V Senthil Balaji: ಸೆಂಥಿಲ್ ಬಾಲಾಜಿ ಜಾಮೀನು ಅರ್ಜಿ ವಜಾ: ಇಡಿ ಕಸ್ಟಡಿಗೆ ನೀಡಿದ ಕೋರ್ಟ್​​

ಸಚಿವ ಸೆಂಥಿಲ್ ಬಾಲಾಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಚೆನ್ನೈನ ಮೆಟ್ರೋಪಾಲಿಟನ್ ಸೆಷನ್ಸ್‌ ಕೋರ್ಟ್‌ ತಿರಸ್ಕರಿಸಿದ್ದು 8 ದಿನ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

V Senthil Balaji: ಸೆಂಥಿಲ್ ಬಾಲಾಜಿ ಜಾಮೀನು ಅರ್ಜಿ ವಜಾ: ಇಡಿ ಕಸ್ಟಡಿಗೆ ನೀಡಿದ ಕೋರ್ಟ್​​
ಸಚಿವ ಸೆಂಥಿಲ್ ಬಾಲಾಜಿ

Updated on: Jun 16, 2023 | 10:47 PM

ಚನ್ನೈ: ಸಚಿವ ಸೆಂಥಿಲ್ ಬಾಲಾಜಿ (Senthil Balaji) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಚೆನ್ನೈನ (Channai) ಮೆಟ್ರೋಪಾಲಿಟನ್ ಸೆಷನ್ಸ್‌ ಕೋರ್ಟ್‌ ತಿರಸ್ಕರಿಸಿದ್ದು 8 ದಿನ  ಜಾರಿ ನಿರ್ದೇಶನಾಲಯ (ED) ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇನ್ನು  ಸೆಂಥಿಲ್ ಬಾಲಾಜಿ ನಿಭಾಯಿಸ್ತಿದ್ದ ಖಾತೆ ಮರು ಹಂಚಿಕೆಗೆ ತಮಿಳುನಾಡು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಸೆಂಥಿಲ್​ ಬಾಲಾಜಿ ಅವರು ನಿಭಾಯಿಸ್ತಿದ್ದ ಖಾತೆ ಮರು ಹಂಚಿಕೆಗೆ ಎಂ. ಕೆ. ಸ್ಟಾಲಿನ್ ಅವರು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧನ

ಅಕ್ರಮ ಹಣ ವರ್ಗಾವಣೆ ಆರೋಪದಡಿ ವಿದ್ಯುತ್ ಮತ್ತು ಅಬಕಾರಿ ಸಚಿವ ವಿ ಸೆಂಥಿಲ್ ಬಾಲಾಜಿ ಮತ್ತು ಅವರ ಆಪ್ತರ ಮನೆ ಮೇಲೆ ಜಾರಿ ನಿರ್ದೇಶನಾಲಯ ಜೂ.13 ರಂದು ಅಧಿಕಾರಿಗಳು ದಾಳಿ ಮಾಡಿದ್ದರು.  ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ (ಜೂ.14) ಬೆಳಗ್ಗೆ ಸೆಂಥಿಲ್ ಅವರನ್ನು ಬಂಧಿಸಿ, ವೈದ್ಯಕೀಯ ತಪಾಸಣೆಗಾಗಿ ಓಮಂಡೂರರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಿದ್ದರು.

ಇದನ್ನೂ ಓದಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಯ ಬಂಧನಕ್ಕೆ ಕಾರಣವಾದ ಘಟನೆಗಳ ಟೈಮ್‌ಲೈನ್

ಅಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸಚಿವರು ಕುಸಿದುಬಿದ್ದರು. ಅವರನ್ನು ತಕ್ಷಣವೇ ಐಸಿಯುಗೆ ರವಾನಿಸಲಾಯಿತು. ಬಾಲಾಜಿ ಅವರ ಹೃದಯದಲ್ಲಿ ಮೂರು ಬ್ಲಾಕ್‌ಗಳಿದ್ದು, ತಕ್ಷಣದ ಬೈಪಾಸ್ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಆಸ್ಪತ್ರೆ ತಿಳಿಸಿತ್ತು. ಈ ಹಿನ್ನೆಲೆ ಸದ್ಯ ಸೆಂಥಿಲ್ ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಲಾಜಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಎಂಕೆ ಸ್ಟಾಲಿನ್ ಬಿಜೆಪಿ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡು ತಮ್ಮ ಸಚಿವರ ಬಂಧನ ರಾಜಕೀಯ ಪ್ರೇರಿತ ಎಂದಿದ್ದರು.

ಸೆಂಥಿಲ್ ಬಾಲಾಜಿ ಅವರನ್ನು ಟಾರ್ಗೆಟ್ ಮಾಡಿ ಚಿತ್ರಹಿಂಸೆ ನೀಡಲಾಗಿದೆ ಎಂದು ತಮಿಳುನಾಡು ಕಾನೂನು ಸಚಿವ ಎಸ್.ರಘುಪತಿ ಹೇಳಿದ್ದಾರೆ. ಇಡಿ ಅಧಿಕಾರಿಗಳು ಅವರನ್ನು 24 ಗಂಟೆಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದರು. ಇದು ಸಂಪೂರ್ಣ ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ. ಇದಕ್ಕೆ ಇಡಿ ಉತ್ತರ ನೀಡಬೇಕು ಎಂದು ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:32 pm, Fri, 16 June 23