ಮಡಿಕೇರಿ: ಮಗನನ್ನು ವಧುವಿನಂತೆ, ಮಗಳನ್ನು ವರನಂತೆ ಶೃಂಗರಿಸಿ ಮೆರೆವಣಿಗೆ, ಏನಿದು ವಿಶಿಷ್ಟ ಆಚರಣೆ; ಇಲ್ಲಿದೆ ನೋಡಿ

ಕಿರಣ್ ಹನುಮಂತ್​ ಮಾದಾರ್

Updated on: Mar 27, 2023 | 3:07 PM

ಹಬ್ಬ ಹರಿದಿನಗಳ ಉತ್ಸವಗಳ ಸಂದರ್ಭ ಬಂದಾಗ ಕೊಡಗು ಜಿಲ್ಲೆ ಬಹಳ ವಿಶೇಷ ಸ್ಥಾನದಲ್ಲಿ ನಿಲ್ಲುತ್ತದೆ. ಯಾಕಂದರೆ ಈ ಜಿಲ್ಲೆಯಲ್ಲಿ ನಡೆಯುವ ವೈವಿಧ್ಯಮಯ ಉತ್ಸವಗಳ ವೈಭವವೇ ಅಂತಹದ್ದು. ಗಂಡನ್ನು ಮಧುಮಗಳಂತೆಯೂ, ಹೆಣ್ಣನ್ನು ಮಧು ಮಗನಂತೆಯೂ ಶೃಂಗರಿಸಿ ಹರಕೆ ತೀರಿಸುವ ಬಗೆಯೇ ವಿಶಿಷ್ಟವಾದ ಆಚರಣೆಯೊಂದು ನಡೆದಿದೆ. ಏನಿದು ಅಂತೀರಾ ಇಲ್ಲಿದೆ ನೋಡಿ.

1 / 7
ಸುತ್ತಲೂ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳ ಸಾಲು, ಅದರ ಮಧ್ಯೆ ವಿರಾಜಮಾನವಾಗಿರುವ ದೇವರ ಗುಡಿ. ಆ ದೇವರ ಗುಡಿಯ ಸುತ್ತಲೂ ಜಿಂಕೆಯ ಕೊಂಬು ಮತ್ತು ಪ್ರಾಣಿಗಳ ದುಪ್ಪಟ್ಟ ಹಿಡಿದು ಲಯಬದ್ಧವಾದ ಚಂಡೆಗೆ ಕುಣಿಯುತ್ತಿರುವ ಭಕ್ತವೃಂದ. ಇದು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಇಬ್ಬನಿವಲವಾಡಿ ಗ್ರಾಮದ ಭದ್ರಕಾಳಿ ದೇವರ ಉತ್ಸವದಲ್ಲಿ ಕಂಡುಬಂದ ದೃಶ್ಯಗಳು.

ಸುತ್ತಲೂ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳ ಸಾಲು, ಅದರ ಮಧ್ಯೆ ವಿರಾಜಮಾನವಾಗಿರುವ ದೇವರ ಗುಡಿ. ಆ ದೇವರ ಗುಡಿಯ ಸುತ್ತಲೂ ಜಿಂಕೆಯ ಕೊಂಬು ಮತ್ತು ಪ್ರಾಣಿಗಳ ದುಪ್ಪಟ್ಟ ಹಿಡಿದು ಲಯಬದ್ಧವಾದ ಚಂಡೆಗೆ ಕುಣಿಯುತ್ತಿರುವ ಭಕ್ತವೃಂದ. ಇದು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಇಬ್ಬನಿವಲವಾಡಿ ಗ್ರಾಮದ ಭದ್ರಕಾಳಿ ದೇವರ ಉತ್ಸವದಲ್ಲಿ ಕಂಡುಬಂದ ದೃಶ್ಯಗಳು.

2 / 7

ಇಲ್ಲಿ ಪ್ರತಿವರ್ಷ ಮಾರ್ಚ್ ತಿಂಗಳ ನಾಲ್ಕನೇ ವಾರದಲ್ಲಿ ಭದ್ರಕಾಳಿ ಉತ್ಸವ ನೆರವೇರುತ್ತದೆ. ಈ ಸಂದರ್ಭ ಊರಿನ ಮಂದಿ ವಿಶಿಷ್ಟವಾದ ಹರಕೆಯೊಂದನ್ನು ಕಟ್ಟಿಕೊಳ್ಳುತ್ತಾರೆ. ತಮ್ಮ ಬೇಡಿಕೆ ಈಡೇರಿದರೆ ತಮ್ಮ ಮಗನನ್ನು ಮಧುಮಗಳಂತಯೇ ಮಗಳನ್ನು ಮಧುಮಗನಂತೆ ಶೃಂಗರಿಸಿ ದೇವಸ್ಥಾನದ ಮೂರು ಸುತ್ತು ಒಡ್ಡೋಲಗ ಸಮೇತ ಮೆರವಣಿಗೆ ಮಾಡುವುದಾಗಿ ಬೇಡಿಕೊಂಡಿರುತ್ತಾರೆ.

3 / 7

ಅದರಂತೆ ಬೇಡಿಕೆ ಈಡೇರಿದರೆ ಹಬ್ಬದ ದಿನವೇ ಈ ಹರಕೆಯನ್ನ ತೀರಿಸುತ್ತಾರೆ. ಇದಕ್ಕೆ ಆಂಗೋಲ ಪೋಂಗೋಲ ಎಂದು ಕರೆಯಲಾಗುತ್ತದೆ. ಜನರು ಎಷ್ಟೇ ಮಾಡರ್ನ್ ಆದರೂ ಇಂದೀಗೂ ಈ ಸಾಂಪ್ರದಾಯಿಕ ಆಚರಣೆಗಳನ್ನ ಬಿಟ್ಟಿಲ್ಲ ಎನ್ನುವುದು ವಿಶೇಷ.

4 / 7

ಇನ್ನು ಈ ಊರ ಹಬ್ಬದಲ್ಲಿ ಮೂರು ಬಗೆಯ ಸಾಂಪ್ರದಾಯಿಕ ನೃತ್ಯಗಳನ್ನ ಮಾಡಲಾಗುತ್ತದೆ. ಬಿಳಿಯ ಕುಪ್ಪಸ ಧರಿಸಿದ ಊರಿನ ಪುರುಷರು ಕೈಯಲ್ಲಿ ನವಿಲು ಗರಿಯ ಗೊಂಚಲು ಹಿಡಿದು ಚಂಡೆ ನಾದಕ್ಕೆ 12 ಬಗೆಯ ನೃತ್ಯ ಮಾಡುತ್ತಾರೆ. ವಿಶಾಲ ಬಯಲಿನಲ್ಲಿ ಬೆಟ್ಟಗುಡ್ಡಗಳ ಮಧ್ಯೆ ಮಾಡೋ ಈ ನೃತ್ತ ವೀಕ್ಷಿಸುವುದೇ ಒಂದು ಆನಂದ. ಇದನ್ನು ಪೀಲಿಯಾಟ್ ಎಂದು ಕರೆಯಲಾಗುತ್ತದೆ.

5 / 7

ಶ್ರೀ ವಿಷ್ಣು ಭಸ್ಮಾಸುರನನ್ನು ವಧಿಸಿದ ಕಥಾ ರೂಪಕವನ್ನು ಇಲ್ಲಿ ನೃತ್ಯದ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಇದಾದ ಬಳಿಕ ದೇವರ ಗುಡಿಯ ಸುತ್ತ ಕೈಯಲ್ಲಿ ಜಿಂಕೆಯ ಕೊಂಬನ್ನು ಹಿಡಿದು ಕೊಂಬಾಟ್ ಮಾಡುವ ದೃಷ್ಯವೂ ಭಕ್ತರ ಪರಾಕಾಷ್ಠತೆಗೆ ಸಾಕ್ಷಿಯಾಗುತ್ತದೆ.

6 / 7

ಇದಾದ ಬಳಿಕ ಪ್ರಾಣಿಯ ದುಪ್ಪಟ್ಟ ಹಿಡಿದು ಚೌರಿಯಾಟ್ ಎಂಬ ಮತ್ತೊಂದು ಬಗೆಯ ನೃತ್ಯ ಮಾಡುತ್ತಾರೆ. ಈ ಆಚರಣೆಗಳನ್ನ ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.

7 / 7

ತಮ್ಮೂರಿನ ಭದ್ರಕಾಳಿ ದೇವರು ಕೇಳಿದ್ದನ್ನು ಅನುಗ್ರಹಿಸುವ ಮಹಾಮಾತೆ ಎಂದು ಇಲ್ಲಿನ ಭಕ್ತರು ನಂಬುತ್ತಾರೆ. ಹಾಗಾಗಿ ಈ ದಿನ ಊರಿನ ಮಂದಿಯೆಲ್ಲ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಇಲ್ಲಿ ಬಂದು ಸೇರುತ್ತಾರೆ. ಈ ಮೂಲಕ ಕೊಡಗಿನ ವಿಶಿಷ್ಟ ಹಬ್ಬದ ಪರಂಪರೆಯೊಂದು ಇಲ್ಲಿ ಅನಾವರಣಗೊಳ್ಳುತ್ತದೆ.

Loading...
Unable to load recommendations.
Follow Us