
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿಯು ಮುಂದಿನ ಸೀಸನ್ಗಾಗಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಚಂದ್ರಕಾಂತ್ ಪಂಡಿತ್ ಅವರನ್ನು ಕೆಕೆಆರ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಿದೆ.

ಚಂದ್ರಕಾಂತ್ ಪಂಡಿತ್ 2022 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದರು. ಅಲ್ಲದೆ ಅವರ ಮುಂದಾಳತ್ವದಲ್ಲಿ ಕೆಕೆಆರ್ ತಂಡವು 2024 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಚಂದ್ರಕಾಂತ್ ಪಂಡಿತ್ ಅವರನ್ನು ಕೈ ಬಿಟ್ಟು, ಮುಂದಿನ ಸೀಸನ್ಗೆ ಹೊಸ ಕೋಚ್ ಅನ್ನು ನೇಮಿಸಲು ಕೆಕೆಆರ್ ಮುಂದಾಗಿದೆ.

ಇನ್ನು ಚಂದ್ರಕಾಂತ್ ಪಂಡಿತ್ ಅವರ ಬೆನ್ನಲ್ಲೇ ಕಳೆದ ಸೀಸನ್ನಲ್ಲಿ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದ ಭರತ್ ಅರುಣ್ ಅವರನ್ನು ಸಹ ಕೈ ಬಿಡಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಈ ಹಿಂದೆ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಭರತ್ ಅರುಣ್ ಅವರು ಕಳೆದ ಕೆಲ ಸೀಸನ್ಗಳಿಂದ ಕೆಕೆಆರ್ ತಂಡದ ಬೌಲಿಂಗ್ ತರಬೇತುದಾರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನೂ ಸಹ ಕೈ ಬಿಡಲು ಕೆಕೆಆರ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಇತ್ತ ಮುಖ್ಯ ಕೋಚ್ ಹಾಗೂ ಬೌಲಿಂಗ್ ಕೋಚ್ ಬದಲಾವಣೆಯೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಈ ಬಾರಿ ಮಹತ್ವದ ಬದಲಾವಣೆಯಾಗುವುದು ಖಿಚತವಾಗಿದೆ. ಅದರಲ್ಲೂ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕೆಲ ಹಿರಿಯ ಆಟಗಾರರಿಗೆ ತಂಡದಿಂದ ಗೇಟ್ ಪಾಸ್ ನೀಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಐಪಿಎಲ್ 2026 ಕ್ಕೂ ಮುನ್ನ ಕೆಕೆಆರ್ ತಂಡದಿಂದ ಕೆಲ ಸ್ಟಾರ್ ಆಟಗಾರರು ಹೊರಬೀಳುವುದು ಖಚಿತ ಎನ್ನಬಹುದು.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಕ್ವಿಂಟನ್ ಡಿ ಕಾಕ್, ರಹಮಾನುಲ್ಲಾ ಗುರ್ಬಾಝ್, ಅಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಮಣ್ದೀಪ್ ಸಿಂಗ್, ಆ್ಯಂಡ್ರೆ ರಸೆಲ್, ಅನ್ರಿಕ್ ನೋಕಿಯ, ಹರ್ಷಿತ್ ರಾಣಾ, ಸುನಿಲ್ ನರೈನ್, ವರುಣ್ ಚಕ್ರವರ್ತಿ, ವೈಭವ್ ಅರೋರ, ಮಯಾಂಕ್ ಮಾರ್ಕಂಡೆ, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಸ್ಪೆನ್ಸರ್ ಜಾನ್ಸನ್, ಲವ್ನೀತ್ ಸಿಸೋಡಿಯಾ, ಅನ್ಕೂಲ್ ರಾಯ್, ಮೊಯಿನ್ ಅಲಿ.