
ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಟಿ20 ಸರಣಿ ಮುಕ್ತಾಯಗೊಂಡಿದೆ. ಸರಣಿಯನ್ನು ಕ್ಲೀನ್ಸ್ವೀಪ್ ಮಾಡುವ ಮೂಲಕ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಆದರೆ, ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಬುಧವಾರ ನಡೆದ ಅಂತಿಮ ತೃತೀಯ ಟಿ20 ಪಂದ್ಯ ರಣರೋಚಕ ಸೂಪರ್ ಓವರ್ಗೆ ಸಾಕ್ಷಿಯಾಯಿತು.

ಭಾರತೀಯ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅಫ್ಘಾನ್ ಪಂದ್ಯವನ್ನು ಟೈ ಮಾಡಿಕೊಂಡಿತು. ಬಳಿಕ ಎರಡೆರಡು ಸೂಪರ್ ಓವರ್ ನಡೆದು ಇದರಲ್ಲಿ ಭಾರತ ಜಯ ಸಾಧಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ದಾರೆ ನೋಡಿ.

ಈ ರೀತಿ ಕೊನೆಯ ಬಾರಿಗೆ ಯಾವಾಗ ಆಯಿತು ಎಂಬುದು ನನಗೆ ನೆನಪಿಲ್ಲ. ನಾನು ಐಪಿಎಲ್ ಪಂದ್ಯವೊಂದರಲ್ಲಿ 3 ಬಾರಿ ಬ್ಯಾಟ್ ಮಾಡಿದ್ದೇನೆ ಎಂದು ಭಾವಿಸುತ್ತೇನೆ. ನಮಗೆ ಜೊತೆಯಾಟ ಆಡುವುದು ಮುಖ್ಯವಾಗಿತ್ತು. ಹೀಗಾಗಿ ನಾನು ಮತ್ತು ರಿಂಕು ಸಿಂಗ್ ಮಾತನಾಡಿಕೊಂಡು ಇನ್ನಿಂಗ್ಸ್ ಕಟ್ಟಿದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇದು ನಮಗೆ ಉತ್ತಮ ಆಟವಾಗಿತ್ತು. ಸಾಕಷ್ಟು ಒತ್ತಡವು ಇತ್ತು. ತುಂಬಾ ಸಮಯ ಮತ್ತು ಕೊನೆಯವರೆಗೆ ಬ್ಯಾಟಿಂಗ್ ಮಾಡಬೇಕಾದ ಸ್ಥಿತಿ ಎದುರಾಯಿತು. ನಮ್ಮ ಆಟವನ್ನು ಆಡವುದರಲ್ಲಿ ನಾವು ಯಾವುದೇ ಕಾಂಪ್ರಮೈಸ್ ಮಾಡುವುದಿಲ್ಲ ಎಂಬುದು ರೋಹಿತ್ ಶರ್ಮಾ ಮಾತು.

ರಿಂಕು ಅವರನ್ನು ಹಾಡಿಹೊಗಳಿದ ರೋಹಿತ್, ಅವರು ಆಡಿದ ಕೊನೆಯ ಎರಡು ಸರಣಿಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಿದ್ದಾರೆ ಎಂಬುದು ನಾವೆಲ್ಲ ಕಂಡಿದ್ದೇವೆ. ತುಂಬಾ ಶಾಂತ ಸ್ವಭಾವ. ಅವನ ಶಕ್ತಿಯ ಬಗ್ಗೆ ಅವನಿಗೆ ಚೆನ್ನಾಗಿ ತಿಳಿದಿದೆ. ಅವರು ಬೆಳೆಯುತ್ತಿದ್ದಾರೆ. ನಾವು ನಿರೀಕ್ಷಿಸಿದ್ದನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಂತಹ ಆಟಗಾರರಿಂದ ತಂಡವು ಮುನ್ನಡೆಯಲು ಉತ್ತಮವಾಗಿದೆ. ನಮ್ಮ ತಂಡಕ್ಕೆ ಬ್ಯಾಕೆಂಡ್ನಲ್ಲಿ ಅಂತಹ ಆಟಗಾರ ಬೇಕಾಗಿತ್ತು. ರಿಂಕು ಅವರು ಐಪಿಎಲ್ನಲ್ಲಿ ಏನು ಮಾಡಿದ್ದಾರೆಂದು ನಮಗೆ ತಿಳಿದಿದೆ. ಅದೇ ಆಟವನ್ನು ಅವರು ಟೀಮ್ ಇಂಡಿಯಾಕ್ಕೂ ಕೊಂಡೊಯ್ದಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
Published On - 7:29 am, Thu, 18 January 24