
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೆ ಬಿಸಿಸಿಐ ದೊಡ್ಡ ಹೊಡೆತ ನೀಡಿದೆ. ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ರವೀಂದ್ರ ಜಡೇಜಾರನ್ನು ಭಾರತ ಏಕದಿನ ತಂಡದಿಂದ ಕೈಬಿಡಲಾಗಿದೆ.

ಅಹಮದಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ ಅಜೇಯ 104 ರನ್ ಗಳಿಸಿದರು. ನಂತರ ವೆಸ್ಟ್ ಇಂಡೀಸ್ನ ಎರಡನೇ ಇನ್ನಿಂಗ್ಸ್ನಲ್ಲಿ 13 ಓವರ್ಗಳಲ್ಲಿ ಕೇವಲ 54 ರನ್ ನೀಡಿ 4 ವಿಕೆಟ್ಗಳನ್ನು ಸಹ ಪಡೆದರು. ಪರಿಣಾಮವಾಗಿ, ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಮತ್ತು 140 ರನ್ಗಳ ಭಾರಿ ಸೋಲನ್ನು ಅನುಭವಿಸಿತು.

ಅದ್ಭುತ ಪ್ರದರ್ಶನಕ್ಕಾಗಿ ರವೀಂದ್ರ ಜಡೇಜಾ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಜಡೇಜಾಗೆ ಅವಕಾಶ ನೀಡಲಾಗಿಲ್ಲ. ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದ ಜಡೇಜಾಗೆ ಏಕದಿನ ಮಾದರಿಯಲ್ಲಿ ಅದುವೇ ಕೊನೆಯ ಪಂದ್ಯ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.

ವಿಶ್ವದ ನಂಬರ್ ಒನ್ ಟೆಸ್ಟ್ ಆಲ್ರೌಂಡರ್ ರವೀಂದ್ರ ಜಡೇಜಾ ಕೊನೆಯ ಬಾರಿಗೆ 2025 ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದ ಜಡೇಜಾ, ಬ್ಯಾಟಿಂಗ್ನಲ್ಲಿ ಅಜೇಯ 9 ರನ್ ಬಾರಿಸಿದ್ದರು. ಅಂತಿಮವಾಗಿ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು.

ಈ ಪಂದ್ಯಾವಳಿಯಲ್ಲಿ ರವೀಂದ್ರ ಜಡೇಜಾ ಅವರ ಪ್ರದರ್ಶನವು ನೀರಸವಾಗಿತ್ತು. ಆಡಿದ 5 ಪಂದ್ಯಗಳಲ್ಲಿ ಕೇವಲ 5 ವಿಕೆಟ್ಗಳನ್ನು ಗಳಿಸಿ, ಬ್ಯಾಟಿಂಗ್ನಲ್ಲಿ 27 ರನ್ ಮಾತ್ರ ಕಲೆಹಾಕಿದ್ದರು. ಆಯ್ಕೆದಾರರು ಜಡೇಜಾರನ್ನು ಏಕದಿನ ತಂಡಕ್ಕೆ ಸೇರಿಸದಿರಲು ಬಹುಶಃ ಈ ಪ್ರದರ್ಶನವೇ ಕಾರಣವಾಗಿರಬಹುದು, ಆದರೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಬೇರೆಯದೇ ಕಾರಣವನ್ನು ನೀಡಿದ್ದಾರೆ.

ತಂಡದ ಘೋಷಣೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ಜಡೇಜಾಗೆ ವಿಶ್ರಾಂತಿ ನೀಡುವುದು ಅವರ ಸಾಮರ್ಥ್ಯ ಅಥವಾ ಫಾರ್ಮ್ನ ಪರಿಣಾಮವಲ್ಲ, ಬದಲಾಗಿ ಅದು ಅವರನಮ್ಮ ಕಾರ್ಯತಂತ್ರದ ನಿರ್ಧಾರ. ಕುಲ್ದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ಈಗಾಗಲೇ ತಂಡದಲ್ಲಿರುವುದರಿಂದ ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.