
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಒಂದು ತಿಂಗಳು ಪೂರೈಸುತ್ತಾ ಬಂದಿದೆ. ಸರ್ಕಾರ ಈಗಾಗಲೇ ಕೆಲ ಸುತ್ತಿನ ಮಾತುಕತೆ ನಡೆಸಿದರೂ ಅದು ಫಲ ಕೊಡಲಿಲ್ಲ. ಈ ಬೆನ್ನಲ್ಲೇ ಪ್ರತಿಭಟನಾ ರೈತರು, ಸರ್ಕಾರ ಮುಕ್ತ ಮನಸ್ಸಿನಿಂದ ಬಂದರೆ ನಾವು ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.
ರೈತ ಸಂಘಟನೆಗಳು ಸರ್ಕಾರದ ಜೊತೆ ಮಾತನಾಡಲು ಸಿದ್ಧವಿವೆ. ಆದರೆ, ಸರ್ಕಾರ ಮಾತುಕತೆಗೆ ಮುಕ್ತ ಮನಸ್ಸಿನಿಂದ ಬರಬೇಕು. ಈ ಮೊದಲು ಇಟ್ಟು ಬೇಡಿಕೆಗಳನ್ನೇ ನಮ್ಮ ಮುಂದೆ ಇಡಬಾರದು. ನಾವು ಒಪ್ಪ ಬಹುದಾದ ಬೇಡಿಕೆ ನಮ್ಮ ಮುಂದಿಟ್ಟರೆ ನಾವು ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಪ್ರತಿಭಟನೆಯಲ್ಲಿ ತೊಡಗಿರುವ ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಮತ್ತೊಂದು ಪ್ರತಿಭಟನಾ ನಿರತ ಗುಂಪಿನ ರೈತ ಶಿವಕುಮಾರ್ ಕಕ್ಕ ಮಾತನಾಡಿ, ಪ್ರತಿಭಟನಾ ರೈತರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಎಂದಿಗೂ ಒಪ್ಪುವುದಿಲ್ಲ. ಅದನ್ನು ಕೈ ಬಿಡುವ ನಿರ್ಧಾರಕ್ಕೆ ಸರ್ಕಾರ ಬರಬೇಕು. ರೈತರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕಿದೆ ಎಂದು ಹೇಳಿದರು.
ಕಳೆದ ಮೂರುವಾರಗಳಿಂದ ದೆಹಲಿ ಹೊರಭಾಗದಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಅನುಮೋದಿಸಿರುವ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈ ಮೊದಲಿನಿಂದಲೂ ಕೇಳಿಕೊಳ್ಳುತ್ತಾ ಬರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
‘ಮೋದಿ ಮಧ್ಯಸ್ಥಿಕೆ ವಹಿಸಿದರೆ ರೈತರ ಪ್ರತಿಭಟನೆಗೆ ನಿಮಿಷದೊಳಗೆ ಅಂತ್ಯ ಹಾಡಬಹುದು’
Published On - 8:42 pm, Wed, 23 December 20