ಚಲಿಸುತ್ತಿದ್ದ ರೈಲಿನ ಅರ್ಧದಷ್ಟು ಬೋಗಿಗಳು ಮಾರ್ಗ ಮಧ್ಯದಲ್ಲಿ ನಾಪತ್ತೆ

ಉತ್ತರ ಪ್ರದೇಶದ ಫಿರೋಜ್‌ಪುರದಿಂದ ಧನ್‌ಬಾದ್‌ಗೆ ಹೋಗುವ ಕಿಸಾನ್ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಕಡಿತಗೊಂಡ ಕಾರಣ ಎರಡು ಭಾಗಗಳಾಗಿ ವಿಭಜನೆಯಾಗಿತ್ತು. ಎಂಜಿನ್‌ಗೆ ಜೋಡಿಸಲಾದ ಭಾಗವು ಎಂಜಿನ್‌ನೊಂದಿಗೆ ಮುಂದೆ ಹೋಗಿದೆ, ಆದರೆ ಹಿಂದಿನ ಎಂಟು ಬೋಗಿಗಳು ರೈಲ್ವೆ ಹಳಿಯಲ್ಲಿ ಸ್ವಲ್ಪ ದೂರ ಓಡಿದ ನಂತರ ನಿಂತಿದ್ದವು.

ಚಲಿಸುತ್ತಿದ್ದ ರೈಲಿನ ಅರ್ಧದಷ್ಟು ಬೋಗಿಗಳು ಮಾರ್ಗ ಮಧ್ಯದಲ್ಲಿ ನಾಪತ್ತೆ
ರೈಲು

Updated on: Aug 25, 2024 | 9:53 AM

ಚಲಿಸುತ್ತಿದ್ದ ರೈಲಿನ ಅರ್ಧದಷ್ಟು ಬೋಗಿಗಳು ಮಾರ್ಗಮಧ್ಯದಲ್ಲಿ ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ನಡೆದಿದೆ. ಫಿರೋಜ್​ಪುರದಿಂದ ಧನ್​ಬಾದ್​ಗೆ ಹೋಗುತ್ತಿದ್ದ ಕಿಸಾನ್ ಎಕ್ಸ್​ಪ್ರೆಸ್​ ರೈಲು ಸಂಪರ್ಕ ಕಡಿತಗೊಂಡಿದ್ದರಿಂದ ಎರಡು ಭಾಗಗಳಾಗಿ ವಿಂಗಡಣೆಗೊಂಡಿತ್ತು.

ಎಂಜಿನ್​ಗೆ ಸಂಪರ್ಕಗೊಂಡಿದ್ದ ಭಾಗವು ಎಂಜಿನೊಂದಿಗೆ ಮುಂದೆ ಹೋದರೆ ಇನ್ನರ್ಧ ಭಾಗವು ರೈಲ್ವೆ ಹಳಿ ಮೇಲೆ ಸ್ವಲ್ಪ ದೂರ ಓಡಿ ಬಳಿಕ ನಿಂತಿದ್ದವು. 8 ಬೋಗಿಗಳು ನಾಪತ್ತೆಯಾಗಿದ್ದವು. ರೈಲ್ವೆ ನಿಲ್ದಾಣಕ್ಕೆ ರೈಲು ಬಂದ ನಂತರ ಈ ಬಗ್ಗೆ ಮಾಹಿತಿ ಸಿಕ್ಕಿತ್ತು, ಈ ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ, ಸ್ಥಳಕ್ಕಾಗಮಿಸಿರುವ ರೈಲ್ವೆ ಅಧಿಕಾರಿಗಳು ರೈಲಿನ ಎರಡೂ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಯತ್ನ ಆರಂಭಿಸಿದ್ದಾರೆ. ಈ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಘಟನೆ ವೇಳೆ ರೈಲಿನ ವೇಗ 80.ಕಿ.ಮೀಗಿಂತಲೂ ಹೆಚ್ಚಿತ್ತು.

ಮೊರಾದಾಬಾದ್​ನ ಮುಂದೆ ಸಿಯೋಹರಾ ಹಾಗೂ ಧಂಪುರ್ ನಿಲ್ದಾಣಗಳ ನಡುವೆ ಅಪಘಾತ ಸಂಭವಿಸಿದೆ. ಚಕ್ರಮಲ್ ಗ್ರಾಮದ ಬಳಿ ಎಸ್​3 ಮತ್ತು ಎಸ್​4 ಬೋಗಿಗೆ ಸಂಪರ್ಕ ಕಲ್ಪಿಸುವ ಬೋಗಿಯ ಜೋಡಣೆ ಮುರಿದುಬಿದ್ದಿತ್ತು. ಈ ಕಾರಣದಿಂದಾಗಿ ಎಂಜಿನ್​ 13 ಬೋಗಿಗಳನ್ನು ಹೊತ್ತು 4 ಕಿ.ಮೀ ಮುಂದಕ್ಕೆ ಚಲಿಸಿತು. 8 ಬೋಗಿಗಳ ಹಿಂದೆ ಉಳಿದಿದ್ದವು.

ಮತ್ತಷ್ಟು ಓದಿ: Train Accident: ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, 8 ಮಂದಿ ಸಾವು, 30 ಜನರಿಗೆ ಗಾಯ

ಪೊಲೀಸ್​ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಅನೇಕ ಅಭ್ಯರ್ಥಿಗಳು ಈ ರೈಲಿನಲ್ಲಿ ಕುಳಿತಿದ್ದರು. ಪೊಲೀಸರು ಮತ್ತು ಆಡಳಿತ ಮಂಡಳಿ ತರಾತುರಿಯಲ್ಲಿ ಬಸ್ ಹಾಗೀ ಇತರೆ ಮಾರ್ಗಗಳ ಮೂಲಕ ಅವರೆಲ್ಲರನ್ನೂ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದರು.

ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕಿಸಾನ್ ರೈಲಿನ ಹಿಂದೆ ಬೇರೆ ಯಾವುದೇ ರೈಲು ಬರದಿರುವುದು ಅದೃಷ್ಟ, ಇಲ್ಲದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.ಈ ರೈಲಿನಲ್ಲಿ ಒಟ್ಟು 22 ಬೋಗಿಗಳಿದ್ದು, ಈ ಪೈಕಿ 8 ಬೋಗಿಗಳು ಸಂಪರ್ಕ ಕಳೆದುಕೊಂಡಿದ್ದವು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us