ಸಿಎಸ್ಕೆ ಅಭಿಮಾನಿಗಳಿಗೆ ಒಂದು ಸಿಹಿ, ಮತ್ತೊಂದು ಕಹಿ ಸುದ್ದಿ ಸಿಕ್ಕಿದೆ. ಸಿಹಿ ಸುದ್ದಿ ಎಂದರೆ ಅಭಿಮಾನಿಗಳ ಆರಾಧ್ಯ ದೈವ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಐಪಿಎಲ್ 2025 ರಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನನ್ನು ಬದಲಾಯಿಸಲಾಗಿದೆ.
ಐಪಿಎಲ್ ಆರಂಭವಾಗಿ ಕೇವಲ 5 ಪಂದ್ಯಗಳು ನಡೆದಿರುವಾಗ ಸಿಎಸ್ಕೆ ತನ್ನ ತಂಡದ ನಾಯಕನನ್ನು ಬದಲಿಸಿರುವುದು ಎಲ್ಲರಿಗೂ ಅಚ್ಚರಿ ತರಿಸಬಹುದು. ವಾಸ್ತವವಾಗಿ ಚೆನ್ನೈ ಫ್ರಾಂಚೈಸಿ ತನ್ನ ನಾಯಕನನ್ನು ಬದಲಿಸಲು ಕಾರಣ ತಂಡದ ಪ್ರದರ್ಶನವಲ್ಲ, ಬದಲಿಗೆ ತಂಡದ ಖಾಯಂ ನಾಯಕ ರುತುರಾಜ್ ಗಾಯಕ್ವಾಡ್ ಅವರ ಗಾಯದ ಸಮಸ್ಯೆ.
ಹೌದು.. ಗಾಯದ ಕಾರಣದಿಂದಾಗಿ ರುತುರಾಜ್ ಗಾಯಕ್ವಾಡ್ ಇಡೀ ಟೂರ್ನಿಯಿಂದ ಹೊರಬಿದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಧೋನಿ ಮತ್ತೊಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ. ವಾಸ್ತವವಾಗಿ 2022 ರಲ್ಲಿ ತಂಡವನ್ನು ಚಾಂಪಿಯನ್ ಮಾಡಿದ ಬಳಿಕ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಅವರು 2 ಆವೃತ್ತಿಗಳ ನಂತರ ಮತ್ತೊಮ್ಮೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಷ್ಟಕ್ಕೂ ರುತುರಾಜ್ ಗಾಯಗೊಂಡಿದ್ದು ಹೇಗೆ ಮತ್ತು ಎಲ್ಲಿ ಎಂಬುದನ್ನು ನೋಡುವುದಾದರೆ.. ಮಾರ್ಚ್ 30 ರಂದು ನಡೆದ ಪಂದ್ಯದಲ್ಲಿ ಸಿಎಸ್ಕೆ, ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಸಿಎಸ್ಕೆ ನಾಯಕ ರುತುರಾಜ್ ಬ್ಯಾಟಿಂಗ್ ಮಾಡುವ ವೇಳೆ ಎದುರಾಳಿ ತಂಡದ ವೇಗಿ ತುಷಾರ್ ದೇಶಪಾಂಡೆ ಎಸೆದ ಶಾರ್ಟ್ ಪಿಚ್ ಬಾಲ್ ಗಾಯಕ್ವಾಡ್ ಅವರ ಬಲ ಮೊಣಕೈಗೆ ಬಡಿದಿತ್ತು.
ಆ ಸಮಯದಲ್ಲೇ ರುತುರಾಜ್ ಬಹಳ ನೋವಿನಿಂದ ಬಳಲಿದ್ದು, ಪ್ರಸಾರದ ವೇಳೆ ಬಹಿರಂಗಗೊಂಡಿತ್ತು. ಆದಾಗ್ಯೂ ಈ ನೋವಿನಲ್ಲೂ ರುತುರಾಜ್ ತಮ್ಮ ಬ್ಯಾಟಿಂಗ್ ಮುಂದುವರೆಸಿ ಆ ಪಂದ್ಯದಲ್ಲಿ 63 ರನ್ ಕಲೆಹಾಕಿದ್ದರು. ಆದರೀಗ ಅವರ ಬಲ ಮೊಣಕೈನ ಮೂಳೆ ಮುರಿದಿದೆ ಎಂದು ವರದಿಯಾಗಿದೆ. ಹೀಗಾಗಿ ರುತುರಾಜ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಇಲ್ಲಿ ಹುಟ್ಟಿಕೊಳ್ಳುವ ಬಹುಮುಖ್ಯ ಪ್ರಶ್ನೆ ಏನೆಂದರೆ, ಗಾಯಕ್ವಾಡ್ ಗಂಭೀರ ಗಾಯದಿಂದ ಬಳಲುತ್ತಿದ್ದರೂ, ಅವರು ಇನ್ನೂ ಎರಡು ಪಂದ್ಯಗಳನ್ನು ಆಡಿದ್ದರು. ಅವರು ದೆಹಲಿ ವಿರುದ್ಧ 5 ರನ್ ಮತ್ತು ಪಂಜಾಬ್ ವಿರುದ್ಧ 1 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ಎರಡೂ ಪಂದ್ಯಗಳಲ್ಲಿ ಅವರು ಫಿಲ್ಡಿಂಗ್ ಕೂಡ ಮಾಡಿದ್ದರು. ಆದರೀಗ ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮೊದಲು ಅವರು ಟೂರ್ನಿಯಿಂದ ಹೊರಬಿದ್ದಿರುವುದು ಸಾಕಷ್ಟು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.