
ಕಳಸ ತಾಲೂಕಿನ ಮೆರಸಣಿಗೆಯಲ್ಲಿ ಮರ ಬಿದ್ದು ಮನೆಯ ಮೇಲ್ಚಾವಣಿ ಪುಡಿಪುಡಿ ಯಾಗಿದ್ದು ಪ್ರೇಮ ಅನ್ನೋರಿಗೆ ಗಂಭೀರ ಗಾಯವಾಗಿದೆ. ತರಿಕೇರೆ ತಾಲೂಕಿನ ಕಲ್ಲತ್ತಿಗಿರಿಯಲ್ಲಿರುವ ಫಾಲ್ಸ್ ಮೈದುಂಬಿ ಧುಮ್ಮಿಕ್ಕುತ್ತಿದೆ. ಕಲ್ಲತ್ತಿಗಿರಿಯಲ್ಲೇ ಕಾರೊಂದರ ಮೇಲೆ ಮರ ಉರುಳಿಬಿದ್ದು ಕಾರು ಜಖಂಗೊಂಡಿದೆ.

ಮಳೆ ಪ್ರತಾಪಕ್ಕೆ ಕಾವೇರಿ, ಲಕ್ಷ್ಮಣತೀರ್ಥ, ಗರಗಂದೂರು ನದಿಗಳು ಉಕ್ಕಿ ಹರಿಯುತ್ತಿದ್ದು, ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದೆ. ಮೇಲ್ಸೇತುವೆ ಕೆಳಗಿನ ಅಂಗಡಿಗಳು ಕೂಡ ಜಾಲವೃತಗೊಂಡಿದ್ದು, ಅಂಗಡಿಯಲ್ಲಿದ್ದ ಸಾಮಗ್ರಿಗಳನ್ನು ವರ್ತಕರು ಬೇರೆಡೆಗೆ ಸಾಗಿಸಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿಘಾಟ್ ರಸ್ತೆ ಅಧ್ವಾನ ಆಗಿದೆ. ಆನೆಮಹಲ್ ಬಳಿ ಸುಮಾರು 100 ಮೀಟರ್ ಉದ್ದಕ್ಕೂ ರಸ್ತೆಯ ತಡೆಗೋಡೆ ಕುಸಿಯತೊಡಗಿದೆ. ಪ್ಲಾಸ್ಟಿಕ್ ಹೊದಿಕೆ ಹಾಕಿ ರಸ್ತೆ ರಕ್ಷಣೆಗೆ ಕಸರತ್ತು ಮಾಡುತ್ತಿದ್ದಾರೆ. ಇದೇ ಘಾಟ್ ರಸ್ತೆ ದೊಡ್ಡತಪ್ಲು ಬಳಿ ರಾತ್ರಿ ರಸ್ತೆಗೆ ಬೃಹತ್ ಮರ ಉರುಳಿತ್ತು. ಬೆಳಗ್ಗೆ ತನಕ ಮರ, ಮಣ್ಣು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಬೀಳುವ ಹಂತದಲ್ಲಿದ್ದ ಮರಗಳನ್ನು ಕಡಿಯಲಾಯಿತು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು, ತನಿಕೋಡು ಬಳಿ ಗುಡ್ಡ ಕುಸಿದು ಅವಾಂತರವಾಗಿದೆ. ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಜೂನ್ 20ರ ಬೆಳಗ್ಗೆ 8ರವರೆಗೆ ಸಂಚಾರ ನಿರ್ಬಂಧ ಹೇರಲಾಗಿದೆ. ತನಿಕೋಡು ಚೆಕ್ಪೋಸ್ಟ್ನಿಂದ ಎಸ್ಕೆ ಬಾರ್ಡರ್ವರೆಗೆ ಸಂಚಾರ ನಿಷೇಧ ಹೇರಿ ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ನಿರಂತರ ಮಳೆಗೆ ಶಿವಮೊಗ್ಗದ ತುಂಗಾ ನದಿ ತುಂಬಿ ಹರಿಯುತ್ತಿದೆ. ಈಗಾಗಲೇ ಡ್ಯಾಮ್ನಿಂದ 37 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿದ್ದು, ನದಿ ತಟ್ಟದಲ್ಲಿರುವ ಬಡಾವಣೆ ಜನರಿಗೆ ಪ್ರವಾಹದ ಆತಂಕ ಮನೆಮಾಡಿದೆ.

ಮಳೆಯಿಂದಾಗಿ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ನ ತಿರುವಿನಲ್ಲಿ ಮಣ್ಣು ಕುಸಿದಿದೆ. ಅದೇ ಜಾಗದಲ್ಲಿ ಲಾರಿಯೊಂದು ಕೆಟ್ಟು ನಿಂತಿದ್ದರಿಂದ ರಾತ್ರಿಯಿಂದ ನೂರಾರು ವಾಹನಗಳು ನಿಂತಲ್ಲೇ ನಿಂತಿದ್ದವು. ಹೊಸನಗರದ ಅರಮನೆಕೊಪ್ಪ ಬಳಿಯ ಕುಂದಗಲ್ನಲ್ಲಿ ಮತ್ತೆ 2 ಅಡಿ ಆಳಕ್ಕೆ ಭೂಮಿ ಕುಸಿದಿದೆ. ಹೀಗಾಗಿ ಶಾಸಕ ಆರಗ ಜ್ಞಾನೇಂದ್ರ ಸೇರಿ ಹಲವು ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಾಗರ ತಾಲೂಕಿನ ಸುಳ್ಳಳ್ಳಿ ಗ್ರಾಮದಲ್ಲಿ ಹಳ್ಳ ಕೊಚ್ಚಿಹೋಗಿದ್ದು, ಹರಿಯುತ್ತಿರುವ ನೀರಿನಲ್ಲೇ ಮಕ್ಕಳು ಶಾಲೆಗೆ ತೆರಳಲು ಪರದಾಡಿದ್ದಾರೆ. ವಿಶ್ವವಿಖ್ಯಾತ ಜೋಗ ಜಲಪಾತ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ದಂಡೇ ಬರುತ್ತಿದೆ.

ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹೇಮಾವತಿ ಜಲಾಶಯದ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಜಲಾಶಯದಲ್ಲಿ 26.120 ಟಿಎಂಸಿ ನೀರು ಸಂಗ್ರಹವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ನಿರೀಕ್ಷೆಯಿದೆ. ಯಾವುದೇ ಸಮಯದಲ್ಲಿ ನದಿಗೆ ನೀಡು ಬಿಡುವ ಸಾಧ್ಯತೆಯಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.