ಅದು ಯಾರೇ ಆಗಲಿ, ತಮ್ಮ ಮಗುವಿನಿಂದ ಯಶಸ್ಸನ್ನು ನಿರೀಕ್ಷಿಸುವುದು ತಪ್ಪಲ್ಲ. ಆದರೆ, ಮಗುವಿನಲ್ಲಿ ಆ ಯಶಸ್ಸಿಗೆ ಬೇಕಾದಂತಹ ಆಚಾರ ವಿಚಾರಗಳನ್ನು ಮಗುವಿನಲ್ಲಿ ಸಣ್ಣದಿನಿಂದಲೇ ತಿಳಿಸಬೇಕು. ಸರಿ, ತಪ್ಪುಗಳ ನಡುವಿನ ವ್ಯತ್ಯಾಸವನ್ನು ಕಲಿಸಿದಾಗ ಮಾತ್ರ ಮಗು ಉತ್ತಮವಾಗಿ ಬೆಳೆದು ಯಶಸ್ಸನ್ನು ಪಡೆಯುತ್ತದೆ. ಪೋಷಕರು ನೀಡಿದ ಮೌಲ್ಯಗಳು ಯಾವತ್ತೂ ಮಗುವಿನ ಜೊತೆಗೆ ಇರುತ್ತದೆ. ಮಗುವಿನ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ಆಚಾರ್ಯ ಚಾಣಕ್ಯ ಹೇಳಿದ ಕೆಲವು ವಿಷಯಗಳನ್ನು ಇಲ್ಲಿ ತಿಳಿಯೋಣ.
ಚಾಣಕ್ಯ ನೀತಿಯ ಪ್ರಕಾರ ಅನೇಕ ಬಾರಿ ಮಕ್ಕಳು ಪೋಷಕರಿಗೆ ಸುಳ್ಳು ಹೇಳುವ ಸಂಭವ ಇರುತ್ತದೆ. ಪೋಷಕರು ಆಗ ಕೆಲವೊಮ್ಮೆ ಅದನ್ನು ನಿರ್ಲಕ್ಷದಿಂದ ಕಾಣುತ್ತಾರೆ. ಆದರೆ, ಭವಿಷ್ಯದಲ್ಲಿ ಇದು ಅವರನ್ನು ಹಾಳುಮಾಡಬಹುದು. ಮಕ್ಕಳು ಹೀಗೆಯೇ ಸುಳ್ಳು ಹೇಳಿ ಕಷ್ಟಕ್ಕೆ ಒಳಗಾಗಬಹುದು. ಆದ್ದರಿಂದ ಸುಳ್ಳು ಮತ್ತು ಸತ್ಯ ಹೇಳುವ ಬಗ್ಗೆ ಅವರಿಗೆ ತಿಳಿಹೇಳುವುದು ಮುಖ್ಯ. ಅಂತಹ ತಪ್ಪುಗಳನ್ನು ನಿರ್ಲಕ್ಷ್ಯ ಮಾಡುವುದು ಪೋಷಕರ ದೊಡ್ಡ ತಪ್ಪು.
ಕೆಲವು ಮಕ್ಕಳು ಹಠಮಾರಿಗಳು ಆಗಿರುತ್ತಾರೆ. ಅವರ ಹೆತ್ತವರ ಮಾತನ್ನು ಕೇಳುವುದಿಲ್ಲ. ಇಂತಹ ಅಭ್ಯಾಸಗಳನ್ನು ಬಾಲ್ಯದಲ್ಲಿಯೇ ಸರಿಪಡಿಸಿಕೊಳ್ಳಬೇಕು. ಪ್ರೀತಿಯಿಂದ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ಗುರುತಿಸಲು ಪೋಷಕರು ಕಲಿಸಬೇಕು. ಇಲ್ಲದಿದ್ದರೆ ಈ ಅಭ್ಯಾಸ ಅವರಿಗೆ ಹಾನಿಕಾರಕ ಆಗಬಹುದು.
ಚಾಣಕ್ಯನ ಪ್ರಕಾರ ಮಕ್ಕಳ ಶಿಕ್ಷಣದಲ್ಲಿ ಯಾವುದೇ ಸಮಯ ವ್ಯರ್ಥ ಆಗದಂತೆ ನೋಡಿಕೊಳ್ಳಿ. ಕಲಿಕೆ ನಿರಂತರ ಆಗಿರಲಿ. ಕಲಿಕೆ ಎಂದರೆ ಶಾಲಾ ಶಿಕ್ಷಣ ಮಾತ್ರವಲ್ಲದೆ ಇತರ ಮೌಲ್ಯ, ಶಿಕ್ಷಣ, ಬದುಕಿನ ಕಲಿಕೆಯೂ ಹೌದು. ಶಿಕ್ಷಣದ ಜೊತೆಗೆ ಮಹಾಪುರುಷರ ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ಉತ್ತಮ ಕೆಲಸ ಮಾಡಲು ಪ್ರೇರೇಪಿಸಿ. ಇದರೊಂದಿಗೆ ಮಗುವಿನಲ್ಲಿ ಒಳ್ಳೆಯ ಆಲೋಚನೆಗಳು ಬೆಳೆಯುತ್ತವೆ. ಅವರ ಮನಸಿನಲ್ಲಿ ತಾವೂ ಕೂಡ ಮಹಾಪುರುಷರಂತೆ ಆಗಬೇಕು ಎಂಬ ಆಶಯ ಮೂಡುತ್ತದೆ. ಅಂತಹ ಸನ್ನಿವೇಶದಲ್ಲಿ ಮಕ್ಕಳು ಸ್ವತಃ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರಾರಂಭಿಸುತ್ತಾರೆ.
ಚಾಣಕ್ಯ ನೀತಿಯು ಬದುಕಿನ ಬಗ್ಗೆ ಹಲವು ಅಂಶಗಳನ್ನು ತಿಳಿಸಿಕೊಡುತ್ತದೆ. ಚಾಣಕ್ಯ ಬದುಕಿನ ಸಮಗ್ರ ಸಾರವನ್ನು ಧಾರೆ ಎರೆದಂತೆ ಚಾಣಕ್ಯ ನೀತಿಯಲ್ಲಿ ಒಳಿತು ಕೆಡುಕುಗಳನ್ನು ತಿಳಿಸಿ ನಮ್ಮನ್ನು ಎಚ್ಚರಿಸಿದ್ದಾನೆ. ಅದನ್ನು ಅರ್ಥಮಾಡಿಕೊಂಡರೆ ನಾವು ಕನಿಷ್ಠ ಕೆಲವು ಸಮಸ್ಯೆಗಳಿಂದ ಆದರೂ ಹೊರಬರಬಹುದು.