
ಚಿಕ್ಕಬಳ್ಳಾಪುರ, ಮೊದಲೇ ಫಲಪುಷ್ಪ ಗಿರಿಧಾಮಗಳ ಜಿಲ್ಲೆ. ಇಲ್ಲಿಯ ರೈತರು ಹೂವು, ಹಣ್ಣು, ತರಕಾರಿ ಬೆಳೆಯುವುದನ್ನು ತಮ್ಮ ಜೀವಾಳವನ್ನಾಗಿ ಮಾಡಿಕೊಂಡಿದ್ದಾರೆ. ಇದೀಗ ಇಲ್ಲಿ ಬೆಳೆಯುವ ಹಲಸಿನ ಹಣ್ಣಿಗೆ ಭಾರಿ ಡಿಮ್ಯಾಂಡ್ ಬಂದಿದೆ. ವರ್ಷಕ್ಕೊಮ್ಮೆ ಮಾತ್ರ ಕಾಣಸಿಗುವ ಇಲ್ಲಿಯ ಹಲಸು ನೆರೆ ರಾಜ್ಯ ಹೈದರಾಬಾದ್ ನಲ್ಲಿಯೂ ಹವಾ ಸೃಸ್ಟಿಸಿದೆ. ಪ್ರತಿದಿನ ಲೋಡ್ ಗಟ್ಟಲೆ ಹಲಸನ್ನು ಖರೀದಿಸಿ ಹೈದರಾಬಾದ್ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರು ಟು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ಬೈ ಪಾಸ್ ಬಳಿ ಈಗ ಎಲ್ಲಿ ನೋಡಿದರಲ್ಲಿ ಹಲಸಿನ ಹಣ್ಣುಗಳ ಕಾರು ಬಾರು ಜೋರಾಗಿದೆ. ಸ್ಥಳಿಯ ರೈತರು ತಮ್ಮ ತಮ್ಮ ತೋಟ ಜಮೀನುಗಳಲ್ಲಿ ಹಲಸಿನ ಮರಗಳನ್ನು ಬೆಳೆಸಿದ್ದಾರೆ. ಮರದಲ್ಲಿರುವ ಹಲಸನ್ನು ಖರೀದಿಸಿ ದೊಡ್ಡ ದೊಡ್ಡ ವ್ಯಾಪಾರಿಗಳು, ಸ್ಥಳಿಯ ವ್ಯಾಪಾರಿಗಳು ರಸ್ತೆಯೂದ್ದಕ್ಕೂ ಮಾರಾಟ ಮಾಡುತ್ತಿದ್ದಾರೆ.

ಪ್ರತಿದಿನ ಲೋಡ್ ಗಟ್ಟಲೆ ಹಲಸು ಮಾರಾಟ ಮಾಡಲಾಗುತ್ತಿದೆ. ಸ್ಥಳಿಯ ವಾಹನ ಸವಾರರು, ಇಶಾ ಫೌಂಡೇಶನ್ಗೆ ಹೋಗಿ ಬರುವ ಪ್ರವಾಸಿಗರು ಸೇರಿದಂತೆ ಆಂದ್ರ, ತೆಲಂಗಾಣದ ಜನ ಮುಗಿಬಿದ್ದು ಹಲಸನ್ನು ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಹಲಸಿಗೆ ಭಾರೀ ಡಿಮ್ಯಾಂಡ್ ಬಂದಿದೆ.

ಇನ್ನೂ ಚಿಕ್ಕಬಳ್ಳಾಪುರದ ಬಳಿ ಬೆಳೆಯುವ ಹಲಸಿನ ತೊಳೆಯಲ್ಲಿ ನೀರಿನಾಂಶ ಹೆಚ್ಚಾಗಿದ್ದು, ಅದು ಜೇನಿನಂತ ಸವಿರುಚಿ ಕೊಡುತ್ತಿದೆ. ಕೆಂಪು, ಕಳದಿ ಮತ್ತು ಬಿಳಿ ಬಣ್ಣದ ತೊಳೆಗಳ ಹಣ್ಣುಗಳಿವೆ.

ಹೈದರಾಬಾದ್ನಲ್ಲಿ ಚಿಕ್ಕಬಳ್ಳಾಪುರದ ಹಲಸಿಗೆ ಡಿಮ್ಯಾಂಡ್ ಇದೆ. ಹಾಗಾಗಿ ಪ್ರತಿದಿನ ಲಾರಿಗಳಲ್ಲಿ ಲೋಡ್ ಗಟ್ಟಲೆ ಹಲಸನ್ನು ರವಾನೆ ಮಾಡಲಾಗುತ್ತಿದೆ. ಆ ಮೂಲಕ ರೈತರು ಮತ್ತು ಸ್ಥಳಿಯ ವ್ಯಾಪಾರಿಗಳಿಗೆ ಭರ್ಜರಿ ಲಾಭ ಗಳಿಸುತ್ತಿದ್ದಾರೆ.

ರೈತರು ತಮ್ಮ ತೋಟ, ಜಮೀನುಗಳ ಬದುಗಳಲ್ಲಿ ಬೆಳೆಸಿದ ಹಲಸಿಗೆ ಈಗ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದ್ದು, ರೈತರಿಗೆ ಆದಾಯದ ಮೂಲವಾಗಿದೆ.
Published On - 10:38 am, Sat, 14 June 25