ಪಂಜಾಬ್​​ನ ಶಿವಸೇನಾ ಮುಖಂಡ ಸಂದೀಪ್ ಥಾಪರ್ ಮೇಲೆ ಹಲ್ಲೆ; ಸ್ಥಿತಿ ಗಂಭೀರ

ಶುಕ್ರವಾರ ಮಧ್ಯಾಹ್ನ ಲುಧಿಯಾನ ಸಿವಿಲ್ ಆಸ್ಪತ್ರೆಯ ಹೊರಗಿನ ಜನನಿಬಿಡ ರಸ್ತೆಯಲ್ಲಿ ತನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ನಿಹಾಂಗ್ ಉಡುಪಿನಲ್ಲಿ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಪಂಜಾಬ್​​ನ ಶಿವಸೇನಾ ನಾಯಕ ಸಂದೀಪ್ ಥಾಪರ್ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯ ನೋಡಿದರೆ ಆರೋಪಿಯು ಆಸ್ಪತ್ರೆಯಿಂದ ನಿರ್ಗಮಿಸುವಾಗ ಥಾಪರ್‌ನನ್ನು ಕಾಲ್ನಡಿಗೆಯಲ್ಲಿ ಹಿಂಬಾಲಿಸಿದ್ದಾನೆ.

ಪಂಜಾಬ್​​ನ ಶಿವಸೇನಾ ಮುಖಂಡ ಸಂದೀಪ್ ಥಾಪರ್ ಮೇಲೆ ಹಲ್ಲೆ; ಸ್ಥಿತಿ ಗಂಭೀರ
ಸಂದೀಪ್ ಥಾಪರ್
ರಶ್ಮಿ ಕಲ್ಲಕಟ್ಟ

Updated on: Jul 05, 2024 | 6:27 PM

ಲುಧಿಯಾನ ಜುಲೈ 05: ಭದ್ರತೆಯನ್ನು ಕಡಿಮೆಗೊಳಿಸಿದ ಒಂದು ವಾರದ ನಂತರ, ಪಂಜಾಬ್​​ನ (Punjab) ಶಿವಸೇನಾ (Shivsena) ನಾಯಕ ಸಂದೀಪ್ ಥಾಪರ್ (Sandeep Thapar), ಅಲಿಯಾಸ್ ಗೋರಾ(58) ಅವರು ಶುಕ್ರವಾರ ಮಧ್ಯಾಹ್ನ ಲುಧಿಯಾನ ಸಿವಿಲ್ ಆಸ್ಪತ್ರೆಯ ಹೊರಗಿನ ಜನನಿಬಿಡ ರಸ್ತೆಯಲ್ಲಿ ತನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ನಿಹಾಂಗ್ ಉಡುಪಿನಲ್ಲಿ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯ ನೋಡಿದರೆ ಆರೋಪಿಯು ಆಸ್ಪತ್ರೆಯಿಂದ ನಿರ್ಗಮಿಸುವಾಗ ಥಾಪರ್‌ನನ್ನು ಕಾಲ್ನಡಿಗೆಯಲ್ಲಿ ಹಿಂಬಾಲಿಸಿದ್ದಾನೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಪದೇ ಪದೇ ಹೊಡೆಯಲು ಪ್ರಾರಂಭಿಸಿದ್ದು, ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಿರುವುದು ಕಂಡು ಬಂತು. ಮತ್ತೊಬ್ಬ ನಿಹಾಂಗ್ ಕತ್ತಿಯಿಂದ ದಾಳಿ ಮುಂದುವರಿಸಿದಾಗ ಶಿವಸೇನಾ ಪಂಜಾಬ್ ನಾಯಕ ಸಮತೋಲನ ಕಳೆದುಕೊಂಡು ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಾರೆ. ಅಲ್ಲೇ ಇದ್ದ ಪ್ರಯಾಣಿಕರು ಆಘಾತದಿಂದ ನೋಡುತ್ತಿದ್ದಂತೆ ದಾಳಿಕೋರ ಸ್ಕೂಟರ್​​ನಲ್ಲಿ ಓಡಿ ಪರಾರಿಯಾಗಿದ್ದಾನೆ.

ಥಾಪರ್‌ನ ಏಕಾಂಗಿ ಬಂದೂಕುಧಾರಿ ರಸ್ತೆಬದಿಯಲ್ಲಿ ನಡೆದು ಮೂಕ ಪ್ರೇಕ್ಷಕನಂತೆ ನೋಡುತ್ತಿದ್ದ. ಆತ ಥಾಪರ್ ಅವರನ್ನು ರಕ್ಷಿಸುವುದಾಗಲೀ ಅಥವಾ ದಾಳಿಕೋರರನ್ನು ಬೆನ್ನಟ್ಟುವ ಪ್ರಯತ್ನವನ್ನೂ ಮಾಡಲಿಲ್ಲ.


ಟ್ರಸ್ಟ್‌ನ ಸಂಸ್ಥಾಪಕ-ಅಧ್ಯಕ್ಷ ರವೀಂದರ್ ಅರೋರಾ ಅವರ ನಾಲ್ಕನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಥಾಪರ್ ಅವರು ಸಂವೇದನಾ ಟ್ರಸ್ಟ್ ಎಂಬ ಎನ್‌ಜಿಒ ಕಚೇರಿಯಿಂದ ಸಿವಿಲ್ ಆಸ್ಪತ್ರೆ ಬಳಿ ತೆರಳಿದ ನಂತರ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳು ಗಂಭೀರವಾಗಿ ಗಾಯಗೊಂಡ ನಾಯಕನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಸ್ಥಳೀಯ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು. ಅಪರಿಚಿತ ದಾಳಿಕೋರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಜಸ್ಕಿರಂಜಿತ್ ಸಿಂಗ್ ತೇಜಾ ತಿಳಿಸಿದ್ದಾರೆ.

ಘಟನೆಯ ನಂತರ, ಶಿವಸೇನಾ ಪಂಜಾಬ್ ನಾಯಕರು ಸಿವಿಲ್ ಆಸ್ಪತ್ರೆಯ ಹೊರಗೆ ಜಮಾಯಿಸಿ ಪಂಜಾಬ್ ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಎತ್ತಿದರು. ಶಿವಸೇನಾ ಪಂಜಾಬ್‌ನ ಯುವ ಘಟಕದ ಅಧ್ಯಕ್ಷ ಸುಮಿತ್ ಅರೋರಾ, ಥಾಪರ್‌ಗೆ ಮೂವರು ಬಂದೂಕುಧಾರಿಗಳನ್ನು ಒದಗಿಸಲಾಗಿದೆ ಆದರೆ ಪೊಲೀಸರು ಒಂದು ವಾರದ ಹಿಂದೆ ಅವರ ಭದ್ರತೆಯನ್ನು ಹಿಂತೆಗೆದುಕೊಂಡರು. ನಂತರ, ಬಂದೂಕುಧಾರಿಯ ಸೇವೆಯನ್ನು ಪುನಃಸ್ಥಾಪಿಸಲಾಯಿತು. ಬಂದೂಕುಧಾರಿ ಆರೋಪಿಗಳು ಸುಲಭವಾಗಿ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅರೋರಾ ಆರೋಪಿಸಿದ್ದಾರೆ.

ಹಿಂದೂ ಸಂಘಟನೆಗಳ ಮುಖಂಡರ ಭದ್ರತೆಯ ಬಗ್ಗೆ ಪೊಲೀಸರು ಮತ್ತು ಸರ್ಕಾರ ಗಂಭೀರವಾಗಿಲ್ಲ ಎಂದು ಶಿವಸೇನಾ ಪಂಜಾಬ್ ಅಧ್ಯಕ್ಷ ರಾಜೀವ್ ಟಂಡನ್ ಹೇಳಿದ್ದಾರೆ. “ನಮ್ಮ ನಾಯಕರ ಭದ್ರತೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಅವರು ಇದನ್ನು ಸಾಬೀತುಪಡಿಸಿದ್ದಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ: NEET-UG 2024 ಮರುಪರೀಕ್ಷೆ ಅಗತ್ಯವಿಲ್ಲ, ಪ್ರಾಮಾಣಿಕ ವಿದ್ಯಾರ್ಥಿಗಳ ಮೇಲೆ ಇದು ಪರಿಣಾಮ ಬೀರಲಿದೆ: ಕೇಂದ್ರ ಸರ್ಕಾರ

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಲೂಧಿಯಾನ ಬಿಜೆಪಿ ಅಭ್ಯರ್ಥಿಯಾಗಿದ್ದ ಕೇಂದ್ರ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು, “ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯ ಮೇಲೆ ಇಂತಹ ಕ್ರೂರ ದಾಳಿ ಖಂಡನೀಯ. ಇದು ನಿವಾಸಿಗಳಲ್ಲಿ ಭೀತಿ ಮೂಡಿಸಿದೆ’ ಎಂದರು.
ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವನ್ನು ಗುರಿಯಾಗಿಸಿಕೊಂಡ ಅವರು, ಪಂಜಾಬ್‌ನಿಂದ ಆಡಳಿತವು ಕಾಣೆಯಾಗಿದೆ. ಕಾನೂನು ಸುವ್ಯವಸ್ಥೆ ಇಲ್ಲದಾಗಿದೆ. ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡುವ ಬದಲು ಎಎಪಿ ನಾಯಕರನ್ನು ಸಂತೋಷಪಡಿಸುವಲ್ಲಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us