ಡಿಸಿಎಂ ಡಿಕೆ ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯಲ್ಲಿ ಎಸ್ಎಂ ಕೃಷ್ಣ ಅವರ ಪಾತ್ರ ಕೂಡ ಇದೆ. ಗುರು-ಶಿಷ್ಯರಾದ ಇವರು ಬಳಿಕ ಸಂಬಂಧಿಕರಾದ್ರು. ಎಸ್ಎಂ ಕೃಷ್ಣ ಅವರ ಗರಡಿಯಲ್ಲೇ ಬೆಳೆದ ಡಿಕೆ ಶಿವಕುಮಾರ್, ಇಂದು ಗುರುಗೆ ಕಣ್ಣೀರ ವಿದಾಯ ಹೇಳಿದರು.
ಎಸ್ಎಂ ಕೃಷ್ಣ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಬೆಳಗಾವಿಯಿಂದ ವಿಮಾನ ಏರಿ ಬಂದು ನೇರವಾಗಿ ಗುರುವಿನ ಮನೆಗೆ ತೆರಳಿದ್ರು. ಮೊದಲಿಗೆ ಗುರುವಿಗೆ ಹೂವಿನ ಹಾರ ಹಾಕಿ ಕಣ್ಣೀರಿಟ್ಟರು.
ಮಾಜಿ ಸಿಎಂ ಎಸ್ಕೃಷ್ಣ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿ ನನ್ನ ತಂದೆಯನ್ನೇ ಕಳೆದುಕೊಂಡಷ್ಟು ನೋವು ಆಗುತ್ತಿದೆ ಎಂದು ಭಾವುಕರಾದರು, ನನ್ನ ಅವರ ಸಂಬಂಧ ತಂದೆ ಮಗನ ಸಂಬಂಧ ಇದ್ದಂತೆ ಎಂದು ಗಳಗಳನೆ ಅತ್ತರು.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಅಂತೂ ನಿನ್ನೆಯಿಂದಲೂ ಕಣ್ಣೀರಾಗಿದ್ದಾರೆ. ಇಂದು ತಮ್ಮ ನಾಯಕನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟಿದ್ದ ಡಿಕೆಶಿ ಕಣ್ಣೀರಿಡುತ್ತಾಲೇ ಎಲ್ಲವನ್ನೂ ನಿರ್ವಹಿಸಿದ್ರು.
ತಾವೊಬ್ಬ ಡಿಸಿಎಂ ಎನ್ನುವುದನ್ನು ಮರೆತು ಇಲ್ಲಿ ಎಸ್ಎಂಕೆಯ ಶಿಷ್ಯನಾಗಿ ಕಾಣಿಸಿಕೊಂಡಿದ್ರು. ಕೈಯಲ್ಲಿ ಮೈಕ್ ಹಿಡಿದು ಎಲ್ಲವನ್ನೂ ನಿರ್ವಹಿಸಿದ್ರು.
ಅಳಿಯನನ್ನು ಕಳೆದುಕೊಂಡಾಗ ಬಂಡೆಯಂತೆ ನಿಂತರು. ಗಂಡು ಮಕ್ಕಳಿಲ್ಲದ ಎಸ್.ಎಂ ಕೃಷ್ಣಗೆ ಮನೆಮಗನಾದರು. ಕೃಷ್ಣ ಮೊಮ್ಮಗನಿಗೆ ಮಗಳನ್ನೇ ಧಾರೆ ಎರೆದು ಕೊಟ್ಟರು. ಈಗ ಅವರು ನಿಧನದ ಬಳಿಕ ಬಂಡೆಯಂತೆ ಮುಂದೆ ನಿಂತು ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಸಿಕೊಟ್ಟಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಎಸ್ಎಂ ಕೃಷ್ಣ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಏನೇನು ಬೇಕು ಎಂದು ಮುಂದೆ ನಿಂತುಕೊಂಡು ಎಲ್ಲಾ ನೋಡಿಕೊಂಡರು.
ಎಸ್ಎಂ ಕೃಷ್ಣ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲೇ ಅಂತ್ಯಸಂಸ್ಕಾರ ಮಾಡಬೇಕೆಂದಾಗ ಡಿಕೆಶಿ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲದೇ ಮುಂದೆ ನಿಂತು ಅಂತ್ಯಕ್ರಿಯೆ ಸ್ಥಳವನ್ನು ಸ್ವಚ್ಛಗೊಳಿಸಿ ಎಲ್ಲಾ ತಯಾರಿ ಮಾಡಿಸಿದ್ದಾರೆ.
ಗುರುವಿನ ಅಂತಿಮ ದರ್ಶನಕ್ಕೆ ಬರುವ ರಾಜಕೀಯ ನಾಯಕರು, ಸ್ವಾಮೀಜಿಗಳು ಹಾಗೂ ಅಭಿಮಾನಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ತ್ ಮಾಡಿಸಿದ್ದರು.
ತಾವೇ ಖುದ್ದಾಗಿ ಬೆಂಗಳೂರಿನಿಂದ ಸೋಮನಹಳ್ಳಿ, ಸೋಮನಹಳ್ಳಿಯಿಂದ ಬೆಂಗಳೂರಿಗೆ ತಿರುಗಾಡಿ ಕೃಷ್ಣ ಅವರ ಅಂತ್ಯಕ್ರಿಯೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಸಿದ್ದಾರೆ.
ಇನ್ನು ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ಬರುವಾಗ ಕೃಷ್ಣ ಪಾರ್ಥಿವ ಶರೀರ ಜೊತೆಯಲ್ಲೇ ಇದ್ದರು.
ಇನ್ನು ಗುರುವಿಗೆ ಸರ್ಕಾರದಿಂದ ಏನೆಲ್ಲಾ ಗೌರವ ಕೊಡಿಸಬೇಕೋ ಅದನೆಲ್ಲಾ ಕೊಡಿಸಿದ್ದಾರೆ. ಶಾಲೆ ಕಾಲೇಜುಗಳಿಗೆ ರಜೆ, ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ, ಅಂತ್ಯಕ್ರಿಯೆ ಸಂದರ್ಭದಲ್ಲಿ ಸರ್ಕಾರದ ಕಡೆಯಿಂದ ಗೌರವ ವಂದನೆ. ಹೀಗೆ ಎಲ್ಲಾ ರೀತಿ ಗೌರವ ಕೊಡಿಸಿದ್ದಾರೆ.
ಎಸ್ಎಂ ಕೃಷ್ಣ ಅವರ ಅಂತಿಮ ಯಾತ್ರೆಗೆ ಡಿಕೆ ಶಿವಕುಮಾರ್ ಕೂಡ ಹೆಗಲು ಕೊಟ್ರು. ಹೂವಿನಿಂದ ಅಲಂಕಾರಗೊಂಡಿದ್ದ ಪಲ್ಲಕ್ಕಿಗೆ ಹೆಗಲು ಕೊಟ್ಟ ಡಿಕೆಶಿ ಒಂದು ಸುತ್ತು ಬಂದು ಗುರುಗಳಿಗೆ ಅಂತಿಮ ನಮನ ಸಲ್ಲಿಸಿದ್ರು.