ನೋಟು ರದ್ದತಿ, 370ನೇ ವಿಧಿ ತೆಗೆದುಹಾಕುವುದರಿಂದ ಕಾಶ್ಮೀರದಲ್ಲಿ ಉಗ್ರ ಕೃತ್ಯ ನಿಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ: ರಾಹುಲ್ ಗಾಂಧಿ

Rahul Gandhi ನೋಟು ರದ್ದತಿಯಿಂದ ಅಥವಾ 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಭಯೋತ್ಪಾದನೆಯನ್ನು ನಿಲ್ಲಿಸಲಾಗಿಲ್ಲ. ಕೇಂದ್ರ ಸರ್ಕಾರ ಭದ್ರತೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದ ರಾಹುಲ್ ಗಾಂಧಿ.

ನೋಟು ರದ್ದತಿ, 370ನೇ ವಿಧಿ ತೆಗೆದುಹಾಕುವುದರಿಂದ ಕಾಶ್ಮೀರದಲ್ಲಿ ಉಗ್ರ ಕೃತ್ಯ ನಿಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ: ರಾಹುಲ್ ಗಾಂಧಿ
ರಾಹುಲ್ ಗಾಂಧಿ (ಕೃಪೆ: ಟ್ವಿಟರ್)
Edited By: ರಶ್ಮಿ ಕಲ್ಲಕಟ್ಟ

Updated on: Oct 07, 2021 | 5:09 PM

ದೆಹಲಿ:  ಮೂರು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ನಾಗರಿಕರ ಹತ್ಯೆ ಖಂಡಿಸಿದ ರಾಹುಲ್ ಗಾಂಧಿ (Rahul gandhi) “ಕಾಶ್ಮೀರದಲ್ಲಿ ಹಿಂಸಾಚಾರದ ಘಟನೆಗಳು ಹೆಚ್ಚುತ್ತಿವೆ. ನೋಟು ರದ್ದತಿಯಿಂದ ಅಥವಾ 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಭಯೋತ್ಪಾದನೆಯನ್ನು ನಿಲ್ಲಿಸಲಾಗಿಲ್ಲ. ಕೇಂದ್ರ ಸರ್ಕಾರ ಭದ್ರತೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ನಮ್ಮ ಕಾಶ್ಮೀರಿ ಸಹೋದರ ಸಹೋದರಿಯರ ಮೇಲಿನ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಮೃತರ ಕುಟುಂಬಗಳಿಗೆ ನಮ್ಮ ಸಂತಾಪ ಸೂಚಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.


ಗುರುವಾರ ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಭಯೋತ್ಪಾದಕರು ಮಹಿಳೆ ಸೇರಿದಂತೆ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು ಗುಂಡಿಕ್ಕಿ ಕೊಂದಿದ್ದಾರೆ. “ಶ್ರೀನಗರ ಜಿಲ್ಲೆಯ ಸಂಗಮ್ ಈದ್ಗಾ ಪ್ರದೇಶದಲ್ಲಿ ಬೆಳಗ್ಗೆ 11.15 ರ ಸುಮಾರಿಗೆ ಇಬ್ಬರು ಶಿಕ್ಷಕರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರೀನಗರದ ಹೊರವಲಯದಲ್ಲಿರುವ ಶಾಲೆಯ ಆವರಣದಲ್ಲಿ ಮಹಿಳಾ ಪ್ರಾಂಶುಪಾಲರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಇನ್ನಿಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ  ಎಂದು ಅಧಿಕಾರಿಗಳು ತಿಳಿಸಿರುವುದಾಗಿ ದಿ ವೈರ್ ವರದಿ ಮಾಡಿದೆ

ಶ್ರೀನಗರದ ಈದ್ಗಾ ಪ್ರದೇಶದ ಸರ್ಕಾರಿ ಬಾಯ್ಸ್ ಹೈಯರ್ ಸೆಕೆಂಡರಿ ಶಾಲೆಯ ಮೇಲೆ ದಾಳಿ ನಡೆದಿದ್ದು, ಕೇವಲ 36 ಗಂಟೆಗಳ ನಂತರ ಮೂವರು ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದು ಮಾಡಿದ್ದಾರೆ. ಮೃತರನ್ನು ಘಟನೆ ನಡೆದ ಶ್ರೀನಗರ ಪೇಟೆಯಲ್ಲಿ ಶಾಲೆಯ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದ ಸಿಖ್ ಸುಪಿಂದರ್ ಕೌರ್ ಮತ್ತು ಅಲ್ಲಿ ಶಿಕ್ಷಕರಾಗಿದ್ದ ಕಾಶ್ಮೀರ ಪಂಡಿತ ದೀಪಕ್ ಚಂದ್ ಎಂದು ಗುರುತಿಸಲಾಗಿದೆ.

ಶಾಲೆಯ ಸಿಬ್ಬಂದಿ ಪ್ರಕಾರ  ಬೆಳಗ್ಗೆ 11 ರ ಸುಮಾರಿಗೆ ಗುಂಡು ಹಾರಿಸಲಾಯಿತು. ಮೂವರು ಶಸ್ತ್ರಸಜ್ಜಿತ ದಾಳಿಕೋರರು ಶಾಲೆಗೆ ಬಂದರು ಮತ್ತು ಕಾರಿಡಾರ್‌ನಲ್ಲಿ ಅಡ್ಡಾಡುತ್ತಿದ್ದ ಸಿಬ್ಬಂದಿಯನ್ನು ಪ್ರಿನ್ಸಿಪಾಲ್ ಕೊಠಡಿಯೊಳಗೆ ಹೋಗುವಂತೆ ಕೇಳಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮಂಗಳವಾರ ಮುಂಜಾನೆ,ಸುಮಾರು ಒಂದೂವರೆ ಗಂಟೆಗಳಲ್ಲಿ ಮೂರು ಜನರನ್ನು ಉಗ್ರರು ಹತ್ಯೆ ಮಾಡಿದ್ದರು. ಕಾಶ್ಮೀರಿ ಪಂಡಿತ್ ಮಖನ್ ಲಾಲ್ ಬಿಂದ್ರೂ ಅವರನ್ನು ಶ್ರೀನಗರದ ಮೆಡಿಕಲ್ ಸ್ಟೋರ್ ಮುಂಕೆಉಗ್ರರು ಗುಂಡಿಕ್ಕಿ ಕೊಂದರು. 1990 ರಲ್ಲಿ ಉಗ್ರರ ಅಟ್ಟಹಾಸ ಆರಂಭವಾದ ನಂತರ ಕಾಶ್ಮೀರವನ್ನು ತೊರೆಯದ ಕಾಶ್ಮೀರಿಪಂಡಿತರಲ್ಲಿ ಬಿಂದ್ರೂ ಒಬ್ಬರು.

ಬಿಂದ್ರು ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ, ಶ್ರೀನಗರದ ಹವಾಲ್ ಚೌಕ್ ಬಳಿ ಬಿಹಾರದ ಭಾಗಲ್ಪುರ್ ನಿವಾಸಿ ವೀರೇಂದ್ರ ಪಾಸ್ವಾನ್ ಎಂಬ ರಸ್ತೆಬದಿಯ ಮಾರಾಟಗಾರನ್ನು ಉಗ್ರರು ಹತ್ಯೆ ಮಾಡಿದರು. ಇದಾದ ನಂತರ ಉಗ್ರರು ಮೊಹಮ್ಮದ್ ಶಾಫಿ ಲೋನ್ ನನ್ನು ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ನೈದ್‌ಖೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಇದನ್ನೂ ಓದಿ: ಧೈರ್ಯ ಇದ್ದರೆ ನನ್ನ ಮುಂದೆ ಬನ್ನಿ, ಚರ್ಚಿಸೋಣ; ಉಗ್ರರಿಗೆ ಸವಾಲು ಹಾಕಿದ ಶ್ರದ್ಧಾ ಬಿಂದ್ರೂ

Web contact

TV9 Kannada

Read More
Follow Us