ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಭಾರತ ಜಯ ಸಾಧಿಸುವ ಮೂಲಕ ಸರಣಿಯನ್ನು 2-0 ಅಂತರದಿಂದ ಕ್ಲೀನ್ಸ್ವೀಪ್ ಮಾಡಲಾಗಿದೆ. ಆದರೆ, ಎರಡನೇ ಟೆಸ್ಟ್ ಆರಂಭದ ಹೊತ್ತಿಗೆ ಪ್ಲೇಯಿಂಗ್ ಇಲೆವೆನ್ ಪ್ರಕಟಿಸುವಾಗ ಟೀಮ್ ಇಂಡಿಯಾ ತೆಗೆದುಕೊಂಡ ಒಂದು ನಿರ್ಧಾರ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
ಮೊದಲ ಟೆಸ್ಟ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡ ಕುಲ್ದೀಪ್ ಯಾದವ್ ಅವರನ್ನು ಹೊರಗಿಟ್ಟು ಜಯದೇವ್ ಉನಾದ್ಕಟ್ಗೆ ಸ್ಥಾನ ನೀಡಲಾಗಿತ್ತು. ಭಾರತದ ಈ ನಿರ್ಧಾರಕ್ಕೆ ಸಾಕಷ್ಟು ಟೀಕೆಗಳು ಕೇಳಿಬಂದವು, ಇದೀಗ ಪ್ಲೇಯಿಂಗ್ ಇಲೆವೆನ್ನಿಂದ ಕುಲ್ದೀಪ್ ಯಾದವ್ರನ್ನು ಯಾಕೆ ಕೈಬಿಟ್ಟೆವು ಎಂಬುದಕ್ಕೆ ನಾಯಕ ಕೆಎಲ್ ರಾಹುಲ್ ಸ್ಪಷ್ಟನೆ ನೀಡಿದ್ದಾರೆ.
ಗೆಲುವಿನ ಬಳಿಕ ಕೆಎಲ್ ರಾಹುಲ್ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಲ್ದೀಪ್ ಕಳೆದ ಪಂದ್ಯದಲ್ಲಿ ನಮಗೆ ಜಯ ತಯಂದುಕೊಟ್ಟಿದ್ದರು. ಆದರೂ ಅವರನ್ನು 2ನೇ ಟೆಸ್ಟ್ನಿಂದ ಕೈಬಿಡುವಂತ್ತಾಗಿದ್ದು ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಆದರೆ ಪಂದ್ಯದ ಮೊದಲ ದಿನ ಪಿಚ್ ಕಂಡಾಗ ಇದು ವೇಗಿಒಗಳು ಮತ್ತು ಸ್ಪಿನ್ನರ್ಸ್ ಇಬ್ಬರಿಗೂ ನೆರವಾಗುತ್ತದೆ ಎಂಬಂತೆ ಕಂಡುಬಂದಿತು. ಹೀಗಾಗಿ ಸಮತೋಲನ ತಂದುಕೊಳ್ಳಲು ನಾವು ಜಯದೇವ್ ಅವರನ್ನು ಆಯ್ಕೆ ಮಾಡಿಕೊಂಡೆವು - ಕೆಎಲ್ ರಾಹುಲ್.
ಎರಡನೇ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ ಅವರನ್ನು ಹೊರಗಿಟ್ಟ ನಿರ್ಧಾರದ ಬಗ್ಗೆ ತಮಗೆ ಯಾವುದೇ ಪಶ್ಚಾತಾಪವಿಲ್ಲ, ತಂಡದ ಸಮತೋಲನದ ದೃಷ್ಟಿಯಿಂದ ಇಂಥಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದು ಕೆಎಲ್ ರಾಹುಲ್ ಅವರ ಮಾತಾಗಿತ್ತು.
ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಹೊರತಾಗಿಯೂ ಕುಲ್ದೀಪ್ಗೆ ಆಡುವ ಬಳಗದಲ್ಲಿ ಸ್ಥಾನ ದೊರೆಯದ ಕಾರಣದಿಂದಾಗಿ ಟೀಮ್ ಇಂಡಿಯಾ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಸುನಿಲ್ ಗವಾಸ್ಕರ್, ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದರು.
ಕುಲ್ದೀಪ್ ಯಾದವ್ ಜಾಗಕ್ಕೆ ಬಂದ ಜಯದೇವ್ ಉನಾದ್ಕಟ್ ಬರೋಬ್ಬರಿ 12 ವರ್ಷಗಳ ಬಳಿಕ ಭಾರತ ಟೆಸ್ಟ್ ಪರ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದುಕೊಂಡರು. 2010ರಲ್ಲಿಯೇ ಇವರು ಭಾರತ ತಂಡದ ಟೆಸ್ಟ್ಗೆ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು.