
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17ರ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡವು ಇದೀಗ ಮೂರನೇ ಪಂದ್ಯಕ್ಕಾಗಿ ಸಜ್ಜಾಗಿ ನಿಂತಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಏ.1) ನಡೆಯಲಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಆದರೆ ಈ ಪಂದ್ಯವು ಹಾರ್ದಿಕ್ ಪಾಂಡ್ಯ ಪಾಲಿಗೆ ಅಗ್ನಿಪರೀಕ್ಷೆಯಾಗಿ ಮಾರ್ಪಡುವ ಸಾಧ್ಯತೆಯಿದೆ. ಏಕೆಂದರೆ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇದೇ ಮೊದಲ ಬಾರಿಗೆ ವಾಂಖೆಡೆ ಸ್ಟೇಡಿಯಂನಲ್ಲಿ ಕಣಕ್ಕಿಳಿಯುತ್ತಿದೆ. ಇದಕ್ಕೂ ಮುನ್ನ ಮುಂಬೈ ಅಹಮದಾಬಾದ್ ಮತ್ತು ಹೈದರಾಬಾದ್ನಲ್ಲಿ ಪಂದ್ಯಗಳನ್ನಾಡಿತ್ತು.

ಈ ಎರಡು ಪಂದ್ಯಗಳ ವೇಳೆ ರೋಹಿತ್ ಶರ್ಮಾ ಅವರ ಅಭಿಮಾನಿಗಳಿಂದ ಹಾರ್ದಿಕ್ ಪಾಂಡ್ಯ ನಿಂದನೆ ಅನುಭವಿಸಿದ್ದರು. ಅದರಲ್ಲೂ ಪಾಂಡ್ಯ ಅವರ ತವರು ಅಹಮದಾಬಾದ್ನಲ್ಲೂ ಮೂದಲಿಸಲಾಗಿತ್ತು. ಇದೀಗ ಮುಂಬೈ ಕಾ ರಾಜ ಖ್ಯಾತಿಯ ರೋಹಿತ್ ಶರ್ಮಾ ಅವರ ತವರು ಮೈದಾನ ವಾಂಖೆಡೆಯಲ್ಲಿ ಕಣಕ್ಕಿಳಿಯಲು ಮುಂಬೈ ಇಂಡಿಯನ್ಸ್ ಸಜ್ಜಾಗಿದೆ.

ಹೇಳಿ ಕೇಳಿ ವಾಂಖೆಡೆ ಮೈದಾನ ರೋಹಿತ್ ಶರ್ಮಾರ ಅಡ್ಡ. ಇತ್ತ ಹಿಟ್ಮ್ಯಾನ್ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ಒಪ್ಪಿಕೊಳ್ಳಲು ಸುತಾರಾಂ ಸಿದ್ಧರಿಲ್ಲ. ಹೀಗಾಗಿಯೇ ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕನನ್ನು ಮೊದಲೆರಡು ಪಂದ್ಯಗಳಲ್ಲಿ ಮೂದಲಿಸಿದ್ದಾರೆ. ಇದೀಗ ವಾಂಖೆಡೆಯಲ್ಲಿ ಕಣಕ್ಕಿಳಿಯಲಿರುವ ಪಾಂಡ್ಯ ಮತ್ತೆ ಅವಮಾನಕ್ಕೊಳಗಾಗುವ ಸಾಧ್ಯತೆಯಿದೆ.

ಈಗಾಗಲೇ ರೋಹಿತ್ ಶರ್ಮಾ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಪಂದ್ಯದ ಟಿಕೆಟ್ಗಳನ್ನು ಬುಕ್ ಮಾಡಿಕೊಂಡಿದ್ದು, ಅದರಂತೆ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಹಿಟ್ಮ್ಯಾನ್ ಘೋಷಣೆಗಳು ಮುಗಿಲೆತ್ತರಕ್ಕೆ ಮೊಳಗುವುದು ಗ್ಯಾರಂಟಿ ಎನ್ನಬಹುದು.

ಇದರ ನಡುವೆ ಕೇಳಿ ಬರಲಿರುವ ಮೂದಲಿಕೆಯನ್ನು ಹಾರ್ದಿಕ್ ಪಾಂಡ್ಯ ಸಹಿಸಿಕೊಳ್ಳಲೇಬೇಕು. ಈ ಕಠಿಣ ಪರಿಸ್ಥಿತಿಯನ್ನು ಕ್ಯಾಪ್ಟನ್ ಪಾಂಡ್ಯ ಹೇಗೆ ಎದುರಿಸಲಿದ್ದಾರೆ ಎಂಬುದು ಇಂದು ಗೊತ್ತಾಗಲಿದೆ.