
ಅದು ಶತಮಾನದಷ್ಟು ಹಳೆಯ ಸರ್ಕಾರಿ ಶಾಲೆ. ಅವನತಿಯ ಅಂಚಿನಲ್ಲಿದ್ದ ಶಾಲೆಗೆ ಹಳೆಯ ವಿದ್ಯಾರ್ಥಿಗಳು ಕಾಯಕಲ್ಪ ನೀಡಿದ್ದಾರೆ. ಸರ್ಕಾರದ ಜತೆ ಕೈಜೋಡಿಸಿ ಕೋಟ್ಯಂತರ ರೂ. ವೆಚ್ಚದಲ್ಲಿ ನವನಿರ್ಮಾಣ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ತಾಳವಟ್ಟಿ ಗ್ರಾಮದಲ್ಲಿ ಹಳೆ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗೆ ಕಾಯಕಲ್ಪ ಕಲ್ಪಿಸಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪರಿಂದ ನೂತನ ಕೊಠಡಿಗಳ ಉದ್ಘಾಟನೆ ಮಾಡಿ ಶಾಲಾ ಶತಮಾನೋತ್ಸವ ಆಚರಿಸಲಾಗಿದೆ.

ಹೌದು. 1925ರಲ್ಲಿ ಆರಂಭಗೊಂಡಿರುವ ಈ ಶಾಲೆ ಶತಮಾನ ಕಂಡಿದೆ. ಶಾಲಾ ಕಟ್ಟಡದ ದುಸ್ಥಿತಿ ಕಂಡ ಹಳೇ ವಿದ್ಯಾರ್ಥಿಗಳು ಶಾಲೆಗೆ ಕಾಯಕಲ್ಪ ಕೊಡಲು ನಿರ್ಧರಿಸಿದ್ದರು. ವಿವಿಧೆಡೆ ಉದ್ಯೋಗಗಳಲ್ಲಿರುವವರು, ದಾನಿಗಳಿಂದ ಹಣ ಸಂಗ್ರಹಿಸಿ ಸರ್ಕಾರದ ಜತೆ ಕೈಜೋಡಿಸಿದ್ದರು. ಹೀಗಾಗಿ, 1 ಕೋಟಿ ರೂ. ವೆಚ್ಚದಲ್ಲಿ ಶಾಲೆ ಅಭಿವೃದ್ಧಿ ಕಂಡಿದೆ.

ಇನ್ನು ಸರ್ಕಾರವು 25 ಲಕ್ಷ ರೂ. ಅನುದಾನ ನೀಡಿದ್ದು, ಶಾಲೆಗೆ ಕಯಕಲ್ಪ ಸಿಕ್ಕಿದೆ. ಸುಸಜ್ಜಿತ 12 ಕೊಠಡಿಗಳು, ಹೈಟೆಕ್ ಶೌಚಾಲಯ, ಆಧುನಿಕ ಅಡುಗೆ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ, ಸ್ಮಾರ್ಟ್ ತರಗತಿಗಳು, ಲ್ಯಾಬ್, 10 ಕಂಪ್ಯೂಟರ್, ಸಿಸಿಟಿವಿ, ಲೈಬ್ರರಿ ಸಕಲ ವ್ಯವಸ್ಥೆ ಮಾಡಲಾಗಿದೆ.

ಶಾಲಾ ಶತಮಾನೋತ್ಸವ, ನೂತನ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿಯನ್ನು ಉತ್ತೇಜಿಸುವಂತೆ ಮತ್ತು ಪ್ರತಿದಿನ ಮಕ್ಕಳು ಶಾಲೆಗೆ ಹಾಜರಾಗುವಂತೆ ವಿಶೇಷ ಕಾಳಜಿವಹಿಸುವಂತೆ ಶಾಲಾ ಸಿಬ್ಬಂದಿ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರು ಗಮನಹರಿಸುವಂತೆ ಮನವಿ ಮಾಡಿದರು.

ಒಟ್ಟಾರೆ ಕೋಟೆನಾಡು ಚಿತ್ರದುರ್ಗದ ತಾಳವಟ್ಟಿ ಗ್ರಾಮದಲ್ಲಿ ನೂರಾರು ಹಳೇ ವಿದ್ಯಾರ್ಥಿಗಳು ಸೇರಿ ಶಾಲೆಗೆ ಕಾಯಕಲ್ಪ ನೀಡುವ ಕೆಲಸ ಮಾಡಿದ್ದಾರೆ. ಆ ಮೂಲಕ ಬದುಕು ಕಟ್ಟಿಕೊಳ್ಳಲು ಬುನಾದಿಯಾದ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದು ಶ್ಲಾಘನೀಯ.
Published On - 11:14 am, Sun, 17 August 25