
ಟೀಂ ಇಂಡಿಯಾದ ಆರಂಭಿಕ ಆಟಗಾರ ಪೃಥ್ವಿ ಶಾ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೆಲವು ಕಿಡಿಗೇಡಿಗಳು ದಾಳಿ ಮಾಡಿದ್ದು, ಈ ದಾಳಿಯಲ್ಲಿ ಪೃಥ್ವಿಗೆ ಯಾವುದೇ ಹಾನಿಯಾಗಿಲ್ಲ ಎಂಬುದು ತಿಳಿದುಬಂದಿದೆ.

ವಾಸ್ತವವಾಗಿ ಮುಂಬೈನ ಸಹಾರಾ ಸ್ಟಾರ್ ಹೋಟೆಲ್ನ ಮ್ಯಾನ್ಷನ್ ಕ್ಲಬ್ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.

ವರದಿಯ ಪ್ರಕಾರ ಸನಾ ಗಿಲ್ ಮತ್ತು ಶೋಬಿತ್ ಠಾಕೂರ್ ಎಂಬ ಇಬ್ಬರು ಯುವಕರು ಪೃಥ್ವಿ ಶಾ ಬಳಿ ಸೆಲ್ಫಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಒಪ್ಪಿದ ಪೃಥ್ವಿ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಅವರು ಮತ್ತೊಮ್ಮೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಪೃಥ್ವಿ ನಿರಾಕರಿಸಿದ್ದಾರೆ.

ಬಳಿಕ ಸ್ಥಳಕ್ಕೆ ಬಂದ ಹೋಟೆಲ್ ಮ್ಯಾನೇಜರ್ ಈ ಇಬ್ಬರನ್ನು ಹೋಟೆಲ್ನಿಂದ ಹೊರಗೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ಈ ಇಬ್ಬರು, ಶಾ ಮತ್ತು ಅವರ ಸ್ನೇಹಿತ ಕ್ಲಬ್ನಿಂದ ಹೊರಬರಲು ಕಾಯುತ್ತಿದ್ದರು. ಬಳಿಕ ಜೋಗೇಶ್ವರಿ ಲಿಂಕ್ ರೋಡ್ ಲೋಟಸ್ ಗ್ಯಾಸ್ ಸ್ಟೇಷನ್ ಬಳಿ ಶಾ ಹಾಗೂ ಅವರ ಸ್ನೇಹಿತ ಕಾರಿನಲ್ಲಿ ಹೊಗುತ್ತಿದ್ದಾರೆ ಎಂಬ ಊಹೆಯ ಮೇರೆಗೆ ಕಾರನ್ನು ಹಿಂಬಾಲಿಸಿಕೊಂಡು ಬಂದು ಬೇಸ್ ಬಾಲ್ ಬ್ಯಾಟ್ನಿಂದ ಕಾರಿನ ಗಾಜು ಒಡೆದಿದ್ದಾರೆ.

ಆದರೆ, ಆರೋಪಿಗಳು ದಾಳಿ ನಡೆಸಿದ ಕಾರಿನಲ್ಲಿ ಪೃಥ್ವಿ ಶಾ ಇರಲಿಲ್ಲ ಎಂಬುದು ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ಮುಂಚೆಯೇ ಮುಂಜಾಗೃತೆವಹಿಸಿದ್ದ ಪೃಥ್ವಿ ಶಾ, ಆಗಲೇ ಬೇರೆ ಕಾರಿನಲ್ಲಿ ಮನೆಗೆ ತೆರಳಿದ್ದರು.

ಸದ್ಯ ಪೃಥ್ವಿ ಶಾ ಹಾಗೂ ಅವರ ಸ್ನೇಹಿತನ ಕಾರಿನ ಮೇಲೆ ದಾಳಿ ನಡೆಸಿದ 8 ಜನರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.