Republic Day 2022: ಇಂದು 73ನೇ ಗಣರಾಜ್ಯೋತ್ಸವ; ಭಾರತಕ್ಕೆ ಸಂವಿಧಾನ ಬಂದು, ಅಸ್ತಿತ್ವ ರೂಪಿಸಿಕೊಂಡಿದ್ದನ್ನು ಸಾರುವ ಹಬ್ಬ

| Updated By: Lakshmi Hegde

Updated on: Jan 26, 2022 | 7:16 AM

Republic Day History: ಭಾರತ ಸ್ವತಂತ್ರಗೊಂಡು, ತನ್ನದೇ ಅಸ್ತಿತ್ವ, ಗುರುತು ರೂಪಿಸಿಕೊಂಡಿದ್ದನ್ನು ಈ ಗಣರಾಜ್ಯೋತ್ಸವ ಸಾರುತ್ತದೆ.  ಅಷ್ಟೇ ಅಲ್ಲ, ಪ್ರಜಾಸತ್ತಾತ್ಮಕವಾಗಿ ತಮ್ಮ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿಯನ್ನು ನಾಗರಿಕರಿಗೆ ನೀಡಿದ ದಿನವನ್ನು ಗಣರಾಜ್ಯೋತ್ಸವ ಸ್ಮರಿಸುತ್ತದೆ.

Republic Day 2022: ಇಂದು 73ನೇ ಗಣರಾಜ್ಯೋತ್ಸವ; ಭಾರತಕ್ಕೆ ಸಂವಿಧಾನ ಬಂದು, ಅಸ್ತಿತ್ವ ರೂಪಿಸಿಕೊಂಡಿದ್ದನ್ನು ಸಾರುವ ಹಬ್ಬ
ಸಾಂಕೇತಿಕ ಚಿತ್ರ (ಫೋಟೋ ಕೃಪೆ: ಪಿಟಿಐ)
Follow us on

ಇಂದು ಗಣರಾಜ್ಯೋತ್ಸವ. ಭಾರತ ಈ ಬಾರಿ 73ನೇ ಗಣರಾಜ್ಯೋತ್ಸವ ಆಚರಿಸಿಕೊಳ್ಳುತ್ತಿದೆ (Republic Day 2022).  ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947ರ ಆಗಸ್ಟ್​ 15ರಂದು. ಹೀಗಾಗಿ ಪ್ರತಿವರ್ಷ ಆಗಸ್ಟ್​ 15ನ್ನು ಸ್ವಾತಂತ್ರ್ಯೋತ್ಸವ ಎಂದು ಆಚರಣೆ ಮಾಡುತ್ತೇವೆ. ಅದೇ, ದೇಶದಲ್ಲಿ ಅಧಿಕೃತವಾಗಿ ಸಂವಿಧಾನ ಜಾರಿಗೆ ಬಂದಿದ್ದು 1950ರ ಜನವರಿ 26ರಂದು. ಅಂದಿನಿಂದಲೂ ಪ್ರತಿವರ್ಷ ಜನವರಿ 26ರನ್ನು ಗಣರಾಜ್ಯೋತ್ಸವ ಅಥವಾ ಗಣತಂತ್ರ ದಿನ (Republic Day) ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಬಿ.ಆರ್​.ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ನೇತೃತ್ವ ವಹಿಸಿದ್ದರು. ಸಂವಿಧಾನ ರಚನೆಯಾಗಿ ಜಾರಿಗೆ ಬಂದ ಬಳಿಕ ಭಾರತವೊಂದು ಸಾರ್ವಭೌಮ ರಾಷ್ಟ್ರವಾಯಿತು. ಹಾಗೇ, ಭಾರತದಲ್ಲಿ 1949ರ ನವೆಂಬರ್​ 26ರಂದು ಸಂವಿಧಾನ ಸಭೆಯಲ್ಲಿ, ಸಂವಿಧಾನವನ್ನು ಅಂಗೀಕರಿಸಿದ ನೆನಪಿಗೆ, ದೇಶದಲ್ಲಿ ಪ್ರತಿವರ್ಷ ನವೆಂಬರ್​ 26ರನ್ನು ಸಂವಿಧಾನ ದಿನ ಎಂದೂ ಆಚರಣೆ ಮಾಡಲಾಗುತ್ತದೆ. 

ಗಣರಾಜ್ಯೋತ್ಸವವನ್ನು ದೇಶಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಖಾಸಗಿ ಸಂಸ್ಥೆ, ಎನ್​ಜಿಒಗಳೂ ಆಚರಿಸಲಾಗುತ್ತದೆ. ದೆಹಲಿಯ ರಾಜಪಥ್​​ನಲ್ಲಿ ನಡೆಯುವ, ಭಾರತೀಯ ಸೈನ್ಯವನ್ನೊಳಗೊಂಡ ಪರೇಡ್​ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಈ ಪರೇಡ್​ಗಳು ಇಂಡಿಯಾ ಗೇಟ್​ಬಳಿ ಕೊನೆಗೊಳ್ಳುತ್ತವೆ. ಹಾಗೇ, ಭಾರತದ ರಾಷ್ಟ್ರಪತಿ (ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್​) ರಾಜಪಥದ ಬಳಿ ಧ್ವಜಾರೋಹಣ ನಡೆಸುತ್ತಾರೆ. ಗಣರಾಜ್ಯೋತ್ಸವದ ಆಚರಣೆ, ಭಾರತದ ಸಂಸ್ಕೃತಿ, ಸಾಮಾಜಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಭಾರತದ ಭೂಸೇನೆ, ವಾಯುಸೇನೆ, ನೌಕಾಪಡೆಗಳ ಪರೇಡ್​ಗಳು, ಏರ್​ ಶೋಗಳು ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ.

ಅದಾದ ಬಳಿಕ ಭಾರತದ ರಾಷ್ಟ್ರಪತಿಗಳು ಪದ್ಮ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಈ ಪದ್ಮ ಪ್ರಶಸ್ತಿಗಳು ದೇಶದ ಉನ್ನತ ಗೌರವ ಆಗಿದೆ. ಅದರೊಂದಿಗೆ ವೀರ ಸೈನಿಕರಲ್ಲಿ ಆಯ್ಕೆಯಾದವರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ. ಈ ಗಣರಾಜ್ಯೋತ್ಸವ ಪರೇಡ್​ನ ನೇರ ಪ್ರಸಾರ ಬಹುತೇಕ ಎಲ್ಲ ಟಿವಿ ಚಾನಲ್​ಗಳಲ್ಲೂ ಇರುತ್ತದೆ. ಅಷ್ಟೇ ಅಲ್ಲ, ಕೆಲವು ಯೂಟ್ಯೂಬ್​ ಚಾನಲ್​ಗಳೂ ಕೂಡ ಲೈವ್​ ಪ್ರಸಾರ ಮಾಡುತ್ತವೆ.

ಗಣರಾಜ್ಯೋತ್ಸವದ ಮಹತ್ವ
ಭಾರತ ಸ್ವತಂತ್ರಗೊಂಡು, ತನ್ನದೇ ಅಸ್ತಿತ್ವ, ಗುರುತು ರೂಪಿಸಿಕೊಂಡಿದ್ದನ್ನು ಈ ಗಣರಾಜ್ಯೋತ್ಸವ ಸಾರುತ್ತದೆ.  ಅಷ್ಟೇ ಅಲ್ಲ, ಪ್ರಜಾಸತ್ತಾತ್ಮಕವಾಗಿ ತಮ್ಮ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿಯನ್ನು ನಾಗರಿಕರಿಗೆ ನೀಡಿದ ದಿನವನ್ನು ಗಣರಾಜ್ಯೋತ್ಸವ ಸ್ಮರಿಸುತ್ತದೆ. ಹಾಗೇ, ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಣೆ ಮಾಡಲಾಗಿದ್ದು, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಯಾವುದೇ ಇರಲಿ, ಬೆಳಗ್ಗೆ ಧ್ವಜಾರೋಹಣ ಮಾಡಿ ನಂತರ ಕೆಲಸ ನಿರ್ವಹಿಸುವುದಿಲ್ಲ.

ಇದನ್ನೂ ಓದಿ: Republic Day 2022: ಗಣರಾಜ್ಯೋತ್ಸವದ ಹಿನ್ನೆಲೆ, ಸಂವಿಧಾನದ ಬಗ್ಗೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು