
ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ಗಳ ಸರಣಿಯಲ್ಲಿ ಭಾರತ ಈಗಾಗಲೇ 2-0 ಮುನ್ನಡೆ ಸಾಧಿಸಿದೆ. ಇದೀಗ ಮಾರ್ಚ್ 1 ರಿಂದ ಇಂದೋರ್ನಲ್ಲಿ ಉಭಯ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಫೈನಲ್ ಪ್ರವೇಶಿಸುವುದು ಭಾರತದ ಪ್ರಯತ್ನವಾಗಿದೆ.

ಹಾಗಾಗಿ ಉಳಿದಿರುವ ಎರಡು ಟೆಸ್ಟ್ ಪಂದ್ಯಗಳಿಗೆ ಇತ್ತೀಚೆಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ಇದರಲ್ಲಿ ತಂಡದ ಉಪನಾಯಕತ್ವ ಸ್ಥಾನದಿಂದ ಕನ್ನಡಿಗ ಕೆಎಲ್ ರಾಹುಲ್ರನ್ನು ಕಿತ್ತುಹಾಕಿತ್ತು. ಆ ಬಳಿಕ ರಾಹುಲ್ ತಂಡದಲ್ಲಿರುವ ಬಗ್ಗೆ ಊಹಾಪೋಹಗಳು ಕೇಳಲಾರಂಭಿಸಿದ್ದವು.

ಕೆಲವು ಕ್ರಿಕೆಟ್ ಪಂಡಿತರು ರಾಹುಲ್ ಸ್ಥಾನಕ್ಕೆ ಕುತ್ತು ಬರಲಿದೆ ಎಂದಿದ್ದರು. ಆದರೆ ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ, ತಂಡಕ್ಕೆ ಉಪನಾಯಕನ ಅಗತ್ಯವಿಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ದೇಶೀಯ ಸರಣಿಗೆ ಭಾರತಕ್ಕೆ ಯಾವುದೇ ಉಪನಾಯಕ ಇರಬಾರದು. ಮೈದಾನದಲ್ಲಿರುವ ಎಲ್ಲ ಆಟಗಾರರನ್ನು ನಾಯಕ ಒಂದೇ ರೀತಿ ನೋಡಬೇಕು. ಇಂತಹ ಪರಿಸ್ಥಿತಿಯಲ್ಲಿ ಯಾರನ್ನಾದರೂ ಉಪನಾಯಕನನ್ನಾಗಿ ಮಾಡಿ ಕಷ್ಟಪಡಬೇಡಿ. ಉಪನಾಯಕ ಪ್ರದರ್ಶನ ನೀಡದಿದ್ದರೆ ಅವರ ಸ್ಥಾನವನ್ನು ಯಾರು ಬೇಕಾದರೂ ವಹಿಸಿಕೊಳ್ಳಬಹುದು ಎಂದಿದ್ದಾರೆ.

ರಾಹುಲ್ ಪ್ರತಿಭಾವಂತ ಆಟಗಾರ ಎಂದಿರುವ ಶಾಸ್ತ್ರಿ, ರಾಹುಲ್ ತಮ್ಮ ಸಣ್ಣ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಬೇಕು. ಪ್ರತಿಭೆಯೇ ಸರ್ವಸ್ವವಲ್ಲ. ಬದಲಿಗೆ ಆಟದಲ್ಲಿ ಸ್ಥಿರತೆ ಇರಬೇಕು. ಅನೇಕ ಪ್ರತಿಭಾವಂತ ಆಟಗಾರರು ಟೀಂ ಇಂಡಿಯಾದ ಬಾಗಿಲು ತಟ್ಟುತ್ತಿದ್ದಾರೆ. ಇಲ್ಲಿ ನಾನು ಕೇವಲ ರಾಹುಲ್ ಸ್ಥಾನದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಬದಲಿಗೆ ತಂಡದ ಮಧ್ಯಮ ಕ್ರಮಾಂಕ ಮತ್ತು ಬೌಲಿಂಗ್ನಲ್ಲಿಯೂ ಹೊಸ ಪ್ರತಿಭೆಗಳು ಬರುತ್ತಿವೆ ಎಂದಿದ್ದಾರೆ.