IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿ ತಂಡವು ಕೊನೆಯ ಎಸೆತದಲ್ಲಿ ಸೋಲನುಭವಿಸಿತ್ತು. ಆದರೆ ಈ ಸೋಲಿನ ಬೆನ್ನಲ್ಲೇ ಆರ್ಸಿಬಿ ತಂಡದ ಮಾಜಿ ಆಟಗಾರ ಮಾಡಿದ ಟ್ವೀಟ್ವೊಂದು ಇದೀಗ ಚರ್ಚೆಗೆ ಕಾರಣವಾಗಿದೆ.
ಈ ಪಂದ್ಯದಲ್ಲಿ ಆರ್ಸಿಬಿ ನೀಡಿದ 212 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ 5 ರನ್ಗಳ ಅವಶ್ಯಕತೆಯಿತ್ತು. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್ನ 5 ಎಸೆತಗಳಲ್ಲಿ ಲಕ್ನೋ ಆಟಗಾರರು 4 ರನ್ ಕಲೆಹಾಕಿದ್ದರು.
ಕೊನೆಯ ಎಸೆತದಲ್ಲಿ 1 ರನ್ಗಳ ಅವಶ್ಯಕತೆ. ಅತ್ತ ಆರ್ಸಿಬಿಗೆ 1 ವಿಕೆಟ್ನ ಅನಿವಾರ್ಯತೆ. ಈ ಹಂತದಲ್ಲಿ ಬೌಲಿಂಗ್ ಮಾಡಲು ಓಡಿ ಬಂದ ಹರ್ಷಲ್ ಪಟೇಲ್ ನಾನ್ ಸ್ಟ್ರೈಕ್ನಲ್ಲಿದ್ದ ರವಿ ಬಿಷ್ಣೋಯ್ ಅವರನ್ನು ಮಂಕಡ್ ರನೌಟ್ ಮಾಡಲು ಯತ್ನಿಸಿದ್ದರು. ಆದರೆ ಓಡಿ ಬಂದ ಹರ್ಷಲ್ ಪಟೇಲ್ ಚೆಂಡನ್ನು ವಿಕೆಟ್ಗೆ ತಾಗಿಸುವಲ್ಲಿ ವಿಫಲರಾದರು. ಇದಾಗ್ಯೂ ರನೌಟ್ ಮಾಡಿದ್ರೂ ಅಂಪೈರ್ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದರು.
ಆ ಬಳಿಕ ಹರ್ಷಲ್ ಪಟೇಲ್ ಎಸೆದ ಕೊನೆಯ ಎಸೆತವನ್ನು ಬ್ಯಾಟ್ಗೆ ತಗುಲಿಸುವಲ್ಲಿ ಅವೇಶ್ ಖಾನ್ ವಿಫಲರಾದರು. ಇದಾಗ್ಯೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಚೆಂಡನ್ನು ಹಿಡಿಯುವಲ್ಲಿ ಎಡವಿದರು. ಕ್ಷಣಾರ್ಧದಲ್ಲಿ ಅವೇಶ್ ಖಾನ್ ಹಾಗೂ ರವಿ ಬಿಷ್ಣೋಯ್ 1 ರನ್ ಓಡುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 1 ವಿಕೆಟ್ನ ರೋಚಕ ಜಯ ತಂದುಕೊಟ್ಟರು.
ಇತ್ತ ಆರ್ಸಿಬಿ ತಂಡವು ಸೋಲುತ್ತಿದ್ದಂತೆ ಎಸ್ಆರ್ಹೆಚ್ ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಕರ್ಮ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದಂತೆ ಸ್ಟೇನ್ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಆದರೆ ಇದೀಗ ಮಾಜಿ ಆರ್ಸಿಬಿ ಆಟಗಾರನಾಗಿರುವ ಡೇಲ್ ಸ್ಟೇನ್ ಅವರು ಆರ್ಸಿಬಿ ಸೋಲಿಗೆ ಕರ್ಮ ಬಿಡಲ್ಲ ಎಂದೇಳಲು ಕಾರಣವೇನು? ಎಂಬ ಚರ್ಚೆ ಶುರುವಾಗಿದೆ. ಕೆಲವರು ಸ್ಟೇನ್ ಮಂಕಡ್ ರನೌಟ್ಗೆ ವಿರುದ್ಧ ಎಂದರೆ, ಇನ್ನು ಕೆಲವರು ಆರ್ಸಿಬಿ ಫ್ರಾಂಚೈಸಿ ಈ ಹಿಂದೆ ಸ್ಟೇನ್ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಇದರ ಆಕ್ರೋಶ ಹೊರಹಾಕಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಆರ್ಸಿಬಿ ಸೋಲಿನ ಬೆನ್ನಲ್ಲೇ ಡೇಲ್ ಸ್ಟೇನ್ ಅವರ ಕರ್ಮ ಟ್ವೀಟ್ ಮಾತ್ರ ಸಖತ್ ವೈರಲ್ ಆಗಿದ್ದು ಮಾತ್ರ ಸುಳ್ಳಲ್ಲ.