
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ವಿಶ್ವಕಪ್ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 243 ರನ್ಗಳ ಜಯ ಸಾಧಿಸಿದೆ. ಟೀಂ ಇಂಡಿಯಾದ ಈ ಗೆಲುವಿಗಾಗಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಪ್ರಮುಖ ಕೊಡುಗೆ ನೀಡಿದರು.

ಮೊದಲು ಬ್ಯಾಟಿಂಗ್ನಲ್ಲಿ ಕೇವಲ 15 ಎಸೆತಗಳಲ್ಲಿ ಅಜೇಯ 29 ರನ್ ಸಿಡಿಸಿದ ಜಡೇಜಾ, ನಂತರ 327 ರನ್ ಬೆನ್ನಟ್ಟಿದ ಪ್ರೋಟಿಸ್ ತಂಡವನ್ನು 83 ರನ್ಗೆ ಆಲೌಟ್ ಮಾಡುವಲ್ಲಿ ಐದು ವಿಕೆಟ್ಗಳ ಕೊಡುಗೆ ನೀಡಿದರು.

ಈ ಮೂಲಕ ಏಕದಿನ ವಿಶ್ವಕಪ್ನಲ್ಲಿ ಐದು ವಿಕೆಟ್ ಉರುಳಿಸಿದ ಎರಡನೇ ಭಾರತೀಯ ಸ್ಪಿನ್ನರ್ ಎನಿಸಿಕೊಂಡರು.

ಈ ಪಂದ್ಯದಲ್ಲಿ ಮೊದಲು ಆಫ್ರಿಕಾ ನಾಯಕ ಟೆಂಬಾ ಬವುಮಾ ಅವರನ್ನು ವಜಾಗೊಳಿಸಿದ ಜಡೇಜಾ, ನಂತರ ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ಅವರ ವಿಕೆಟ್ ಉರುಳಿಸಿದರು.

ಈ ಪಂದ್ಯದಲ್ಲಿ ತಮ್ಮ ಖೋಟಾದ ಒಂಬತ್ತು ಓವರ್ ಬೌಲ್ ಮಾಡಿದ ಜಡೇಜಾ ಒಂದು ಮೇಡನ್ ಸೇರಿದಂತೆ 33 ರನ್ಗಳನ್ನು ಬಿಟ್ಟುಕೊಟ್ಟರು.

ಜಡೇಜಾಗೂ ಮೊದಲು ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಈ ಸಾಧನೆ ಮಾಡಿದ ಏಕೈಕ ಭಾರತೀಯ ಸ್ಪಿನ್ನರ್. ಅವರು 2011 ರ ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧ ಐದು ವಿಕೆಟ್ ಉರುಳಿಸಿದ್ದರು.

ಜಡೇಜಾ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಐದು ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಡೇಜಾಗೂ ಮೊದಲು ಸುನಿಲ್ ಜೋಶಿ ಮತ್ತು ಯುಜುವೇಂದ್ರ ಚಹಾಲ್ ಮಾತ್ರ ಈ ದಾಖಲೆ ಮಾಡಿದ್ದರು.

ಒಟ್ಟಾರೆಯಾಗಿ, ಜಡೇಜಾ ಏಕದಿನ ವಿಶ್ವಕಪ್ನಲ್ಲಿ ಐದು ವಿಕೆಟ್ ಕಬಳಿಸಿದ ಏಳನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅನಿಲ್ ಕುಂಬ್ಳೆ ನಂತರ ಈಡನ್ ಗಾರ್ಡನ್ಸ್ನಲ್ಲಿ ಏಕದಿನದಲ್ಲಿ ಐದು ವಿಕೆಟ್ ಪಡೆದ ಎರಡನೇ ಭಾರತೀಯ ಎನಿಸಿಕೊಂಡರು.