ತೇಜಸ್ವಿ ಯಾದವ್​ ಸವಾಲಿಗೆ ತಿರುಗೇಟು; ನಿತೀಶ್ ಕುಮಾರ್ ಎನ್​ಡಿಎ ಸಿಎಂ ಅಭ್ಯರ್ಥಿಯೆಂದು ಘೋಷಿಸಿದ ಪ್ರಧಾನಿ ಮೋದಿ

ನಿನ್ನೆ ಬಿಹಾರದ ಚುನಾವಣೆಯ ಮಹಾಘಟಬಂಧನದ ಸಿಎಂ ಅಭ್ಯರ್ಥಿಯಾಗಿ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿತ್ತು. ಈ ವೇಳೆ ವಾಗ್ದಾಳಿ ನಡೆಸಿದ್ದ ತೇಜಸ್ವಿ ಯಾದವ್ ಬಿಜೆಪಿ ಮತ್ತೊಮ್ಮೆ ನಿತೀಶ್ ಕುಮಾರ್ ಅವರನ್ನು ಸಿಎಂ ಪಟ್ಟಕ್ಕೇರಿಸುವುದಿಲ್ಲ, ಅವರು ತಮ್ಮ ಅಭ್ಯರ್ಥಿಯ ಹೆಸರು ಘೋಷಿಸಲಿ ಎಂದು ಸವಾಲು ಹಾಕಿದ್ದರು. ಅದರ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ನಿತೀಶ್ ಕುಮಾರ್ ಅವರೇ ಎನ್​ಡಿಎ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ನಿತೀಶ್ ಕುಮಾರ್ ಅವರ ನಾಯಕತ್ವದ ಮೈತ್ರಿ ಹಿಂದಿನ ಎಲ್ಲಾ ಚುನಾವಣಾ ದಾಖಲೆಗಳನ್ನು ಮುರಿಯುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತೇಜಸ್ವಿ ಯಾದವ್​ ಸವಾಲಿಗೆ ತಿರುಗೇಟು; ನಿತೀಶ್ ಕುಮಾರ್ ಎನ್​ಡಿಎ ಸಿಎಂ ಅಭ್ಯರ್ಥಿಯೆಂದು ಘೋಷಿಸಿದ ಪ್ರಧಾನಿ ಮೋದಿ
Pm Modi- Nitish Kumar

Updated on: Oct 24, 2025 | 6:08 PM

ನವದೆಹಲಿ, ಅಕ್ಟೋಬರ್ 24: ಬಿಹಾರ ವಿಧಾನಸಭಾ ಚುನಾವಣೆಗೆ (Bihar Elections 2025) ಕೆಲವೇ ವಾರಗಳು ಬಾಕಿ ಇದೆ. ಹೀಗಾಗಿ, ಬಿಹಾರದಲ್ಲಿ ಚುನಾವಣಾ ಪ್ರಚಾರ ತೀವ್ರಗೊಳ್ಳುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನೇತೃತ್ವದ ಎನ್​ಡಿಎಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರ ಹೆಸರನ್ನು ಅನುಮೋದಿಸಿದ್ದಾರೆ. ನಿತೀಶ್ ಕುಮಾರ್ ಅವರ ನಾಯಕತ್ವದ ಮೈತ್ರಿ ಹಿಂದಿನ ಎಲ್ಲಾ ಚುನಾವಣಾ ದಾಖಲೆಗಳನ್ನು ಮುರಿಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಹೇಳಿದ ಬೆನ್ನಲ್ಲೇ ಬಿಜೆಪಿಯಿಂದ ಘೋಷಣೆ ಬಂದಿದೆ. ನಿನ್ನೆ ವಿರೋಧ ಪಕ್ಷದ ಮಹಾಘಟಬಂಧನ್ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿತ್ತು. ಇಂದು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಎನ್‌ಡಿಎಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಧಾನಿ ಮೋದಿ ಅನುಮೋದಿಸಿದ್ದಾರೆ.


ಇದನ್ನೂ ಓದಿ: ಬಿಹಾರ ಚುನಾವಣೆ; ಮಹಾಘಟಬಂಧನದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಹೆಸರು ಘೋಷಣೆ

ಚುನಾವಣೆ ನಡೆಯಲಿರುವ ಬಿಹಾರ ರಾಜ್ಯದಲ್ಲಿ ತಮ್ಮ ಮೊದಲ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸತತ ಐದನೇ ಅವಧಿಗೆ ಮುಖ್ಯಮಂತ್ರಿಯಾಗುವ ಗುರಿ ಹೊಂದಿರುವ ನಿತೀಶ್ ಕುಮಾರ್ ಅವರನ್ನು ಹೊಗಳಿದರು. “ನಿತೀಶ್ ಕುಮಾರ್ 2005ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದರು. ಆದರೆ ಅವರ ಅಧಿಕಾರಾವಧಿಯ ಸುಮಾರು ಒಂದು ದಶಕದ ಅವಧಿಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಡ್ಡಿಯಾಯಿತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


“ಈ ಬಾರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ತನ್ನ ಹಿಂದಿನ ಎಲ್ಲಾ ಗೆಲುವಿನ ದಾಖಲೆಗಳನ್ನು ಮುರಿಯಲಿದೆ. ಬಿಹಾರ ಎನ್‌ಡಿಎಗೆ ಇದುವರೆಗಿನ ಅತಿದೊಡ್ಡ ಜನಾದೇಶವನ್ನು ನೀಡಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಖಂಡಿತ ನಿತೀಶ್ ಕುಮಾರ್ ಅವರನ್ನು ಸಿಎಂ ಮಾಡೋದಿಲ್ಲ; ಎನ್​ಡಿಎ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ

ನಿನ್ನೆ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿದ ನಂತರ ಮಾತನಾಡಿದ್ದ ಆರ್​ಜೆಡಿ ನಾಯಕ ತೇಜಸ್ವಿ ಯಾದವ್, “ಎನ್‌ಡಿಎಯ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ನಮಗೆ ತಿಳಿದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ನಿತೀಶ್ ಕುಮಾರ್ ಅವರನ್ನು ಮತ್ತೆ ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸುವುದಿಲ್ಲ. ಬಿಜೆಪಿ ನಿತೀಶ್ ಕುಮಾರ್ ಅವರಿಗೆ ಅನ್ಯಾಯ ಮಾಡುತ್ತಿರುವುದು ತುಂಬಾ ದುಃಖಕರ” ಎಂದು ಲೇವಡಿ ಮಾಡಿದ್ದರು. ಅದಕ್ಕೆ ಇಂದು ಬಿಜೆಪಿ ತಿರುಗೇಟು ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ