ಕಾನ್ಪುರ: ಹೆದ್ದಾರಿಯಲ್ಲಿ ಮಹಿಳೆಯ ರುಂಡವಿಲ್ಲದ ಬೆತ್ತಲೆ ದೇಹ ಪತ್ತೆ

ಉತ್ತರ ಪ್ರದೇಶದ ಹೆದ್ದಾರಿಯೊಂದರಲ್ಲಿ ಮಹಿಳೆಯ ಬೆತ್ತಲೆ ಶವ ಪತ್ತೆಯಾಗಿದ್ದು, ಆತಂಕವನ್ನು ಹೆಚ್ಚಿಸಿದೆ. ಮಹಿಳೆಯ ಮೇಲಿನ ದ್ವೇಷಕ್ಕೆ ಕೊಲೆ ಮಾಡಿದ್ದಾರೋ ಅಥವಾ ಇನ್ಯಾವುದೇ ಕಾರಣಕ್ಕೆ ಹತ್ಯೆಯಾಗಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಕಾನ್ಪುರ: ಹೆದ್ದಾರಿಯಲ್ಲಿ ಮಹಿಳೆಯ ರುಂಡವಿಲ್ಲದ ಬೆತ್ತಲೆ ದೇಹ ಪತ್ತೆ
ಪೊಲೀಸ್
Image Credit source: ABP Live

Updated on: Sep 12, 2024 | 12:15 PM

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಉತ್ತರ ಪ್ರದೇಶದ ಕಾನ್ಪುರದ ಗುಜ್ಜೈನಿ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯ ರುಂಡವಿಲ್ಲದ ಬೆತ್ತಲೆ ಶವ ಪತ್ತೆಯಾಗಿದೆ. ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಘಟನೆ ನಡೆದು 24 ಗಂಟೆ ಕಳೆದಿದ್ದರೂ ಪೊಲೀಸರಿಗೆ ಮಹಿಳೆಯರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಮಹಿಳೆಯ ಗುರುತನ್ನು ಪತ್ತೆ ಹಚ್ಚಲು ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿಯನ್ನು  ಪರಿಶೀಲಿಸಿದ್ದಾರೆ.  ಅಲ್ಲೇ ಆಸ್ಪತ್ರೆಯೊಂದರ ಸಿಸಿಟಿವಿಯಲ್ಲಿ ಬಿಳಿ, ಬೂದು ಬಣ್ಣದ ಪ್ಯಾಂಟ್​ ಧರಿಸುವ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆ ಶವದ ಬಳಿಯೂ ಅದೇ ಮಾದರಿಯ ಬಟ್ಟೆ ಚೂರುಗಳು ಪತ್ತೆಯಾಗಿವೆ.

ಬುಧವಾರ ಬೆಳಗ್ಗೆ 6.15ರ ಸುಮಾರಿಗೆ ಶವ ಪತ್ತೆಯಾಗಿದೆ, ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮರಾಗಳಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: ಇಬ್ಬರು ಸೇನಾಧಿಕಾರಿಗಳನ್ನು ಥಳಿಸಿ ಅವರ ಸ್ನೇಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಆದರೆ ಸುಮಾರು 3 ಕಿ.ಮೀ ದೂರದಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಮಹಿಳೆಯೊಬ್ಬರು ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಮಹಿಳೆ ಧರಿಸಿರುವ ಬಟ್ಟೆಗಳು ಹೆದ್ದಾರಿಯಲ್ಲಿ ಕಂಡು ಬಂದಿರುವ ಬಟ್ಟೆಯ ತುಂಡುಗಳು ಮತ್ತು ಚಪ್ಪಲಿಗಳಿಗೆ ಹೊಂದಿಕೆಯಾಗುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡುತ್ತಿದ್ದು, ಹೆಚ್ಚಿನ ಸುಳಿವು ಸಿಗುವ ನಿರೀಕ್ಷೆ ಇದೆ.
ಸಾವಿಗೆ ಕಾರಣವನ್ನು ಖಚಿತಪಡಿಸಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಯಾರೂ ದೂರು ನೀಡಿಲ್ಲ.

ಈ ದೇಹ ಯಾರದ್ದು, ಹೇಗೆ ರಸ್ತೆಯ ಮಧ್ಯಭಾಗ ತಲುಪಿತು ಎಂಬುದು ಯಾರಿಗೂ ತಿಳಿದಿಲ್ಲ. ಮೃತದೇಹವನ್ನು ನೋಡಿದರೆ ಯಾರೋ ಕೊಲೆ ಮಾಡಿ ಮೃತದೇಹದಿಂದ ತಲೆಯನ್ನು ಕತ್ತರಿಸಿ ರಸ್ತೆಗೆ ಎಸೆದಿದ್ದಾರೆ ಎಂದು ಊಹಿಸಬಹುದು, ಆದರೆ ಯಾರೋ ಒಬ್ಬರು ಶವವನ್ನು ಎಸೆಯುವುದನ್ನು ನೋಡಿಲ್ಲ ಅಥವಾ ಈ ಮಹಿಳೆ ಯಾರೆಂದು ಗುರುತಿಸಲಾಗಿಲ್ಲ.

ಆಕೆ ಸ್ಥಳೀಯ ನಿವಾಸಿಯೇ ಅಥವಾ ಬೇರೆ ಕಡೆಯಿಂದ ಬಂದವಳೇ ಎಂದು ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ. ಎಸ್​ಪಿ ಮುಖ್ಯಸ್ಥ ಅಖಿಲೇಶ್​ ಯಾದವ್ ಕೂಡ ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 12:13 pm, Thu, 12 September 24

Loading...
Unable to load recommendations.
Follow Us