ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ರಾಮಣ್ಣ ಹಾಗೂ ಶೃತಿ ದಂಪತಿಯ ವಿವಾಹವಾಗಿ 15 ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲ. ರಾಮಣ್ಣ ಅವರು ಮಸ್ಕಿ ಪಟ್ಟಣದ ಕಾಲೇಜುವೊಂದರಲ್ಲಿ ಉಪನ್ಯಾಸರಾಗಿ ಕೆಲಸ ಮಾಡುತ್ತಿದ್ದರೇ, ಶೃತಿ ಕಂಪ್ಯೂಟರ್ ಶಿಕ್ಷಕಿಯಾಗಿದ್ದಾರೆ.ವಿವಾಹವಾಗಿ 15 ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂಬ ಚಿಂತೆಯಲ್ಲಿ ದಂಪತಿ ಅದೆಷ್ಟೋ ದೇವರಿಗೆ ಹರಕೆ ಹೊತ್ತಿದರೂ, ಅದೆಷ್ಟೋ ವೈದ್ಯರಲ್ಲಿ ಚಿಕಿತ್ಸೆ ಪಡೆದಿದರೂ ಸಂತಾನ ಭಾಗ್ಯ ಮಾತ್ರ ಪ್ರಾಪ್ತಿಯಾಗಿಲ್ಲ.
ಇದರಿಂದ ರಾಮಣ್ಣ ಹಾಗೂ ಶೃತಿ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. ಆದರೆ, ಇದರಿಂದ ಹೊರಬಂದ ದಂಪತಿ, ತಮಗೆ ಮಕ್ಕಳಾಗದಿದ್ದರೇ ಏನಂತೆ, ನಮ್ಮ ಸುತ್ತ-ಮುತ್ತ ಬಡವರೇ ಹೆಚ್ಚಿದ್ದಾರೆ. ಅದರಲ್ಲೂ ಇದು ಶಿಕ್ಷಣದಲ್ಲಿ ಹಿಂದುಳಿದ ಜಿಲ್ಲೆಯಾಗಿದೆ. ಹೀಗಾಗಿ, ಇಲ್ಲಿನ ಬಡ ಮಕ್ಕಳು, ವಿಶೇಷ ಚೇತನ ಮಕ್ಕಳು, ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸುವ ಶಪಥ ದಂಪತಿ ಮಾಡಿದರು.
ಸುಮಾರು 30ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಊಟ, ಕ್ರೀಡೆ, ವಿಜ್ಞಾನ ಸೇರಿ ವಿವಿಧ ಕ್ಷೇತ್ರದಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಅದರಲ್ಲೂ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿರುವ ದೇವರಾಜ್ ಎಂಬ ಬಾಲಕನಿಗೆ ಕಬಡ್ಡಿ, ಕ್ರಿಕೆಟ್ ತರಬೇತಿ ಕೊಡಿಸುತ್ತಿದ್ದಾರೆ. ಆ ಬಾಲಕ ಜಿಲ್ಲಾ, ರಾಜ್ಯ ಮಟ್ಟದ ಮಟ್ಟದಲ್ಲಿ ಆಟವಾಡಿದ್ದಾನೆ. ನಿತ್ಯ ಮಕ್ಕಳಿಗೆ ವಚನಗಳು, ಉಪನಿಷತ್ತುಗಳು, ಗುರು ವಂದನೆ, ಸ್ತೋತ್ರಗಳನ್ನ ಹೇಳಿ ಕೊಡಲಾಗುತ್ತಿದೆ.
ದಂಪತಿ ತಮ್ಮ ಸ್ವಂತ ದುಡಿಮೆಯಲ್ಲಿನ ಹಣವನ್ನೇ ಈ ಮಕ್ಕಳಿಗಾಗಿ ಬಳಕೆ ಮಾಡುತ್ತಿದ್ದಾರೆ. ಬಡ ಮಕ್ಕಳಿಗಾಗಿ ನಮ್ಮ ಮನೆ ಬಾಗಿಲು ಸದಾ ತೆರದಿರುತ್ತದೆ ಎಂದು ದಂಪತಿ ಹೇಳಿದ್ದಾರೆ.
ಹಂತಹಂತವಾಗಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಪ್ರೇಮಿಗಳು ಇವರ ಜೊತೆ ಕೈ ಜೋಡಿಸಿ ಮಕ್ಕಳ ಭವಿಷ್ಯವನ್ನು ಗಟ್ಟಿಗೊಳಿಸಬೇಕಿದೆ.