
ಇಂದು(ಆ.15) ದೇಶದಾದ್ಯಂತ 77 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಕರ್ನಾಟಕದ ರಾಮನಗರದಲ್ಲಿ ಬರೊಬ್ಬರಿ 600 ಅಡಿ ಎತ್ತರದ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು. ಇದೀಗ ಇಲ್ಲೊಬ್ಬ ಬೈಕ್ ಸವಾರ ಮೇಲೆ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ್ದಾನೆ.

ಹೌದು, ವಿವಿಧ ರೀತಿಯಲ್ಲಿ ಇಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಅದರಂತೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಿವಾಸಿ ವೀರೇಶ್ ಕುಂದರಗಿಮಠ ಎಂಬುವವರು ಇಳಕಲ್ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರಂಗಾ ಹಿಡಿದು ಬೈಕ್ ಮೇಲೆ ನಿಂತು ಸವಾರಿ ಮಾಡಿದ್ದಾರೆ.

ಕೈಯಲ್ಲಿ ರಾಷ್ಟ್ರಧ್ವಜ ಹಿಡಿದರೆ, ಇತ್ತ ಬೈಕ್ ಹ್ಯಾಂಡಲ್ಗೆ ಕನ್ನಡ ಧ್ವಜವನ್ನು ಕಟ್ಟಿದ್ದಾರೆ. ಜೊತೆಗೆ ಒಂದು ಕಿಮೀ ಸವಾರಿ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ವೀರೇಶ್ ಕುಂದರಗಿಮಠ ಸಂಭ್ರಮಿಸಿದ್ದಾರೆ.

ಇನ್ನು ವೀರೇಶ್ ಕುಂದರಗಿಮಠ ಈ ಹಿಂದೆ 500 ಕಿಮೀ ಹ್ಯಾಂಡಲ್ ಹಿಡಿಯದೆ ಬೈಕ್ ಓಡಿಸಿ ಸಾಧನೆ ಮಾಡಿದ್ದಾರೆ. ಇದೀಗ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ತಮ್ಮ ಸ್ಟೈಲ್ನಲ್ಲಿಯೇ ಸಂಭ್ರಮಿಸಿದ್ದಾರೆ.

ಇದೇ ರೀತಿಯಾಗಿ ಬಾಗಲಕೋಟೆ ಜಿಲ್ಲೆಯ ಕೆರಕಲಮಟ್ಟಿ ಗ್ರಾಮದ ಜಮೀನಿನಲ್ಲಿ ರೈತರ ಮಕ್ಕಳು ದ್ವಜಾರೋಹಣ ನೆರವೇರಿಸಿದ್ದಾರೆ.

ಹೌದು, ಮೆಕ್ಕೆಜೋಳದ ಬೆಳೆಯ ನಡುವೆ ರೈತ ಕುಟುಂಬದ ಮಕ್ಕಳು ಜಮೀನನಲ್ಲೂ ದ್ವಜಾರೋಹಣ ಮಾಡುವ ಮೂಲಕ ದೇಶಾಭಿಮಾನ ಮೆರೆದಿದ್ದಾರೆ.