Hit And Run: ಫುಟ್​ಪಾತ್ ​ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಹರಿದ ಸಂಸದರ ಮಗಳ ಕಾರು

ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸಂಸದ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಚೆನ್ನೈನಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಾರು ಹತ್ತಿಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ

Hit And Run: ಫುಟ್​ಪಾತ್ ​ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಹರಿದ ಸಂಸದರ ಮಗಳ ಕಾರು
Image Credit source: India Today

Updated on: Jun 19, 2024 | 9:07 AM

ರಾಜ್ಯಸಭಾ ಸಂಸದರ ಮಗಳ ಕಾರು ಫುಟ್​ಪಾತ್​ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಹರಿದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಹಿಟ್​ ಆ್ಯಂಡ್​ ರನ್ ಪ್ರಕರಣದಲ್ಲಿ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ರಾಜ್ಯಸಭಾ ಸಂಸದ ಬಿಡಾ ಮಸ್ತಾನ್ ರಾವ್ ಅವರ ಪುತ್ರಿ ಹೆಸರು ಕೇಳಿಬರುತ್ತಿದೆ.

ಈ ಘಟನೆಯಲ್ಲಿ ಸೂರ್ಯ ಎನ್ನುವ 21ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಾಧುರಿಯನ್ನು ಚೆನ್ನೈನ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ, ಆದರೆ ಶೀಘ್ರವೇ ಅವರಿಗೆ ಜಾಮೀನು ಸಿಕ್ಕಿದೆ.

ಈ ಹಿಂದೆ ಮೇ 19ರಂದು ಪುಣೆಯ ಕಲ್ಯಾಣಿನಗರದಲ್ಲಿ ಅಪ್ರಾಪ್ತ ಬಾಲಕ ವೇದಾಂತ್ ಅಗರ್ವಾಲ್ ಎಂಬಾತ ತನ್ನ ಪೋರ್ಷೆ ಕಾರನ್ನು ಬೈಕ್​ಗೆ ಡಿಕ್ಕಿ ಹೊಡೆಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದೀಗ ಆತನ ತಂದೆ, ತಾಯಿ ಹಾಗೂ ಅಜ್ಜನನ್ನು ವಿವಿಧ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಈ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು.

ಮತ್ತಷ್ಟು ಓದಿ:  ಪುಣೆ ಪೋರ್ಷೆ ಕಾರು ಅಪಘಾತ: ಆರೋಪಿ ವೇದಾಂತ್​ ಅಗರ್ವಾಲ್ ತಂದೆಗೆ ಸೇರಿದ ರೆಸಾರ್ಟ್​ ನೆಲಸಮ

ಈ ಪ್ರಕರಣ ಏನು?
ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಫುಟ್​ ಪಾತ್​ನಲ್ಲಿ ಮಲಗಿದ್ದ ವ್ಯಕ್ತಿಯನ್ನು ನುಜ್ಜುಗುಜ್ಜುಗೊಳಿಸಿತ್ತು. ಇದರಿಂದಾಗಿ ಆತ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಮಾಧುರಿ ತಕ್ಷಣವೇ ಸ್ಥಳದಿಂದ ಓಡಿಹೋಗಿದ್ದಾರೆ ಎಂಬುದು ತಿಳಿದುಬಂದಿದೆ. ಆದರೆ ಅವರ ಸ್ನೇಹಿತರೊಬ್ಬರು ಕಾರಿನಿಂದ ಇಳಿದು ಅಪಘಾತದ ನಂತರ ಜಮಾಯಿಸಿದ ಜನರೊಂದಿಗೆ ಜಗಳವಾಡಲು ಪ್ರಾರಂಭಿಸಿದರು.

ನಂತರ ಆತನೂ ಸ್ವಲ್ಪ ಸಮಯದ ನಂತರ ಅಲ್ಲಿಂದ ಹೊರಟು ಹೋದನು. ಗುಂಪಿನಲ್ಲಿದ್ದ ಕೆಲವರು ಸೂರ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು.

ಸೂರ್ಯ ಮದುವೆಯಾಗಿ ಕೇವಲ 8 ತಿಂಗಳು ಕಳೆದಿತ್ತು. ಆತನ ಸಂಬಂಧಿಕರು ಮತ್ತು ನೆರೆಹೊರೆಯವರು ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಚೆನ್ನೈನ ಬೆಸೆಂಟ್ ನಗರ ಪ್ರದೇಶದ ಪಾದಚಾರಿ ಮಾರ್ಗದ ಬಳಿ ಕುಡಿದು ರಸ್ತೆಬದಿಯಲ್ಲಿ ಮಲಗಿದ್ದ ಎನ್ನಲಾಗಿದೆ. ಸೂರ್ಯ ಅವರ ಪತ್ನಿ ವಿನಿತಾ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 304 (ಎ) (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ