ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಮಧ್ಯ ಭಾಗದಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಿಗಿಳಿಯುವುದಾಗಿ ಘೋಷಣೆ ಮಾಡಿದ ತಕ್ಷಣ ಆರ್ಸಿಬಿ ಮುಂದಿನ ಕ್ಯಾಪ್ಟನ್ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಡೇವಿಡ್ ವಾರ್ನರ್ ಹೀಗೆ ಅನೇಕ ಹೆಸರುಗಳ ಆರ್ಸಿಬಿ ಕ್ಯಾಪ್ಟನ್ ಸ್ಥಾನಕ್ಕೆ ಕೇಳಿಬಂದವು. ಆದರೆ, ಫ್ರಾಂಚೈಸಿ ಮಾತ್ರ ಇದುವರೆಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
ಐಪಿಎಲ್ 2022 ಮೆಗಾ ಆಕ್ಷನ್ ಕೂಡ ಹತ್ತಿರವಾಗುತ್ತಿದೆ. ಆದರೆ, ಆರ್ಸಿಬಿ ಫ್ರಾಂಚೈಸಿ ಹೊಸ ನಾಯಕನ ಬಗ್ಗೆ ಯಾವುದೇ ಸುಳಿವು ಕೂಡ ಕೊಟ್ಟಿಲ್ಲ. ಹೀಗಿರುವಾಗ ಮೂಲಗಳಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡದ ನಾಯಕ್ವ ವಹಿಸುವುದು ಬಹುತೇಕ ಖಚಿತ ಎಂದು ವರದಿಯಾಗಿದೆ.
ಹೌದು, 2009ರಲ್ಲಿ ಆರ್ಸಿಬಿ ತಂಡದಲ್ಲಿದ್ದಾಗಲೇ ಐಪಿಎಲ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದ ಮನೀಶ್ ಪಾಂಡೆ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಂಡು ನಾಯಕನ ಜವಾಬ್ದಾರಿಯನ್ನೂ ನೀಡುವ ಬಗ್ಗೆ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಒಲವು ತೋರಿದೆ ಎನ್ನಲಾಗಿದೆ.
ಮನೀಶ್ ಪಾಂಡೆ ನಾಯಕನಾಗಿ ಇದೇ ಮೊದಲ ಬಾರಿಗೆ ಏನು ಆಡುತ್ತಿಲ್ಲ. ಕ್ಯಾಪ್ಟನ್ ಆಗಿ ಇವರು ಕರ್ನಾಟಕ ತಂಡವನ್ನು ರಣಜಿ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಮುನ್ನಡೆಸಿ ಅಪಾರವಾದ ಅನುಭವವನ್ನ ಹೊಂದಿದ್ದಾರೆ.
ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಪಾಂಡೆ ಕೆಲವು ಪಂದ್ಯಗಳಲ್ಲಿ ನಾಯಕನಾಗಿ ಕಣಕ್ಕೆ ಇಳಿದಿದ್ದರು. ಹೀಗಾಗಿ ಮನೀಶ್ ಪಾಂಡೆ 15ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗುವುದು ಬಹುತೇಕ ಪಕ್ಕ ಎಂದು ಹೇಳಲಾಗುತ್ತಿದೆ.
32 ವರ್ಷದ ಮನೀಶ್ ಪಾಂಡೆ 3ನೇ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ವಿಭಾಗಕ್ಕೂ ಬಲ ತುಂಬುವ ನಿರೀಕ್ಷೆಯನ್ನು ಆರ್ಸಿಬಿ ಹೊಂದಿದೆ. ಐಪಿಎಲ್ನಲ್ಲಿ ಇದುವರೆಗೆ ಒಟ್ಟು 154 ಪಂದ್ಯ ಆಡಿರುವ ಮನೀಶ್ 30.68ರ ಸರಾಸರಿಯಲ್ಲಿ 3,560 ರನ್ ಬಾರಿಸಿದ್ದಾರೆ.
ಪಾಂಡೆ 2009ರಲ್ಲಿ ಆರ್ಸಿಬಿ ತಂಡದ ಪರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಚೊಚ್ಚಲ ಐಪಿಎಲ್ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿರುವ ಪಾಂಡೆ ಕೋಲ್ಕತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್ ಇಂಡಿಯಾ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿರುವ ಅನುಭವವನ್ನು ಹೊಂದಿದ್ದಾರೆ.
ಕಳೆದ ಐಪಿಎಲ್ನಲ್ಲಿ ಕೇನ್ ವಿಲಿಯಮ್ಸನ್ ಕೊನೇ ಪಂದ್ಯದಿಂದ ಹೊರಗುಳಿದಾಗ ಮನೀಶ್ ಪಾಂಡೆ ಅವರೇ ಸನ್ರೈಸರ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ, ಸನ್ರೈಸರ್ಸ್ ತಂಡ ಮನೀಶ್ರನ್ನು ರಿಟೇನ್ ಮಾಡಿಕೊಂಡಿಲ್ಲ. ಇತ್ತ ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಜೊತೆಗೆ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ರಿಟೇನ್ ಮಾಡಿಕೊಂಡಿದೆ.