
ಏರ್ ಕಮೋಡೋರ್ ಎಸ್ಬಿ ಅರುಣ್ ಕುಮಾರ್ ವಿಎಸ್ಎಂ, ಡೆಪ್ಯುಟಿ ಡೈರೆಕ್ಟರ್ ಜನರಲ್, ಕರ್ನಾಟಕ ಮತ್ತು ಗೋವಾ ಏನ್ ಸಿಸಿ ಡೈರೆಕ್ಟರೇಟ್ ಮತ್ತು ಪ್ರಸಿದ್ಧ ನಟಿ ಹಾಗು ಮಾಡೆಲ್ ಶ್ರೀನಿಧಿ ಶೆಟ್ಟಿ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದರು.

ಚಿಕ್ಕಬಳ್ಳಾಪುರದ 20 ಕಾಲೇಜುಗಳ 5 ಕರ್ನಾಟಕ ಬೆಟಾಲಿಯನ್ನ ಸುಮಾರು 1,000 ಎನ್ಸಿಸಿ ಕೆಡೆಟ್ಗಳು, ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಕೋರ್ (ಎಂಇಜಿ)ನ 200 ಸೈನಿಕರು, ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ ಉಪ ತರಬೇತಿ ಕೇಂದ್ರ (ಎಸ್ಟಿಸಿ)ದ 120 ಜವಾನರು ಮತ್ತು 2 ಅಧಿಕಾರಿಗಳು ಆದಿಯೋಗಿಯ ಸಮ್ಮುಖದಲ್ಲಿ ಈಶ ಹಠಯೋಗ ಶಿಕ್ಷಕರು ನಡೆಸಿದ ಯೋಗ ಸೆಷಸ್ಗಳಲ್ಲಿ ಪಾಲ್ಗೊಂಡರು.

ಏರ್ ಕಾಮೋಡರ್ ಎಸ್ಬಿ ಅರುಣ್ ಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ದೇಶದ ಎಲ್ಲ ಜನರೂ, ಮುಖ್ಯವಾಗಿ ಯುವಪೀಳಿಗೆ ಯೋಗವನ್ನು ತಮ್ಮ ಜೀವನಶೈಲಿಯನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಯೋಗ ಕೇವಲ ಶಾರೀರಿಕ ವ್ಯಾಯಾಮವಲ್ಲ, ಬದಲಿಗೆ ದೇಹ ಮತ್ತು ಮನಸ್ಸನ್ನು ಪುನಶ್ಚೇತನಗೊಳಿಸುವ ಒಂದು ಪರಿಪೂರ್ಣ ಅಭ್ಯಾಸ ಎಂದು ಅವರು ಹೇಳಿದರು.

ಜಗತ್ತಿನೆಲ್ಲೆಡೆ ನಾವೆಲ್ಲರೂ ಒಬ್ಬರಿಗೊಬ್ಬರು ಬೆಸೆದುಕೊಂಡಿದ್ದೇವೆ ಮತ್ತು, ಯೋಗದ ಮೂಲಕ, ನಾವು ನಮ್ಮಲ್ಲಿನ ತಡೆಗೋಡೆಗಳನ್ನು ಮುರಿದು, ವಿಶ್ವವನ್ನೇ ಒಂದು ಕುಟುಂಬವನ್ನಾಗಿ ಮಾಡಬಹುದು. ಯೋಗ, ಶಿಸ್ತು ಮತ್ತು ಏಕಾಗ್ರತೆಯನ್ನು ತರುತ್ತದೆ. ವಿದ್ಯಾರ್ಥಿ ಮತ್ತು ಎನ್ಸಿಸಿ ಪಡೆಗೆ ಈ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ತಮ್ಮೆಲ್ಲ ಚಟುವಟಿಕೆಗಳಲ್ಲಿ ಸಹಾಯವಾಗುತ್ತದೆ ಎಂದು ಏರ್ ಕಾಮೋಡರ್ ಎಸ್ಬಿ ಅರುಣ್ ಕುಮಾರ್ ಹೇಳಿದರು.

ಕೆಜಿಎಫ್ ಸಿನೆಮಾದ ಜನಪ್ರಿಯ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿ, ಏನು ಸರಿ, ಏನು ತಪ್ಪು, ಏನು ಮಾಡಬೇಕು, ಏನು ಮಾಡಬಾರದು ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಾವು ಕೇವಲ ಕಾರ್ಯಪ್ರವೃತ್ತರಾಗಬೇಕು ಅಷ್ಟೇ ಎಂದರು. ಪರಿಸರ ಮಾಲಿನ್ಯದಿಂದಾಗಿ, ಜನರು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮ ಹೆಚ್ಚಿಸಲು ಆಂತರಿಕವಾಗಿ ತಿರುಗುವುದು ಅನಿವಾರ್ಯ. ನಾವು ಉಸಿರಾಡುವ ಗಾಳಿ, ನಡೆಯುವ ಮಣ್ಣು, ಕುಡಿಯುವ ನೀರು, ಎಲ್ಲವೂ ಕ್ಷೀಣಿಸಿದೆ. ‘ಆಂತರಿಕವಾಗಿ ಆನಂದದಿಂದಿರಲು’ ಯೋಗದ ನಿಯಮಿತ ಅಭ್ಯಾಸವನ್ನು ಕೈಗೊಳ್ಳುವಂತೆ ಜನರಲ್ಲಿ ಕೇಳಿಕೊಂಡರು.

ಏರ್ ಕಮೋಡೋರ್ ಎಸ್ಬಿ ಅರುಣ್ಕುಮಾರ್ ಸದ್ಗುರು ಸನ್ನಿಧಿಯಲ್ಲಿರುವ ಸಮುದಾಯ ಯೋಗ ಹಾಲ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಇಂದಿನಿಂದ ಈ ಹಾಲ್ ನಲ್ಲಿ ಸಾರ್ವಜನಿಕರಿಗೆ ಪ್ರತಿದಿನ ಉಚಿತ ಯೋಗ ಸೆಷನ್ ನಡೆಸಲಾಗುತ್ತದೆ. ಈಶದ ಹಠ ಯೋಗ ಶಿಕ್ಷಕರು ಪ್ರತಿದಿನ ವರ್ಷಪೂರ್ತಿ ಬೆಳಿಗ್ಗೆ 10:30 ರಿಂದ ಸಂಜೆ 6:00 ರವರೆಗೆ 30 ನಿಮಿಷಗಳ ಸೆಷನ್ ನಡೆಸುತ್ತಾರೆ. ಈ ಸೆಷನ್ಗಳು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿವೆ.