ವಾಲಿಬಾಲ್ ಆಡುತ್ತಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಬಾಲಕ

ತೆಲಂಗಾಣದ ವನಪರ್ತಿಯಲ್ಲಿ ಶನಿವಾರ ನಡೆದ ಸಿಎಂ ಕಪ್ ಕ್ರೀಡಾಕೂಟದಲ್ಲಿ 10ನೇ ತರಗತಿ ವಿದ್ಯಾರ್ಥಿ ಸಾಯಿ ಪುನೀತ್ (15) ವಾಲಿಬಾಲ್ ಆಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹೃದಯಾಘಾತದಿಂದಾಗಿ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಈ ಘಟನೆಯಿಂದಾಗಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಸರ್ಕಾರದಿಂದ ನೆರವು ನೀಡುವ ಭರವಸೆ ಸಿಕ್ಕಿದೆ.

ವಾಲಿಬಾಲ್ ಆಡುತ್ತಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಬಾಲಕ
ಸಾಂದರ್ಭಿಕ ಚಿತ್ರ

Updated on: Dec 08, 2024 | 8:50 AM

ತೆಲಂಗಾಣ: ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಿಎಂ ಕಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ವಾಲಿಬಾಲ್ ಆಡುವಾಗ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ಈ ಭೀಕರ ಘಟನೆ ಶನಿವಾರ(ಡಿ.07) ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ನಡೆದಿದೆ.

ವನಪರ್ತಿ ಜಿಲ್ಲೆಯಾದ್ಯಂತ ಶನಿವಾರ ಗ್ರಾಮ ಮಟ್ಟದ ಸಿಎಂ ಕ್ರೀಡಾ ಸ್ಪರ್ಧೆಗಳು ಆರಂಭಗೊಂಡಿತ್ತು. ಈ ಸ್ಪರ್ಧೆಗಳ ಅಂಗವಾಗಿ ಪೆದ್ದಮಂದಡಿ ಮಂಡಲದ ಬಲಿಜಪಲ್ಲಿ ಗ್ರಾಮದ ZPHS ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸಿಎಂ ಕಪ್ ಸ್ಪರ್ಧೆಯಲ್ಲಿ ಪಾಮಿರೆಡ್ಡಿಪಲ್ಲಿ ಮುಂದಿರತಾಂಡದ ಸಾಯಿ ಪುನೀತ್ (15) ಭಾಗವಹಿಸಿದ್ದರು. ಪುನೀತ್ ಬಲಿಜಪ್ಪಳ್ಳಿ ಝೆಡ್‌ಪಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ.

ಇದನ್ನೂ ಓದಿ: ವಿಮೆ ಹಣಕ್ಕಾಗಿ ಭಿಕ್ಷುಕನ ಕೊಂದು, ದೇಹದ ಬಳಿ ತನ್ನ ಐಡಿ ಇಟ್ಟ ವ್ಯಕ್ತಿ

ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಪುನೀತ್ ಏಕಾಏಕಿ ಕುಸಿದು ಬಿದಿದ್ದಾನೆ. ಇದನ್ನು ಗಮನಿಸಿದ ಶಾಲಾ ಸಿಬ್ಬಂದಿ ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಆದರೆ ಪುನೀತ್ ಹೃದಯಾಘಾತದಿಂದ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಬೆಂಬಲ ನೀಡುವಂತೆ ವಿದ್ಯಾರ್ಥಿ ಸಂಘಟನೆಗಳು ಜಿಲ್ಲಾ ಕೇಂದ್ರ ಹಾಗೂ ಬಲಿಜಪಲ್ಲಿ ಗ್ರಾಮದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಪ್ರತಿಕ್ರಿಯಿಸಿದ ಶಾಸಕ ಮೇಘಾ ರೆಡ್ಡಿ, ಸರ್ಕಾರದ ವತಿಯಿಂದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆಂದು ವರದಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ