ವರ್ತನೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಕೋಪ ತರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us