ಕರ್ನಾಟಕದ ಊಟಿ ಎಂದೇ ಖ್ಯಾತಿ ಪಡೆದಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಪ್ರವಾಸಿಗರು, ಭಕ್ತರು ಆನೆ ದರ್ಶನ ಮಾಡಿ ಫುಲ್ ಖುಷ್ ಆಗಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಸಮುದ್ರ ಮಟ್ಟಕ್ಕಿಂತ 1,450 ಮೀಟರ್ ಎತ್ತರದಲ್ಲಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಈ ಪ್ರಸಿದ್ದ ದೇವಾಲಯವಿದೆ.
ಕಳೆದೊಂದಷ್ಟು ವರ್ಷಗಳಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಾಗ ಒಂಟಿ ಸಲಗ ಬಂದು ಹೋಗುತ್ತೆ. ಇದೊಂದು ರೀತಿಯ ವಿಸ್ಮಯವೆನಿಸಿದ್ದು ಗೋಪಾಲನ ಭಕ್ತ ಎಂದೇ ಈ ಒಂಟಿ ಸಲಗ ಖ್ಯಾತಿ ಪಡೆದಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರತಿನಿತ್ಯ ಕಾಣಿಸಿ ಕೊಳ್ಳುತ್ತಿರೊ ಒಂಟಿ ಸಲಗದ ವಿಡಿಯೋ ವೈರಲ್ ಆಗಿದೆ. ಎಷ್ಟೇ ಜನ ಬಂದು ಸೇರಿದರೂ ಈ ಆನೆ ದಾಳಿ ಮಾಡದೆ ಭಕ್ತರು ನೀಡುವ ಬಾಳೆಹಣ್ಣು, ಪ್ರಸಾದ ಸವಿಯುತ್ತೆ.
ಭಾರಿ ಗಾತ್ರದ ದಂತ ಹೊಂದಿರುವ ಈ ಕಾಡಾನೆ 4 ವರ್ಷದಿಂದ ಪ್ರತಿನಿತ್ಯ ವೇಣುಗೋಪಾಲಸ್ವಾಮಿಯ ದರ್ಶನಕ್ಕೆ ಬರುತ್ತಿದೆ. ಸಂಜೆ 4 ಗಂಟೆಯಾದರೆ ಸಾಕು ದೇವಾಲಯಕ್ಕೆ ಆಗಮಿಸಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕುತ್ತೆ.
ಒಂಟಿ ಸಲಗ ನೋಡಿ ಭಕ್ತರು ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ಟಿದ್ದಾರೆ. ಸೆಲ್ಪಿ ಕ್ಲಿಕ್ಕಿಸಿ ಒಂಟಿ ಸಲಗದೊಂದಿಗೆ ಫೋಸ್ ನೀಡಿದ ಪ್ರವಾಸಿಗರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.