
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗೂ ಮುನ್ನ ಆರ್ಸಿಬಿ ತಂಡವು ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು. ಅದರಂತೆ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಇದ್ದಾರೆ. ಆದರೆ ಐಪಿಎಲ್ನ ಯಶಸ್ವಿ ಸ್ಪಿನ್ ಬೌಲರ್ ಯುಜುವೇಂದ್ರ ಚಹಲ್ ಅವರನ್ನು ರಿಲೀಸ್ ಮಾಡಿ ಆರ್ಸಿಬಿ ಅಚ್ಚರಿ ಮೂಡಿತ್ತು.

ಆದರೀಗ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ನ ನಿರ್ಧಾರ ತಪ್ಪು ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ ಚಹಲ್. ಹೌದು, ವಿಜಯ್ ಹಜಾರೆ ಟೂರ್ನಿಯಲ್ಲಿ ಹರ್ಯಾಣ ಪರ ಆಡುತ್ತಿರುವ ಚಹಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

4 ಪಂದ್ಯಗಳನ್ನು ಆಡಿರುವ ಚಹಲ್ 38.1 ಓವರ್ನಲ್ಲಿ ನೀಡಿರುವುದು ಕೇವಲ 164 ರನ್ ಮಾತ್ರ. ಅಂದರೆ ಕೇವಲ 4.29 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ 11 ವಿಕೆಟ್ ಉರುಳಿಸುವ ಮೂಲಕ ಮಿಂಚಿದ್ದಾರೆ.

ಹೈದರಾಬಾದ್ ವಿರುದ್ದ 10 ಓವರ್ ಮಾಡಿದ್ದ ಚಹಲ್ 42 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಇನ್ನು ಜಾರ್ಖಂಡ್ ವಿರುದ್ದದ ಪಂದ್ಯದಲ್ಲಿ 10 ಓವರ್ಗಳಲ್ಲಿ 48 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಸೌರಾಷ್ಟ್ರ ವಿರುದ್ದ 8.1 ಓವರ್ನಲ್ಲಿ 31 ರನ್ಗೆ 2 ವಿಕೆಟ್ ಪಡೆದಿದ್ದರು. ದೆಹಲಿ ವಿರುದ್ದದ ಪಂದ್ಯದಲ್ಲಿ 10 ಓವರ್ಗಳಲ್ಲಿ 48 ರನ್ ನೀಡಿ 3 ವಿಕೆಟ್ ಉರುಳಿಸಿದ್ದಾರೆ.

ಈ ಮೂಲಕ ಹರ್ಯಾಣ ತಂಡದ ಗೆಲುವಿನಲ್ಲಿ ಯುಜುವೇಂದ್ರ ಚಹಲ್ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅತ್ತ ಮೆಗಾ ಹರಾಜಿಗೂ ಮುನ್ನವೇ ದೇಶೀಯ ಅಂಗಳದಲ್ಲಿ ಸ್ಪಿನ್ ಮೋಡಿ ಮಾಡುತ್ತಿರುವ ಚಹಲ್ ಅವರ ಖರೀದಿಗಾಗಿ ಐಪಿಎಲ್ ಫ್ರಾಂಚೈಸಿಗಳು ಒಲವು ಹೊಂದಿದೆ. ಹೀಗಾಗಿ ಮೆಗಾ ಹರಾಜಿಗೂ ಮುನ್ನವೇ ಚಹಲ್ ಹೊಸ ತಂಡಗಳ ಪಾಲಾದರೂ ಅಚ್ಚರಿಪಡಬೇಕಿಲ್ಲ.