
ವರುಣ್ ಚಕ್ರವರ್ತಿ... ಕಳೆದೊಂದು ತಿಂಗಳಿಂದ ಭಾರತ ಕ್ರಿಕೆಟ್ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸದ್ದು ಮಾಡುತ್ತಿರುವ ಟೀಂ ಇಂಡಿಯಾ ಸ್ಪಿನ್ನರ್. ತನ್ನ ಮ್ಯಾಜಿಕಲ್ ಎಸೆತಗಳಿಂದ ಎಂತಹಾ ಬ್ಯಾಟ್ಸ್ಮನ್ ಅನ್ನು ಕಟ್ಟಿಹಾಕುವ ಕಲೆ ಕಲಿತಿರುವ ವರುಣ್, ಪ್ರಸ್ತುತ ಟೀಂ ಇಂಡಿಯಾ ಸ್ಪಿನ್ ವಿಭಾಗದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದಾರೆ.

ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆದ ಬಳಿಕ ವರುಣ್ ಚಕ್ರವರ್ತಿಯ ನಸೀಬು ಬದಲಾಗಿದ್ದು, ಕೆಲವೇ ದಿನಗಳ ಅಂತರದಲ್ಲಿ ವರುಣ್ಗೆ ಟಿ20 ಹಾಗೂ ಏಕದಿನ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಇತ್ತ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವರುಣ್ ಯಶಸ್ವಿಯಾಗಿದ್ದಾರೆ. ಈ ಎರಡೂ ಮಾದರಿಗಳಲ್ಲೂ ವರುಣ್ಗೆ ಕೆಲವು ವರ್ಷಗಳವರೆಗೆ ಸ್ಥಾನ ಫಿಕ್ಸ್ ಅಂತಲೇ ಹೇಳಬಹುದು.

ಟಿ20 ಹಾಗೂ ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ವರುಣ್, ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡುವುದು ಯಾವಾಗ ಎಂಬುದು ಎಲ್ಲಾ ಅಭಿಮಾನಿಗಳ ಪ್ರಶ್ನೆಯಾಗಿದೆ. ಆದರೆ ಈ ಬಗ್ಗೆ ವರುಣ್ ಕಡೆಯಿಂದ ಬಂದಿರುವ ಉತ್ತರ ಅಭಿಮಾನಿಗಳಿಗೆ ಆಘಾತ ತಂದಿದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ನಿಂದ ಉಳಿಯಲು ನಿರ್ಧರಿಸಿರುವುದಾಗಿ ಸ್ವತಃ ವರುಣ್ ಅವರೇ ಹೇಳಿಕೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ ವರುಣ್ ಚಕ್ರವರ್ತಿ ಪ್ರಸ್ತುತ ಚರ್ಚೆಯ ವಿಷಯವಾಗಿದ್ದಾರೆ. ಪ್ರಶಸ್ತಿಯನ್ನು ಗೆದ್ದ ನಂತರ ದುಬೈನಿಂದ ಹಿಂದಿರುಗಿರುವ ಅವರು ಯೂಟ್ಯೂಬ್ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಟೆಸ್ಟ್ ಕ್ರಿಕೆಟ್ ಆಡುವ ಬಗ್ಗೆ ಪ್ರಶ್ನಿಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ 20 ಮತ್ತು 50 ಓವರ್ಗಳ ಕ್ರಿಕೆಟ್ನತ್ತ ಮಾತ್ರ ಗಮನ ಹರಿಸುತ್ತಿದ್ದೇನೆ. ನನಗೆ ಟೆಸ್ಟ್ ಕ್ರಿಕೆಟ್ ಆಡಲು ಆಸಕ್ತಿ ಇದೆ, ಆದರೆ ನನ್ನ ಬೌಲಿಂಗ್ ಶೈಲಿ ಟೆಸ್ಟ್ಗೆ ಹೊಂದಿಕೆಯಾಗುವುದಿಲ್ಲ. ನಿಜ ಹೇಳಬೇಕೆಂದರೆ, ನನ್ನ ಆಕ್ಷನ್ ಮತ್ತು ಬೌಲಿಂಗ್ ಶೈಲಿಯನ್ನು ನೋಡಿದರೆ, ಟೆಸ್ಟ್ನಲ್ಲಿ ದೀರ್ಘ ಸ್ಪೆಲ್ಗಳನ್ನು ಬೌಲ್ ಮಾಡಲು ನನಗೆ ಸಾಧ್ಯವಿಲ್ಲ ಎಂದಿದ್ದಾರೆ.

ವರುಣ್ ಅವರ ಈ ಹೇಳಿಕೆಯನ್ನು ಕೆಲವು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕನಿಷ್ಠ ಪಕ್ಷ ವರುಣ್ಗೆ ತನ್ನ ಬೌಲಿಂಗ್ ಬಗ್ಗೆ ಒಂದು ಕಲ್ಪನೆ ಇದೆ ಎಂದು ಹೇಳುತ್ತಿದ್ದಾರೆ. ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ವರುಣ್ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಆಡಿದ 3 ಪಂದ್ಯಗಳಲ್ಲಿ ಅವರು 9 ವಿಕೆಟ್ಗಳನ್ನು ಕಬಳಿಸಿದ್ದರು ಮತ್ತು ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.