
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡ ಈಗಾಗಲೇ ಜೋಹಾನ್ಸ್ಬರ್ಗ್ಗೆ ತೆರಳಿದ್ದು ಅಭ್ಯಾಸ ಶುರುಮಾಡಿದೆ. ಇದೇ ಡಿಸೆಂಬರ್ 26 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಬಾರಿ ಕೂಡ ಗಾಯದ ಸಮಸ್ಯೆಯೊಂದಿಗೆ ವಿರಾಟ್ ಕೊಹ್ಲಿ ಪಡೆ ಹರಿಣಗಳ ನಾಡಿಗೆ ಕಾಲಿಟ್ಟಿದೆ. ರೋಹಿತ್ ಶರ್ಮ ಹಾಗೂ ರವೀಂದ್ರ ಜಡೇಜಾ ಟೆಸ್ಟ್ ಸರಣಿಗೆ ಲಭ್ಯರಿಲ್ಲ. ಹೀಗಾಗಿ ಯುವ ಆಟಗಾರರ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿದೆ.

ರೋಹಿತ್ ಗಾಯದ ಸಮಸ್ಯೆಯಿಂದಾಗಿ 4 ವಾರಗಳ ಕಾಲ ತಂಡದಿಂದ ಹೊರಬಿದ್ದಿದ್ದು, ಸದ್ಯ ಬೆಂಗಳೂರಿನಲ್ಲಿರುವ ಎನ್ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಕೆಎಲ್ ರಾಹುಲ್ ಅವರನ್ನು ಉಪ ನಾಯಕನಾಗಿ ಘೋಷಣೆ ಮಾಡಲಾಗಿದೆ.

ಭಾರತ ತಂಡ

ಓಪನರ್ ಆಗಿ ಉಪ ನಾಯಕ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಟೀಮ್ ಇಂಡಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೀ ಆಟಗಾರನಾಗಿ ಕನ್ನಡಿಗ ರಾಹುಲ್ ಹೊರ ಹೊಮ್ಮಿದ್ದಾರೆ.

ರಾಹುಲ್ ಜೊತೆ ಭರ್ಜರಿ ಫಾರ್ಮ್ನಲ್ಲಿರುವ ಮಯಾಂಕ್ ಅಗರ್ವಾಲ್ ಆರಂಭಿಕರಾಗಲಿದ್ದಾರೆ. ಈ ಮೂಲಕ ಕನ್ನಡಿಗರಿಬ್ಬರು ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಮೂರನೇ ಕ್ರಮಾಂಕದಲ್ಲಿ ಆಡಲಿದ್ದು, ಇದು ಇವರಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ನಾಯಕ ವಿರಾಟ್ ಕೊಹ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಈ ಬಾರಿ ಆದರೂ ಇವರ ಬ್ಯಾಟ್ನಿಂದ ಸೆಂಚುರಿ ಬರುತ್ತಾ ಎಂಬುದು ನೋಡಬೇಕಿದೆ.

ಅಜಿಂಕ್ಯಾ ರಹಾನೆಗೆ ಸ್ಥಾನ ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಇವರ ಜಾಗಕ್ಕೆ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ.

ವಿಕೆಟ್ ಕೀಪರ್ ಆಗಿ ಮೊದಲ ಆಯ್ಕೆಯಲ್ಲಿರುವ ರಿಷಭ್ ಪಂತ್ ಆರನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಇನ್ನು ಬೊಂಬಾಟ್ ಫಾರ್ಮ್ನಲ್ಲಿರುವ ಹುನಮಾ ವಿಹಾರಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಬಹುದು.

ರವಿಚಂದ್ರನ್ ಅಶ್ವಿನ್ ಸ್ಥಾನ ಖಚಿತವಾಗಿದ್ದು ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.

ಮೇಗಿಗಳಾಗಿ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು.