
ಮಂತ್ರಾಲಯ, ಭಕ್ತರಿಗೆ ಬೇಡಿದ ವರವನು ಕರುಣಿಸುವ ಕರುಣಾಮಯಿ ಗುರು ರಾಯರು ನೆಲೆಸಿರುವ ಸ್ಥಳ. ಇಂತಹ ಮಂತ್ರಾಲಯಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ, ಗುರು ಸಾರ್ವಭೌಮ ರಾಘವೇಂದ್ರ ಯತಿಗಳ ದರ್ಶನ ಪಡೆದು ಪುನೀತರಾಗಬೇಕು ಎಂಬ ಕನಸು ಕಂಡಿರುತ್ತಾರೆ.

ಹೀಗೆ ರಾಯರ ಸನ್ನಿಧಿಗೆ ಬರುವ ಭಕ್ತರಿಗೆ ಮೊದಲಿಗೆ ಕೈ ಬೀಸಿ ಕರೆಯುವವಳು ತುಂಗಭದ್ರೆ. ಹೌದು, ತುಂಗಾ ನದಿಯಲ್ಲಿ ಮಿಂದು ಮಂತ್ರಾಲಯದ ಗ್ರಾಮದೇವತೆ ಮಂಚಾಲಮ್ಮನ ದರ್ಶನ ಪಡೆದ ಬಳಿಕ ರಾಯರನ್ನ ಆರಾಧನೆ ಮಾಡಿದರೆ ಬೇಡಿದ ವರಗಳನ್ನು ರಾಯರು ಕರುಣಿಸುತ್ತಾರೆ ಎಂಬ ನಂಬಿಕೆ ಇದೆ.

ಆದ್ರೆ, ಕಳೆದ ಬಾರಿ ಭೀಕರ ಬರಗಾಲದಿಂದ ಬರಿದಾಗಿದ್ದ ತುಂಗಭದ್ರೆ, ಮಂತ್ರಾಲಯಕ್ಕೆ ಬಂದ ಭಕ್ತರಿಗೆ ನಿರಾಸೆಯನ್ನುಂಟು ಮಾಡಿದ್ದಳು. ಈ ಬಾರಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಭಕ್ತರಿಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ. ಅಷ್ಟೇ ಅಲ್ಲ, ಈ ಬಾರಿಯ ರಾಯರ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಕಳೆದ ಬಾರಿ ಬರಗಾಲದಿಂದ ನದಿ ಬತ್ತಿ ಹೋಗಿತ್ತು. ಹೀಗಾಗಿ ಭಕ್ತರು ಪುಣ್ಯಸ್ನಾನದಿಂದ ವಮಚಿತರಾಗಿದ್ದರು. ಆದ್ರೆ, ಈ ಬಾರಿ ತುಂಗೆ ತುಂಬಿ ಹರಿಯುತ್ತಿದ್ದಾಳೆ. ಹಾಗಾಗಿ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಈ ಬಾರಿ ರಾಯರ ದರ್ಶನದ ಜೊತೆ ಜೊತೆಗೆ ತುಂಗಾ ಸ್ನಾನದ ಪುಣ್ಯವೂ ಲಭಿಸಲಿದೆ.

ಮಂತ್ರಾಲಯದ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ರಾಯರ 353 ನೇ ಆರಾಧನೆಗೆ ಏರ್ಪಾಡು ಮಾಡಲಾಗ್ತಿದೆ. ರಾಯರ ಆರಾಧನೆಗೆ ದಿನಗಣನೆ ಆರಂಭವಾಗಿದ್ದು, ಇದೇ ಅಗಸ್ಟ್ 18 ರಿಂದ 24 ರವರೆಗೆ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಭಕ್ತ ಸಾಗರ ಮಂತ್ರಾಲಯದತ್ತ ಹರಿದು ಬರ್ತಿದೆ.

ಅದೇನೆ ಇರಲಿ ರಾಯರ ಆರಾಧನೆಗೆ ದಿನಗಣನೆ ಆರಂಭವಾಗಿದ್ದು, ಕಳೆದ ಬಾರಿ ನೀವೇನಾದರು ಆರಾಧನೆ ಮಿಸ್ ಮಾಡಿಕೊಂಡಿದ್ದರೆ, ಈ ಬಾರಿ ತಪ್ಪದೇ ಮಂತ್ರಾಲಯಕ್ಕೆ ಹೋಗಿ, ಒಂದು ಕಡೆ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮತ್ತೊಂದು ಕಡೆ ರಾಯರ ದರ್ಶನ ಪಡೆದು ಪುನೀತರಾಗಿ.
Published On - 5:45 pm, Sat, 17 August 24