
ಮುಂಬೈ: ಮಹಾರಾಷ್ಟ್ರದ ನಾಸಿಕ್ ಸಮೀಪ ನಿನ್ನೆ ಸಂಜೆ ಭೀಕರ ಅಪಘಾತ ನಡೆದಿದೆ. ಮುಖಾಮುಖಿ ಡಿಕ್ಕಿಯಾದ ಆಟೋ ಮತ್ತು ಬಸ್ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಉರುಳಿವೆ. ಮೊದಲು ಆಟೋ ಬಿದ್ದಿದ್ದು, ಬಳಿಕ ಬಸ್ ಅದರ ಮೇಲೆ ಉರುಳಿದೆ. ಸಂಪೂರ್ಣ ಬಸ್ ಬಾವಿಯೊಳಗೆ ಹೋಗಿದೆ. ಭೀಕರ ಅಪಘಾತದಲ್ಲಿ 26 ಜನ ಪ್ರಾಣ ಬಿಟ್ಟಿದ್ದು 19ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ನಾಸಿಕ್ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ನ ಒಂದು ಟೈರ್ ಸ್ಫೋಟಗೊಂಡು ಚಾಲಕ ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ನಂತರ ಎರಡೂ ವಾಹನಗಳು ಬಾವಿಗೆ ಬಿದ್ದಿದೆ. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ರಕ್ಷಣಾ ತಂಡಗಳು 30 ಜನರನ್ನು ರಕ್ಷಣೆ ಮಾಡಲಾಗಿದೆ. ಬಾವಿಯೊಳಗೆ ಹರಸಾಹಸ ಪಟ್ಟು ಪ್ರಯಾಣಿಕರನ್ನ ಕಾಪಾಡಲಾಗಿದೆ.
ಆಟೋ ಮತ್ತು ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೆ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ ಎಂದು ಭರವಸೆ ನೀಡಿದೆ. ಬಾವಿಯೊಳಗೆ ಬಿದ್ದ ಆಟೋ ಮತ್ತು ಬಸ್ ದುರಂತವನ್ನ ನೋಡಿ ಮಹಾರಾಷ್ಟ್ರದ ಜನ ಬೆಚ್ಚಿಬಿದ್ದಿದ್ದು, ಈ ದುರಂತಕ್ಕೆ ಹೊಣೆ ಯಾರು ಅನ್ನೋ ಪ್ರಶ್ನೆ ಜನರನ್ನು ಕಾಡುತ್ತಿದೆ.
Published On - 10:00 am, Wed, 29 January 20