Delhi Rain: ಮಳೆ ಕಡಿಮೆ ಇದ್ದರೂ ದೆಹಲಿಯಲ್ಲಿ ಯಮುನೆ‌ ಉಕ್ಕಿ ಹರಿದಿದ್ದಾದರು ಯಾಕೆ?

| Updated By: Rakesh Nayak Manchi

Updated on: Jul 13, 2023 | 5:57 PM

ಯಮುನಾ ನದಿ ನೀರಿನ ಮಟ್ಟ 208 ಮೀಟರ್ ದಾಟಿ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ಪ್ರತಿ ಮಾನ್ಸೂನ್‌ನಲ್ಲಿ ಇದೇ ಪ್ರಮಾಣದ ಮಳೆ ದಾಖಲಾಗಿರುವಾಗ ಈ ವರ್ಷ ದೆಹಲಿಯಲ್ಲಿ ಏಕೆ ಪ್ರವಾಹ ಉಂಟಾಗಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

Delhi Rain: ಮಳೆ ಕಡಿಮೆ ಇದ್ದರೂ ದೆಹಲಿಯಲ್ಲಿ ಯಮುನೆ‌ ಉಕ್ಕಿ ಹರಿದಿದ್ದಾದರು ಯಾಕೆ?
ಉಕ್ಕಿ ಹರಿಯುತ್ತಿರುವ ದೆಹಲಿಯ ಯಮುನಾ ನದಿ
Follow us on

ನವದೆಹಲಿ: ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿವೆ.‌ ಯಮುನಾ ನದಿಯ (Yamuna River) ಪ್ರವಾಹ ದೆಹಲಿಗೆ ದಿಗ್ಭಂಧನ ಹೇರಿದೆ. ಯಮುನಾ ನದಿಯು ಸಾರ್ವಕಾಲಿಕ ಗರಿಷ್ಠ 208.46 ಮೀಟರ್‌ಗೆ ಏರಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದೆಹಲಿ (Delhi) ಸಚಿವಾಲಯದ ವಸತಿ ಕಚೇರಿಗಳು ಜಲಾವೃತಗೊಂಡಿವೆ. ರಾಜ್‌ಘಾಟ್‌ನಿಂದ ದೆಹಲಿ ಸೆಕ್ರೆಟರಿಯೇಟ್‌ವರೆಗಿನ ರಸ್ತೆಯೂ ಜಲಾವೃತವಾಗಿದೆ. ಕಾಶ್ಮೀರ್ ಗೇಟ್ ಮತ್ತು ರೆಡ್ ಫೋರ್ಟ್ ರಿಂಗ್ ರೋಡ್ ಜಲಾವೃತವಾಗಿದ್ದು, ಸಂಚಾರ ಮುಚ್ಚಲಾಗಿದೆ. ಪ್ರಸ್ತುತ ಯುಮನಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಮೂರು ಮೀಟರ್‌ಗಳಷ್ಟು ಹೆಚ್ಚಿದೆ.

ಯಮುನಾ ನದಿ ಪಾತ್ರದಲ್ಲಿರುವ ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾದಲ್ಲಿ ಮೂರು ಜಲ ಸಂಸ್ಕರಣಾ ಘಟಕಗಳು ಪ್ರವಾಹದಿಂದಾಗಿ ಸ್ಥಗಿತಗೊಂಡಿವೆ. ಇನ್ನು ಎರಡು ದಿನಗಳು ದೆಹಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲಿದೆ. ಯುಮನಾ‌ ನದಿಯ ಭೀಕರ ಪ್ರವಾಹದ ಕಾರಣಕ್ಕೆ ಅಧಿಕಾರಿಗಳ ತುರ್ತು ಸಭೆ ಕರೆದ ಸಿಎಂ ಅರವಿಂದ ಕೇಜ್ರೀವಾಲ್, ವಜೀರಾಬಾದ್ ಜಲ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುಮನಾ ನದಿ ಉಕ್ಕಿ ಹರಿಯುತ್ತಿರುವುದೇಕೆ?

ಯಮುನಾ ನದಿ ನೀರಿನ ಮಟ್ಟ 208 ಮೀಟರ್ ದಾಟಿ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ಪ್ರತಿ ಮಾನ್ಸೂನ್‌ನಲ್ಲಿ ಇದೇ ಪ್ರಮಾಣದ ಮಳೆ ದಾಖಲಾಗಿರುವಾಗ ಈ ವರ್ಷ ದೆಹಲಿಯಲ್ಲಿ ಏಕೆ ಪ್ರವಾಹ ಉಂಟಾಗಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಇದನ್ನೂ ಓದಿ: ಉಕ್ಕಿ ಹರಿದ ಯಮುನಾ ನದಿ; ದೆಹಲಿಯ ತಗ್ಗುಪ್ರದೇಶದಲ್ಲಿನ ಜನರ ಸ್ಥಳಾಂತರಕ್ಕೆ ಆದೇಶಿಸಿದ ಕೇಜ್ರಿವಾಲ್

ಹರಿಯಾಣದ ಹಥಿನಿಕುಂಡ್ ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರು ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೆಹಲಿಗೆ ತಲುಪಲು ಕಡಿಮೆ ಸಮಯ ತೆಗೆದುಕೊಳ್ಳುತ್ತಿತ್ತು. ದೆಹಲಿಯಿಂದ 180 ಕಿಮೀ ದೂರದಲ್ಲಿರುವ ಹಥಿನಿ ಕುಂಡ್ ಬ್ಯಾರೇಜ್‌ನಿಂದ ರಾಜಧಾನಿಗೆ ನೀರು ಬರಲು ಸುಮಾರು ಎರಡು ಮೂರು ದಿನಗಳು ಬೇಕಾಗುತ್ತಿತ್ತು, ಆದರೆ ಈ ಬಾರಿ ಅದು ಕೇವಲ ಒಂದು ದಿನದಲ್ಲಿ ನೀರು ತಲುಪುತ್ತಿದೆ.

ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿ ಒತ್ತುವರಿ, ಅತಿಕ್ರಮಣ ನಡೆದಿದೆ. ಹಾಗಾಗಿ ಹಥಿನಿ ಕುಂಡ್ ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರು ಹಾದುಹೋಗಲು ಕಿರಿದಾದ ಪ್ರದೇಶ ಸೃಷ್ಟಿಯಾಗಿದೆ. ನದಿಯ ತಳದಲ್ಲಿ ಹೂಳು ತುಂಬಿಕೊಂಡಿದೆ ಹೀಗಾಗಿ ಕಡಿಮೆ‌ ಮಳೆ ಇದ್ದರೂ ಕೂಡ ಯುಮುನೆ ಮುನಿಸಿಕೊಂಡು ದೆಹಲಿಗೆ ಜಲದಿಗ್ಬಂಧನ ಹೇರಿದೆ.

ಯಮುನಾ ನದಿಗೆ ಅಡ್ಡಲಾಗಿ ಎರಡು ಪ್ರಮುಖ ಬ್ಯಾರೇಜ್‌ಗಳಿವೆ. ಉತ್ತರಾಖಂಡದ ದಕ್‌ಪಥರ್ ಮತ್ತು ಹರ್ಯಾಣದ ಹಥಿನಿಕುಂಡ್, ದೆಹಲಿಯ ಅಪ್‌ಸ್ಟ್ರೀಮ್​ನಲ್ಲಿ ನದಿಯ ಮೇಲೆ ಯಾವುದೇ ಅಣೆಕಟ್ಟುಗಳಿಲ್ಲ ಆದ್ದರಿಂದ ದೆಹಲಿಯಲ್ಲಿ ನೀರಿನ ವೇಗವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದೆಹಲಿಯಲ್ಲಿ‌ ಪ್ರವಾಹ ಸೃಷ್ಟಿಯಾಗಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ