ವಿಶ್ವ ಆರೋಗ್ಯ ಸಂಸ್ಥೆಯ ವರದಿಗೆ ಡಾ. ಎನ್​.ಕೆ.ಅರೋರಾ ಆಕ್ಷೇಪ; ಅಂಕಿ-ಅಂಶಗಳ ಸಮೇತ ವಿವರಣೆ

| Updated By: Lakshmi Hegde

Updated on: May 06, 2022 | 11:49 AM

ಈಗ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಗೂ, ಕೇಂದ್ರದ ವರದಿಗೂ ತಾಳೆಯಾಗುತ್ತಿಲ್ಲ ಎಂದಮೇಲೆ, ರಾಜ್ಯಗಳೇನಾದರೂ ತಮ್ಮಲ್ಲಿ ಸಂಭವಿಸಿದ ಕೊವಿಡ್​ 19 ಸಾವುಗಳನ್ನು ನಿಖರವಾಗಿ ಕೇಂದ್ರಕ್ಕೆ ವರದಿ ಮಾಡಲು ವಿಫಲವಾಗಿರಬಹುದಾ?

ವಿಶ್ವ ಆರೋಗ್ಯ ಸಂಸ್ಥೆಯ ವರದಿಗೆ ಡಾ. ಎನ್​.ಕೆ.ಅರೋರಾ ಆಕ್ಷೇಪ; ಅಂಕಿ-ಅಂಶಗಳ ಸಮೇತ ವಿವರಣೆ
ಎನ್​.ಕೆ.ಅರೋರಾ
Follow us on

ಭಾರತದಲ್ಲಿ 4.7 ಮಿಲಿಯನ್​  ಹೆಚ್ಚುವರಿ ಕೊವಿಡ್​ 19 ಸಾವುಗಳು ಉಂಟಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿದ ವರದಿಯಲ್ಲಿ ತರ್ಕವೂ ಇಲ್ಲ, ಸತ್ಯವೂ ಇಲ್ಲ. ಹಾಗೇ ಈ ವರದಿ ಆತಂಕಕಾರಿಯಾಗಿದೆ ಎಂದು ದೇಶದ ಕೊವಿಡ್​ 19 ಕಾರ್ಯಕಾರಿ ಗುಂಪಿನ ಮುಖ್ಯಸ್ಥ ಎನ್​ . ಕೆ.ಅರೋರಾ ತಿಳಿಸಿದ್ದಾರೆ.  ಭಾರತದಲ್ಲಿ ಮರಣ ನೋಂದಣಿ ವ್ಯವಸ್ಥೆ ಅತ್ಯಂತ ಸ್ಪಷ್ಟವಾಗಿ ಮತ್ತು ನಿಖರವಾಗಿಯೇ ಇರುತ್ತದೆ. (ಭಾರತದಲ್ಲಿ ಮರಣ ನೋಂದಣಿ ವ್ಯವಸ್ಥೆಯನ್ನು ನಾಗರಿಕ ನೋಂದಣಿ ವ್ಯವಸ್ಥೆ ಅಥವಾ ಸಿಆರ್​ಎಸ್​ ಎಂದು ಕರೆಯಲಾಗುತ್ತದೆ). ಕೊವಿಡ್​ 19ನಿಂದ ಉಂಟಾದ ಮರಣಗಳ ಸಂಖ್ಯೆಯನ್ನು ನಾವು ಸರಿಯಾಗಿಯೇ ನೋಂದಾಯಿಸಿದ್ದೇವೆ. ಶೇ.15-20ರಷ್ಟು ವ್ಯತ್ಯಾಸ ಇರಬಹುದೇ ಹೊರತು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಅಂಕಿ-ಸಂಖ್ಯೆಯಷ್ಟೆಲ್ಲ ಸಾವು ಆಗಿಲ್ಲ ಎಂದು ಅರೋರಾ ಹೇಳಿದ್ದಾಗಿ ಎನ್​ಡಿಟಿವಿ ವರದಿ  ಮಾಡಿದೆ. 

2017ರಲ್ಲಿ ಸಿಆರ್​ಎಸ್​ ಮೂಲಕ ಎಷ್ಟು ಪ್ರಮಾಣದ ಮರಣ ನೋಂದಣಿ ಮಾಡಲಾಗಿತ್ತೋ, ಅದಕ್ಕಿಂತಲೂ 2018ರಲ್ಲಿ 5 ಲಕ್ಷ ಹೆಚ್ಚು ಜನರು ಮರಣಪಟ್ಟಿದ್ದರು. ಹಾಗೇ 2018ರಲ್ಲಿ ಒಟ್ಟಾರೆ ಮರಣದ ಅಂಕಿಸಂಖ್ಯೆ ಎಷ್ಟಿತ್ತೋ  ಅದಕ್ಕಿಂತಲೂ ಏಳು ಲಕ್ಷ ಹೆಚ್ಚು 2019ರಲ್ಲಿ ದಾಖಲಾಯಿತು. ಹಾಗೇ 2020ರಲ್ಲಿ ಮತ್ತೆ 5 ಲಕ್ಷ ಹೆಚ್ಚು ಸಾವಿನ ಸಂಖ್ಯೆ ರಿಜಿಸ್ಟರ್​ ಆಯಿತು. ಇದರ ಅರ್ಥ ಸರಳವಾಗಿದೆ. ನಾವೂ ಸಹ ಕೊವಿಡ್​ 19 ಸೋಂಕಿನಿಂದಾದ ಸಾವಿನ ಸಂಖ್ಯೆಯನ್ನು ಸರಿಯಾಗಿಯೇ ನೋಂದಣಿ ಮಾಡುತ್ತಿದ್ದೇವೆ. ಸಿಆರ್​ಎಸ್​ ವ್ಯವಸ್ಥೆ ತುಂಬ ನಿಖರವಾಗಿದ್ದು, ವರ್ಷದಿಂದ ವರ್ಷಕ್ಕೆ ಈ ವ್ಯವಸ್ಥೆಯಲ್ಲಿ ಕೂಡ ಹೆಚ್ಚಿನ ಸುಧಾರಣೆ ಮಾಡಲಾಗುತ್ತಿದೆ. ಸಾವಿನ ನೋಂದಣಿ ವ್ಯವಸ್ಥೆಯಾದ ಸಿಆರ್​ಎಸ್​​ ಈಗ ಶೇ.98-99ರಷ್ಟು ನಿರೀಕ್ಷಿತ ಸಾವುಗಳ ಅಂಕಿ-ಸಂಖ್ಯೆಯನ್ನು ಒಳಗೊಂಡಿದೆ ಎಂದೂ ಅವರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಅಸಂಬದ್ಧವಾಗಿದ್ದು, ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಎನ್​.ಕೆ.ಅರೋರಾ. 208ರಲ್ಲಿ ಶೇ.85-88ರಷ್ಟು ಸಾವುಗಳನ್ನು ಕವರ್​ ಮಾಡಿದ್ದೇವೆ. 2020ರಲ್ಲಿ ಸಿಆರ್​ಎಸ್​ ಶೇ.98-99ರಷ್ಟು ಸಾವುಗಳ ಸಂಖ್ಯೆಯನ್ನು ನೋಂದಾಯಿಸಿದೆ. 2018 ಮತ್ತು2019ರಲ್ಲಿ 7 ಲಕ್ಷ ಸಾವುಗಳು ಹೆಚ್ಚುವರಿಯಾಗಿ ಉಂಟಾಗಿವೆ. ಅವುಗಳನ್ನೆಲ್ಲ ಕೊವಿಡ್​ 19 ನಿಂದಲೇ ಆದ ಸಾವು ಎನ್ನಲಾಗುತ್ತದೆಯೇ? ಯಾಕೆಂದರೆ 2018ರಲ್ಲಿ ಮತ್ತು 2019ರಲ್ಲಿ ಕೊನೇವರೆಗೆ ಕೊವಿಡ್​ 19 ಸೋಂಕು ಎಂಬುದೇ ಇರಲಿಲ್ಲ ಎಂದೂ ಅರೋರಾ ತಿಳಿಸಿದ್ದಾರೆ.

ಈಗ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಗೂ, ಕೇಂದ್ರದ ವರದಿಗೂ ತಾಳೆಯಾಗುತ್ತಿಲ್ಲ ಎಂದಮೇಲೆ, ರಾಜ್ಯಗಳೇನಾದರೂ ತಮ್ಮಲ್ಲಿ ಸಂಭವಿಸಿದ ಕೊವಿಡ್​ 19 ಸಾವುಗಳನ್ನು ನಿಖರವಾಗಿ ಕೇಂದ್ರಕ್ಕೆ ವರದಿ ಮಾಡಲು ವಿಫಲವಾಗಿರಬಹುದಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,  ಮೊದಮೊದಲು ರಾಜ್ಯಗಳು ತಮ್ಮಲ್ಲಿನ ಕೊವಿಡ್​ 19 ಸೋಂಕಿನ ಪ್ರಕರಣಗಳು, ಸಾವಿನ ಸಂಖ್ಯೆಯನ್ನು ಕೇಂದ್ರಕ್ಕೆ ವರದಿ ನೀಡುವ ಪ್ರಕ್ರಿಯೆ ಮಂದಗತಿಯಲ್ಲಿ ಇತ್ತು. ಆದರೆ ಈ ವಿಚಾರದಲ್ಲಿ ಸುಪ್ರೀಂಕೋರ್ಟ್​ ಹಸ್ತಕ್ಷೇಪ ಮಾಡಿ, ಆದೇಶ ಹೊರಡಿಸಿದ ಮೇಲೆ ರಾಜ್ಯಗಳು ಸರಿಪಡಿಸಿಕೊಂಡಿವೆ. ಹಿಂದೆ ನೋಂದಣಿಗೆ ಸಿಗದ ಸಾವುಗಳನ್ನೂ ಬಳಿಕ ನೋಂದಾಯಿಸಿ ಅದೇ ವರದಿಯನ್ನು ಕೇಂದ್ರಕ್ಕೆ ನೀಡಿವೆ. ಈಗಾಗಲೇ ಹಲವು ಬಾರಿ ಕೇರಳ ಸೇರಿ ಇನ್ನೂ ಕೆಲವು ರಾಜ್ಯಗಳು ಹೆಚ್ಚುವರಿ ಸಾವಿನ ಸಂಖ್ಯೆಯನ್ನು ನೀಡಿವೆ. ಭಾರತ ಅತ್ಯಂತ ದೊಡ್ಡ ರಾಷ್ಟ್ರ. ಹೀಗಾಗಿ ಸಾವಿನ ಸಂಖ್ಯೆಯ ನೋಂದಣಿ ವೇಳೆ ಕೆಲವೇ ಪ್ರಮಾಣದಲ್ಲಿ ಏರುಪೇರಾಗಿರಬಹುದು. ಆದರೆ 10 ಪಟ್ಟುಗಳಷ್ಟು ಹೆಚ್ಚುಕಡಿಮೆಯಾಗಲು ಸಾಧ್ಯವಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಅಂಕಿ-ಸಂಖ್ಯೆಗೆ ನಮ್ಮ ಒಪ್ಪಿಗೆಯಿಲ್ಲ ಎಂದಿದ್ದಾರೆ.  ಆಗಲೇ ಹೇಳಿದಂತೆ ಶೇ.15-20ರಷ್ಟು ವ್ಯತ್ಯಾಸ ಆಗಿದ್ದರೂ, ಅದನ್ನು ಸೇರಿಸಿಯೇ ಹೇಳಿದ್ದರೂ ಡಬ್ಲ್ಯೂಎಚ್​ಒ ನೀಡಿದ ಡಾಟಾಕ್ಕೆ ತಾಳೆಯಾಗುವುದಿಲ್ಲ ಎಂದಿದ್ದಾರೆ.

ಡಬ್ಲ್ಯೂಎಚ್ಒ ರಿಪೋರ್ಟ್ ಏನಿತ್ತು?
ಡಬ್ಲ್ಯೂಎಚ್​ಒ ಗುರುವಾರ ನೀಡಿದ ವರದಿಯಲ್ಲಿ, ಜನವರಿ 2020ರಿಂದ ಡಿಸೆಂಬರ್​ 2021ರವರೆಗೆ ಭಾರತದಲ್ಲಿ 4.7 ಮಿಲಿಯನ್​ (47 ಲಕ್ಷ) ಗಳಷ್ಟು ಹೆಚ್ಚುವರಿ ಸಾವುಗಳು ಸಂಭವಿಸಿವೆ. ಇದು ಅಧಿಕೃತ ಅಂಕಿ-ಅಂಶಗಳಿಂತಲೂ 10ಪಟ್ಟು ಹೆಚ್ಚು ಎಂದಿತ್ತು.

ಇದನ್ನೂ ಓದಿ: ವೃತ್ತಿಜೀವನದಲ್ಲೂ ಮಾಜಿ ಗಂಡನಿಗೆ ಎದುರಾಳಿಯಾಗಿ ನಿಂತ ಸಮಂತಾ; ನಾಗ ಚೈತನ್ಯ ಚಿತ್ರಕ್ಕೆ ‘ಯಶೋದ’ ಫೈಟ್​

Published On - 11:49 am, Fri, 6 May 22