ಕೆರಿಬಿಯನ್ನರ ನಾಡಿನಲ್ಲಿ ಜನವರಿ 14 ರಿಂದ ಆರಂಭವಾಗಲಿರುವ ಕಿರಿಯರ ಐಸಿಸಿ ಅಂಡರ್-19 ವಿಶ್ವಕಪ್ಗೆ ಭಾರತ ತಂಡ ಪ್ರಕಟವಾಗಿದೆ. ಬಿಸಿಸಿಐ ಆಯ್ಕೆ ಸಮಿತಿ 17 ಸದಸ್ಯರ ಭಾರತ ತಂಡವನ್ನು ಹೆಸರಿಸಿದ್ದು ಯಶ್ ಧುಲ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದೆ. ಉಪ ನಾಯಕನಾಗಿ ಆಂಧ್ರದ ಎಸ್ಕೆ ರಶೀದ್ ಹೆಸರು ಘೋಷಿಸಲಾಗಿದೆ.
ಅಂಡರ್-19 ವಿಶ್ವಕಪ್ಗೆ ಭಾರತ ತಂಡ ಪ್ರಕಟವಾಗುತ್ತಿದ್ದಂತೆ ನಾಯಕ ಯಶ್ ಧುಲ್ ಯಾರು ಎಂದು ಅನೇಕರು ಗೂಗಲ್ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ದೆಹಲಿಯ ಯಶ್ ಧುಲ್, ಈ ವರ್ಷದ ಆರಂಭದಲ್ಲಿ ವಿನೂ ಮಂಕಡ್ ಟ್ರೋಫಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ. ತಂಡವು ಆಡಿದ ಐದು ಪಂದ್ಯಗಳಲ್ಲಿ ದೆಹಲಿ ತಂಡಕ್ಕಾಗಿ ಅವರು 75.50 ಸರಾಸರಿಯಲ್ಲಿ ಬರೋಬ್ಬರಿ 302 ರನ್ಗಳನ್ನು ಗಳಿಸಿದ್ದರು.
ಇವರಿಗೆ ಅಂಡರ್ 16, ಅಂಡರ್ 19 ಮತ್ತು ಭಾರತ ಎ ತಂಡದ ಅಂಡರ್ 19ನಲ್ಲಿ ಆಡಿದ ಸಾಕಷ್ಟು ಅನುಭವವಿದೆ. 11ನೇ ವರ್ಷಕ್ಕೇ ಇವರು ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದರು. ಇವರ ತಂದೆ ಆರ್ಮಿಯಲ್ಲಿದ್ದವರು. ಈಗ ಬರುತ್ತಿರುವ ಪೆನ್ಶನ್ ಹಣದಲ್ಲಿ ಮನೆಯನ್ನು ನಡೆಸುತ್ತಿದ್ದಾರಂತೆ. ನಾನು ಯಾವ ಆಟಗಾರನ ಆಟದ ಶೈಲಿಯನ್ನೂ ಕಾಪಿ ಮಾಡುವುದಿಲ್ಲ, ಆದರೆ ಪ್ರತಿಯೊಬ್ಬ ಆಟಗಾರ ಕೂಡ ನನ್ನ ಹೀರೋ ಎಂಬುದು ಯಶ್ ಮಾತು.
ವೆಸ್ಟ್ ಇಂಡೀಸ್ನಲ್ಲಿ ಜನವರಿ 14ರಿಂದ ಫೆಬ್ರುವರಿ 5ರವರೆಗೆ 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ನಾಲ್ಕು ಬಾರಿ ವಿಶ್ವಕಪ್ ವಿಜೇತ ಭಾರತವು 'ಬಿ' ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಉಗಾಂಡ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಭಾರತ ಪರ ಕರ್ನಾಟಕದ ಅನೀಶ್ವರ್ ಗೌತಮ್ ಕೂಡ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
ಜೂನಿಯರ್ ವರ್ಲ್ಡ್ ಕಪ್ನಲ್ಲಿ ಭಾರತವೇ ಹೆಚ್ಚು ಪಾರಮ್ಯ ಮೆರೆದಿರುವುದು. ನಾಲ್ಕು ಬಾರಿ ಟ್ರೋಫಿ ಎತ್ತಿಹಿಡಿದಿದೆ. 2000, 2008, 2012 ಮತ್ತು 2018ರ ಕಿರಿಯರ ವಿಶ್ವಕಪ್ಗಳನ್ನ ಭಾರತದ ಹುಡುಗರು ಎತ್ತಿಹಿಡಿದಿದ್ದಾರೆ. 2016ರಲ್ಲಿ ರನ್ನರ್ ಅಪ್ ಆಗಿದ್ದಾರೆ. ಕಿರಿಯರ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ಸು ಕಂಡ ಶ್ರೇಯಸ್ಸು ಟೀಮ್ ಇಂಡಿಯಾದ್ದು.
ಭಾರತ ತಂಡ: ಯಶ್ ಧುಲ್ (ನಾಯಕ), ಎಸ್ಕೆ ರಶೀದ್ (ಉಪನಾಯಕ), ಹರ್ನೂರ್ ಸಿಂಗ್, ನಿಶಾಂತ್ ಸಿಧು, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾಬಾ (ವಿಕೀ), ಅರಾಧ್ಯ ಯಾದವ್ (ವಿಕೀ), ರಾಜ್ ಅನಾಗ್ ಬಾವಾ, ಮಾನವ್ ಪಾರಖ್, ಕೌಶಾಕ್ ತಂಬೆ, ಆರ್ಎಸ್ ಹಂಗಾರ್ಕೆರ್, ವಸು ವಾಟ್ಸ್, ವಿಕಿ ಒಟ್ಸಾವಲ್, ರವಿ ಕುಮಾರ್, ಗಾರ್ವ್ ಸಂಗ್ವಾನ್. ಮೀಸಲು ಆಟಗಾರರು: ರಿಶಿತ್ ರೆಡ್ಡಿ, ಉದಯ್ ಶಹರಣ್, ಅಂಶ್ ಗೊಸಾಯ್, ಅಮ್ರಿತ್ ರಾಜ್ ಉಪಾದ್ಯಾಯ್, ಪಿಎಂ ಸಿಂಗ್ ರಾಥೋಡ್.