Two Years of Pulwama Attack | ಪುಲ್ವಾಮಾ ದಾಳಿ ಕರಾಳ ದಿನಕ್ಕೆ 2 ವರ್ಷ.. ಅಂದು ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಸಲಾಂ

|

Updated on: Feb 14, 2021 | 9:26 AM

2019 Pulwama Terror Attack |ಇವತ್ತಿಗೆ ಎರಡು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ನಡೆದ ಆತ್ಮಹತ್ಯಾ ಬಾಂಬರ್ ದಾಳಿಗೆ ಇಡೀ ಭಾರತವೇ ಬೆಚ್ಚಿ ಬಿದ್ದಿತ್ತು. ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿ ಭಾರತೀಯ ಸೇನೆಯ ದಂಡು ವಾಹನಗಳ ಮೇಲೆ ನಡೆದ ದಾಳಿ ಅತ್ಯಂತ ಹೇಯ ಕೃತ್ಯ. ಇದರಲ್ಲಿ ನಮ್ಮ ದೇಶದ 40 ಹೆಮ್ಮೆಯ ಯೋಧರು ಹುತಾತ್ಮರಾಗಿದ್ರು. 2 ವರ್ಷ ಕಳೆದ್ರೂ, ಇಂದಿಗೂ ಭಾರತೀಯರು ಆ ದಾಳಿಯನ್ನ ಮರೆಯಲು ಸಾಧ್ಯವಾಗಿಲ್ಲ.

Two Years of Pulwama Attack | ಪುಲ್ವಾಮಾ ದಾಳಿ ಕರಾಳ ದಿನಕ್ಕೆ 2 ವರ್ಷ.. ಅಂದು ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಸಲಾಂ
2019ರಲ್ಲಿ ನಡೆದ ಪುಲ್ವಾಮಾ ದಾಳಿಯ ದೃಶ್ಯ
Follow us on

ಫೆಬ್ರವರಿ 14, 2019. ಅಂದ್ರೆ ಇಂದಿಗೆ ಎರಡು ವರ್ಷಗಳ ಹಿಂದೆ ಇಡೀ ದೇಶ ಪ್ರೇಮಿಗಳ ದಿನದ ಸಂಭ್ರಮದಲ್ಲಿ ತೇಲುತ್ತಿದ್ರೆ. ಅದೆಲ್ಲಿಂದಲೋ ಒಂದು ಬರ ಸಿಡಿಲು ಬಂದೆರಗಿತ್ತು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೇ ಮೊಹಮ್ಮದ್​ಗೆ ಸೇರಿದ್ದ ಅದಿಲ್ ಅಹ್ಮದ್ ದಾರ್ ಅನ್ನೋ ದುರುಳ ಸಿಆರ್​ಪಿಎಫ್​ ಯೋಧರು ಸಂಚರಿಸುತ್ತಿದ್ದ ಬಸ್​ಗೆ ಆರ್​ಡಿಎಕ್ಸ್ ತುಂಬಿದ್ದ ಕಾರನ್ನ ಡಿಕ್ಕಿ ಹೊಡೆಸಿದ್ದ. ಯಾವಾಗ ಎರಡು ವಾಹನಗಳು ಡಿಕ್ಕಿಯಾದ್ವೋ. ಅಲ್ಲಿಗೆ 40 ಯೋಧರು ಕ್ಷಣಾರ್ಧದಲ್ಲಿ ಹುತಾತ್ಮರಾಗಿದ್ರು. ಅಂದು ನಡೆದ ಆತ್ಮಹತ್ಯಾ ಬಾಂಬರ್ ದಾಳಿ ಜಮ್ಮು-ಕಾಶ್ಮೀರದಲ್ಲಿ ಇದುವರೆಗೆ ಭಾರತೀಯ ಸೇನೆಯ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಯಾಗಿದೆ.

ದಾಳಿಯಲ್ಲಿ ಮಂಡ್ಯದ ಮಣ್ಣಿನ ಮಗ ಗುರು ಹುತಾತ್ಮ
ಇವತ್ತಿಗೆ ಎರಡು ವರ್ಷಗಳ ಹಿಂದೆ ನಡೆದ ದಾಳಿಯಲ್ಲಿ ನಮ್ಮ ಕರ್ನಾಟಕದ ಒಬ್ಬ ಯೋಧ ಕೂಡ ಹುತಾತ್ಮನಾಗಿದ್ದ. ಆತ ಬೇರಾರು ಅಲ್ಲ ಮಂಡ್ಯದ ಮಣ್ಣಿನ ಮಗ ಗುರು. ಅಂದು ಜಮ್ಮುವಿನಿಂದ ಶ್ರೀನಗರದ ಕಡೆ 78 ಬಸ್​ಗಳಲ್ಲಿ 2,500 ಜನ ಸಿಆರ್​ಪಿಎಫ್ ಯೋಧರು ತೆರಳುತ್ತಿದ್ರು. ಜಮ್ಮು-ಕಾಶ್ಮೀರದ ಜನ ನೆಮ್ಮದಿಯಿಂದ ಇರಲು ಇವರ ಕಾರ್ಯ ಅನಿವಾರ್ಯ. ಹೀಗಾಗಿ ಇವರೆಲ್ಲ ತಮಗೆ ವಹಿಸಿದ್ದ ಕಾರ್ಯ ನಿರ್ವಹಿಸಲು ತೆರಳುತ್ತಿದ್ದ ವೇಳೆ ನಡೆದ ಅತ್ಯಂತ ಘನಘೋರ ದಾಳಿ ನಡೆದು ಹೋಗಿತ್ತು.

ಇಂದಿಗೂ ಸಹ ಗಡಿಯಲ್ಲಿ ಇಂತಹ ಲಕ್ಷಾಂತರ ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ಹಗರಲಿರುಳು ಶ್ರಮಿಸುತ್ತಿದ್ದಾರೆ. ಈ ದಿನದಂದು ಅವರನ್ನ ನೆನೆಯದೇ ಇದ್ರೆ, ನಾವು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಿಲ್ಲ ಅನ್ನೋದನ್ನ ಭಾರತೀಯರು ಎಂದಿಗೂ ಮರೆಯಬಾರದು.

ಇದನ್ನೂ ಓದಿ: ಪುಲ್ವಾಮಾ ದಾಳಿ ಕರಾಳ ದಿನಕ್ಕೆ 1 ವರ್ಷ, ಅನಾವರಣಗೊಳ್ಳಲಿದೆ ಹುತಾತ್ಮ ಯೋಧರ ಸ್ಮಾರಕ