
ರಾಯರು ಸಶರೀರರಾಗಿ ವೃಂದಾವನಸ್ಥರಾದ ದಿನದ ಮುನ್ನಾ ದಿನವನ್ನು ಪೂರ್ವಾರಾಧನೆಯಾಗಿ ಮಂತ್ರಾಲಯ ಸೇರಿದಂತೆ ದೇಶದ ಎಲ್ಲಾ ರಾಯರ ಮಠಗಳಲ್ಲಿ ಆಚರಿಸಲಾಗುತ್ತಿದೆ.

ಇಂದು(ಮಂಗಳವಾರ) ಬೆಳಿಗ್ಗೆಯಿಂದಲೇ ಮಂತ್ರಾಲಯದ ರಾಯರ ಮಠದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ನಿರ್ಮಾಲ್ಯ ವಿಸರ್ಜನೆ, ಉತ್ಸವರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ರಜತ ಸಿಂಹವಾಹನೋತ್ಸವ ಜರುಗಿವೆ.

ತಮಿಳುನಾಡಿನ ಮುಜರಾಯಿ ಇಲಾಖೆಯ ಅಧಿಕಾರಿಗಳು ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಕುಂಬಕೋಣಂನ ಉಪ್ಪಲಿ ಅಪ್ಪನ್ ದೇವಾಲಯದಿಂದ ರಾಯರಿಗೆ ವಸ್ತ್ರ ರೂಪದ ಪ್ರಸಾದ ತಂದಿದ್ದು, ಶ್ರೀಗಳಿಗೆ ಅರ್ಪಿಸಿದರು.

ಬಳಿಕ ಅದನ್ನ ರಾಯರ ಮೂಲ ವೃಂದಾವನದ ಬಳಿ ಇಟ್ಟು ವಿಶೇಷ ಪೂಜೆ ಮಾಡಿ ರಾಯರಿಗೆ ಅರ್ಪಿಸಲಾಯ್ತು. ಮಠದ ಪ್ರಾಂಗಣದಲ್ಲಿ ರಾಯರು ರಚಿಸಿರುವ ಪರಿಮಳ ಗ್ರಂಥವನ್ನ ಪಲ್ಲಕ್ಕಿಯಲ್ಲಿ ಇಟ್ಟು ಮಠದ ಪ್ರಾಂಗಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

ಏಳು ದಿನಗಳ ರಾಯರ ಆರಾಧನಾ ಮಹೋತ್ಸವದ ಪೈಕಿ ಇಂದಿನಿಂದ ಮೂರು ದಿನಗಳು ಅತಿ ಮಹತ್ವದ ದಿನಗಳಾಗಿದ್ದು, ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗಿರುವ ಈ ದಿನಗಳಲ್ಲಿ ರಾಯರ ದರ್ಶನ ಪಡೆದರೆ ಸಕಲ ಸಂಕಷ್ಟಗಳು ದೂರಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಹೀಗಾಗಿ ವಿವಿಧ ಕಡೆಗಳಲ್ಲಿನ ಭಜನಾ ಮಂಡಳಿಯ ನೂರಾರು ಭಕ್ತರು ಆಗಮಿಸಿ, ರಾಯರಿಗೆ ಭಕ್ತಿ ಸೇವೆಯನ್ನ ಸಮರ್ಪಿಸಿದರು.

ಇನ್ನು ರಾಜ್ಯವಲ್ಲದೇ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ರಾಯರ ದರ್ಶನ ಪಡೆಯುತ್ತಿದ್ದಾರೆ. ಹೀಗೆ ಪೂರ್ವರಾಧನೆ ಹಿನ್ನೆಲೆ ಶ್ರೀ ಮಠ ವಿಜೃಂಭಣೆಯಿಂದ ನಡೆದ ವಿಶೇಷ ಧಾರ್ಮಿಕ ಕೈಂಕರ್ಯಗಳಿಗೆ ಸಾಕ್ಷಿಯಾಗಿದೆ. ನಾಳೆ(ಆ.21) ರಾಯರ ಮಧ್ಯರಾಧನೆ ನಡೆಯಲಿದೆ.