ನೂತನ ಸಂಸತ್ತಿನ ಉದ್ಘಾಟನೆಗೆ ರಾಷ್ಟ್ರಪತಿ ಯಾಕೆ ಹಾಜರಾಗುತ್ತಿಲ್ಲ?: ಪ್ರಧಾನಿ ಮೋದಿಗೆ ಕಮಲ್ ಹಾಸನ್ ಪ್ರಶ್ನೆ

ದೇಶದ ಹೆಮ್ಮೆಯ ಈ ಕ್ಷಣವು ರಾಜಕೀಯವಾಗಿ ವಿಭಜನೆಯಾಗಿದೆ. ನಾನು ನನ್ನ ಪ್ರಧಾನಿಯವರಿಗೆ ಒಂದು ಸರಳ ಪ್ರಶ್ನೆ ಕೇಳುತ್ತೇನೆ. ನಮ್ಮ ಹೊಸ ಸಂಸತ್ತಿನ ಉದ್ಘಾಟನೆಗೆ ಭಾರತದ ರಾಷ್ಟ್ರಪತಿಗಳು ಏಕೆ ಹಾಜರಾಗಬಾರದು ಎಂದು ದಯವಿಟ್ಟು ದೇಶಕ್ಕೆ ತಿಳಿಸಿ.

ನೂತನ ಸಂಸತ್ತಿನ ಉದ್ಘಾಟನೆಗೆ ರಾಷ್ಟ್ರಪತಿ ಯಾಕೆ ಹಾಜರಾಗುತ್ತಿಲ್ಲ?: ಪ್ರಧಾನಿ ಮೋದಿಗೆ ಕಮಲ್ ಹಾಸನ್ ಪ್ರಶ್ನೆ
ಕಮಲ್ ಹಾಸನ್
ರಶ್ಮಿ ಕಲ್ಲಕಟ್ಟ

Updated on: May 27, 2023 | 5:11 PM

ಮುಖ್ಯಾಂಶಗಳು

  • ರಾಷ್ಟ್ರದ ಮುಖ್ಯಸ್ಥರಾಗಿ ಭಾರತದ ರಾಷ್ಟ್ರಪತಿಗಳು ಈ ಐತಿಹಾಸಿಕ ಸಂದರ್ಭದ ಭಾಗವಾಗದಿರಲು ಯಾವುದೇ ಕಾರಣ ನನಗೆ ಕಾಣುತ್ತಿಲ್ಲ ಎಂದು ನಟ
  • ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಕನಿಷ್ಠ 20 ವಿರೋಧ ಪಕ್ಷಗಳು ಜಂಟಿ ಅಧಿವೇಶನದಲ್ಲಿ ಭಾನುವಾರದ ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದೆ
  • ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಕ್ಕಾಗಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ,

ಹೊಸ ಸಂಸತ್ ಭವನದ ಉದ್ಘಾಟನೆಯ ಕುರಿತು ಮಕ್ಕಳ್ ನೀಧಿ ಮೈಯಂ ಮುಖ್ಯಸ್ಥ ಕಮಲ್ ಹಾಸನ್ ( Kamal Haasan) ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಪ್ರಶ್ನಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಕಾರ್ಯಕ್ರಮಕ್ಕೆ ಯಾಕೆ ಹಾಜರಾಗುತ್ತಿಲ್ಲ ಎಂದು ಕೇಳಿದ್ದಾರೆ. ದೇಶದ ಹೆಮ್ಮೆಯ ಈ ಕ್ಷಣವು ರಾಜಕೀಯವಾಗಿ ವಿಭಜನೆಯಾಗಿದೆ. ನಾನು ನನ್ನ ಪ್ರಧಾನಿಯವರಿಗೆ ಒಂದು ಸರಳ ಪ್ರಶ್ನೆ ಕೇಳುತ್ತೇನೆ. ನಮ್ಮ ಹೊಸ ಸಂಸತ್ತಿನ ಉದ್ಘಾಟನೆಗೆ ಭಾರತದ ರಾಷ್ಟ್ರಪತಿಗಳು ಏಕೆ ಹಾಜರಾಗಬಾರದು ಎಂದು ದಯವಿಟ್ಟು ದೇಶಕ್ಕೆ ತಿಳಿಸಿ. ರಾಷ್ಟ್ರದ ಮುಖ್ಯಸ್ಥರಾಗಿ ಭಾರತದ ರಾಷ್ಟ್ರಪತಿಗಳು ಈ ಐತಿಹಾಸಿಕ ಸಂದರ್ಭದ ಭಾಗವಾಗದಿರಲು ಯಾವುದೇ ಕಾರಣ ನನಗೆ ಕಾಣುತ್ತಿಲ್ಲ ಎಂದು ನಟ-ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.

ನೂತನ ಸಂಸತ್ತಿನ ಕಟ್ಟಡ ಉದ್ಘಾಟನೆ ಕುರಿತ ವಿವಾದ ತಾರಕಕ್ಕೇರಿದೆ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಕನಿಷ್ಠ 20 ವಿರೋಧ ಪಕ್ಷಗಳು ಜಂಟಿ ಅಧಿವೇಶನದಲ್ಲಿ ಭಾನುವಾರದ ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಧಾರವನ್ನು ಘೋಷಿಸಿದ್ದು, ಉದ್ಘಾಟನೆಯನ್ನು ‘ಘೋರ ಅವಮಾನ’ ಮತ್ತು ಪ್ರಜಾಪ್ರಭುತ್ವದ ಮೇಲಿನ ‘ನೇರ ದಾಳಿ’ ಎಂದು ಕರೆದಿವೆ. ರಾಷ್ಟ್ರಪತಿ ಬದಲು ಪ್ರಧಾನಿ ಮೋದಿ ಅಧ್ಯಕ್ಷತೆ ವಹಿಸಿದ್ದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ.


ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಕ್ಕಾಗಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ, ಇದು ಪ್ರಜಾಪ್ರಭುತ್ವದ ಮೂಲತತ್ವದ ತಿರಸ್ಕಾರ ಎಂದು ಕರೆದಿದೆ.
ಭಾರತದ 140 ಕೋಟಿ ಜನರು ನಮ್ಮ ಪ್ರಜಾಪ್ರಭುತ್ವಕ್ಕೆ ಮತ್ತು ಅವರ ಚುನಾಯಿತ ಪ್ರತಿನಿಧಿಗಳಿಗೆ ಮಾಡಿದ ಈ ಘೋರ ಅವಮಾನವನ್ನು ಮರೆಯುವುದಿಲ್ಲ ಎಂದು ಎನ್‌ಡಿಎ ನಾಯಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆ ಬಹಿಷ್ಕರಿಸುವ ವಿಪಕ್ಷಗಳ ನಿಲುವು ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ನೀತಿಗೆ ಅವಮಾನ: ಅನುರಾಗ್ ಠಾಕೂರ್

ಶುಕ್ರವಾರ, ಸುಪ್ರೀಂಕೋರ್ಟ್ ಹೊಸ ಸಂಸತ್ತಿನ ಕಟ್ಟಡವನ್ನು ರಾಷ್ಟ್ರಪತಿ ಮುರ್ಮು ಉದ್ಘಾಟಿಸುವ ಬಗ್ಗೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು. ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಪಿ.ಎಸ್.ನರಸಿಂಹ ಅವರ ಪೀಠವು ಅರ್ಜಿದಾರ ವಕೀಲ ಜಯ ಸುಕಿನ್ ಅವರಿಗೆ ಈ ಅರ್ಜಿಯನ್ನು ಏಕೆ ಮತ್ತು ಹೇಗೆ ಸಲ್ಲಿಸಲಾಗಿದೆ ಎಂಬುದನ್ನು ನ್ಯಾಯಾಲಯವು ಅರ್ಥಮಾಡಿಕೊಂಡಿದೆ. ಆದರೆ ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಈ ಅರ್ಜಿಯನ್ನು ಪರಿಗಣಿಸಲು ಅದು ಒಲವು ಹೊಂದಿಲ್ಲ ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Sat, 27 May 23

Follow Us