
ನವದೆಹಲಿಯ ಇಂಡಿಯಾ ಗೇಟ್ನಲ್ಲಿ ಕಾಣುತ್ತಿದ್ದ ಅಮರ್ ಜವಾನ್ ಜ್ಯೋತಿ ಇನ್ನು ಮುಂದೆ ಆ ಸ್ಥಳದಲ್ಲಿ ಕಾಣಸಿಗುವುದಿಲ್ಲ. ನೀವು ಇಂಡಿಯಾ ಗೇಟ್ಗೆ ಭೇಟಿ ಕೊಟ್ಟಿದ್ದರೆ ಅಥವಾ ಅಲ್ಲಿಗೆ ಹೋಗಿರದಿದ್ದರೂ ನೀವು ಅಮರ್ ಜವಾನ್ ಜ್ಯೋತಿ ನೋಡಿಯೇ ಇರುತ್ತೀರಿ. ಇಂಡಿಯಾ ಗೇಟ್ನಲ್ಲಿ ಅಮರ್ ಜವಾನ್ ಜ್ಯೋತಿ ನಿರಂತರವಾಗಿ ಉರಿಯುತ್ತಲೇ ಇರುತ್ತದೆ. ಇದೀಗ ಆ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಮರ್ ಜವಾನ್ ಜ್ಯೋತಿಯ ಬಗ್ಗೆ ನೀವು ತಿಳಿದಿರಬೇಕಾದ ಕುತೂಹಲಕಾರಿ ಅಂಶಗಳು ಇಲ್ಲಿದೆ.

ಇಂಡಿಯಾ ಗೇಟ್ ಬಳಿ ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿ ಸುಮಾರು 50 ವರ್ಷಗಳಿಂದ ಅಲ್ಲಿ ಉರಿಯುತ್ತಿದೆ. ಈ ಇಂಡಿಯಾ ಗೇಟ್ಅನ್ನು ಬ್ರಿಟೀಷ್ ಸರ್ಕಾರವು ಬ್ರಿಟೀಷ್ ಇಂಡಿಯನ್ ಆರ್ಮಿಯ ಸೈನಿಕರ ಸ್ಮಾರಕವಾಗಿ ನಿರ್ಮಿಸಿತ್ತು. 1914- 1921ರ ಅವಧಿಯಲ್ಲಿ ಜೀವತೆತ್ತ ಸೈನಿಕರ ನೆನಪಿಗಾಗಿ ಈ ಸ್ಮಾರಕ ನಿರ್ಮಾಣ ಮಾಡಲಾಗಿತ್ತು. ವಿಶ್ವಯುದ್ಧ 1, ನಾರ್ತ್ ವೆಸ್ಟ್ ಫ್ರಂಟಿಯರ್ ಅಫ್ಘಾನ್ ಯುದ್ಧದಲ್ಲಿ ಮಡಿದ ಸಾವಿರಾರು ಬ್ರಿಟಿಷ್ ಇಂಡಿಯನ್ ಸೈನಿಕರ ಹೆಸರೂ ಈ ಸ್ಮಾರಕದಲ್ಲಿದೆ.

ಇಂಡಿಯಾ ಗೇಟ್ನ ಶಂಕುಸ್ಥಾಪನೆಯನ್ನು ಡ್ಯೂಕ್ ಕನ್ನಾಟ್ 1921ರಲ್ಲಿ ಮಾಡಿದ್ದರು. ಎಡ್ವಿನ್ ಲುಟಿನ್ಸ್ ಎಂಬವರು ಇದರ ವಿನ್ಯಾಸ ಮಾಡಿದ್ದರು. ಆ ಬಳಿಕ, 10 ವರ್ಷಗಳ ನಂತರ ಈ ಸ್ಮಾರಕವನ್ನು ವೈಸ್ರಾಯ್ ಲಾರ್ಡ್ ಐರ್ವಿನ್ ಲೋಕಾರ್ಪಣೆ ಮಾಡಿದ್ದರು.

ಇಂಡಿಯಾ ಗೇಟ್ನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಲಾಯಿತು. ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಅಲ್ಲಿಗೆ ಅಮರ್ ಜವಾನ್ ಸ್ಮಾರಕ ಸೇರ್ಪಡೆ ಮಾಡಲಾಯಿತು. ಬಳಿಕ ಕೆಲವು ಸಮಯಗಳ ನಂತರ ಅಲ್ಲಿಗೆ ಜ್ಯೋತಿ ಸೇರ್ಪಡೆ ಆಗಿದ್ದು ಅದು ಹಗಲು ರಾತ್ರಿ ಎನ್ನದೆ ಸತತವಾಗಿ ಉರಿಯುತ್ತಿತ್ತು.

1971 ರ ಡಿಸೆಂಬರ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ನಡೆಯಿತು. ಭಾರತದ ಹಲವು ಸೈನಿಕರು ಆ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಯುದ್ಧ ಅಂತ್ಯವಾದ ಬಳಿಕ ಅವರ ಸ್ಮರಣೆಗಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅಮರ್ ಜವಾನ್ ಜ್ಯೋತಿಯನ್ನು ಉದ್ಘಾಟನೆ ಮಾಡಿದರು. ಜನವರಿ 26, 1972 ರಂದು ಅಮರ್ ಜವಾನ್ ಜ್ಯೋತಿ ಉದ್ಘಾಟಿಸಿದರು.

ಅಮರ್ ಜವಾನ್ ಎಂಬುದು ಕಪ್ಪು ಬಣ್ಣದಲ್ಲಿ ಇರುವ ಸ್ಮಾರಕ ಆಗಿದೆ. ಅದರ ಮೇಲೆ L1A1 ಸೆಲ್ಫ್ ಲೋಡಿಂಗ್ ರೈಫಲ್ ಸಹ ಇರಿಸಲಾಗಿದೆ. ಹಾಗೂ ಸೈನಿಕನ ಶಿರಸ್ತ್ರಾಣ ಕೂಡ ಇಡಲಾಗಿದೆ. ಅಂದಿನಿಂದ ಇಂದಿನವರೆಗೆ ಆ ಜ್ಯೋತಿ ಉರಿಯುತ್ತಿದೆ. ಮಾಹಿತಿಯಂತೆ 1971 ರಿಂದ 2006ರ ವರೆಗೆ ಎಲ್ಪಿಜಿ ಬಳಸಿ ಜ್ಯೋತಿ ಉರಿಸಲಾಗಿತ್ತು ಹಾಗೂ ಬಳಿಕ ಸಿಎನ್ಜಿ ಬಳಕೆ ಮಾಡಲಾಗುತ್ತಿತ್ತು.