ಪ್ರಲ್ಹಾದ್‌ ಜೋಶಿ ಕಾರ್ಯವೈಖರಿ ಹೊಗಳಿದ ಕಾಂಗ್ರೆಸ್ ನಾಯಕ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ರಾಜಸ್ಥಾನ ಸಿಎಂ ಅಶೋಕ ಗೆಹ್ಲೋಟ್ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಕಾರ್ಯವೈಖರಿಗಳನ್ನು ಕೊಂಡಾಡಿದ್ದಾರೆ. ರಾಜಸ್ಥಾನ ರಾಜ್ಯದ ವಿದ್ಯುತ್ ಸಮಸ್ಯೆ ಬಗೆಹರಿಸುವಲ್ಲಿ ರಚನಾತ್ಮಕ ಹಾಗೂ ಧನಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಲ್ಹಾದ್‌ ಜೋಶಿ ಕಾರ್ಯವೈಖರಿ ಹೊಗಳಿದ ಕಾಂಗ್ರೆಸ್ ನಾಯಕ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
ಪ್ರಲ್ಹಾದ್‌ ಜೋಶಿ ಕಾರ್ಯವೈಖರಿ ಹೊಗಳಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
Edited By: Rakesh Nayak Manchi

Updated on: Oct 14, 2022 | 9:20 AM

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಲ್ಲಿದ್ದಲು ಮತ್ತು ಗಣಿ ಇಲಾಖೆಯನ್ನ ನಡೆಸುತ್ತಿರುವ ಆಡಳಿತ ರೀತಿಯನ್ನು ಕಾಂಗ್ರೆಸ್ ಮುಖಂಡರೂ ಆಗಿರುವ ರಾಜಸ್ಥಾನ ಸಿಎಂ ಅಶೋಕ ಗೆಹ್ಲೋಟ್ ಅವರು ಹೊಗಳಿದ್ದಾರೆ. ಪ್ರಲ್ಹಾದ ಜೋಶಿಯವರು ರಾಜಸ್ಥಾನ ರಾಜ್ಯದ ವಿದ್ಯುತ್ ಸಮಸ್ಯೆ ಬಗೆಹರಿಸುವಲ್ಲಿ ರಚನಾತ್ಮಕ ಹಾಗೂ ಧನಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಆಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕೇಂದ್ರದ ಕೋಲ್ ಇಂಡಿಯಾ ಲಿಮಿಟೆಡ್ ಹಾಗೂ ರಾಜಸ್ಥಾನ ವಿದ್ಯುತ್ ಉತ್ಪಾದನಾ ನಿಗಮದೊಂದಿಗೆ 1190 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕುರಿತ ಒಡಂಬಡಿಕೆಗೆ ಅಂಕಿತ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜಸ್ಥಾನದಲ್ಲಿ ವಿದ್ಯುತ್ ಸಮಸ್ಯೆ ಇದ್ದಾಗ ಛತ್ತೀಸಗಡದಲ್ಲಿರುವ ಕಲ್ಲಿದ್ದಲಿನ ಪ್ರಾಧಿಕಾರಗಳೂ ಸಾಕಷ್ಟು ಸಹಕಾರ ನೀಡಿವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಸರಕಾರ ಈ ನಿಟ್ಟಿನಲ್ಲಿ ನೆರವಾಗಿದೆ. ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿಯವರು ರಾಜಸ್ಥಾನದ ವಿದ್ಯುತ್ ಬರ ನೀಗಿಸುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ, ರಾಜಸ್ಥಾನದ ಸೋಲಾರ್ ಪಾರ್ಕ್ ಯೋಜನೆಯಡಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗುವುದು. ಕೋಲ್ ಇಂಡಿಯಾ ಲಿ. ಸಂಕಲ್ಪಿತ ಗ್ಯಾಸಿಫಿಕೇಶನ್ ಮೂಲಕ ಪರಿಸರ ಸ್ನೇಹಿ ಪರಿಶುದ್ಧ ಸೋಲಾರ್ ವಿದ್ಯುತ್ ಉತ್ಪಾದನಾ ಪ್ರಕ್ರಿಯೆ ಜಾರಿಗೆ ತರಲಾಗಿದೆ. ನಮ್ಮ ದೇಶ ಮುಂದಿನ 50 ವರ್ಷಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ನಿಕ್ಷೇಪ ಹೊಂದಿದೆ. ಈ ಕಲ್ಲಿದ್ದಲನ್ನು ಪರಿಸರ ಸ್ನೇಹಿಯಾಗಿ ಬಳಸಲು ಉದ್ದೇಶಿಸಲಾಗಿದೆ ಎಂದರು.

ತಿಳುವಳಿಕೆ ಪತ್ರಕ್ಕೆ ರಾಜಸ್ಥಾನದ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕುಮಾರ್ ಶರ್ಮಾ, ಕೋಲ್ ಇಂಡಿಯಾ ಲಿ. ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಅಗರವಾಲ್ ಹಾಗೂ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ ಜೋಶಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ಅಂಕಿತ ಹಾಕಲಾಯಿತು.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:17 am, Fri, 14 October 22

Web contact

TV9 Kannada

Read More
Follow Us