
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಸ್ವಪ್ನಿಲ್ ಕುಸಾಲೆ ಇತಿಹಾಸ ನಿರ್ಮಿಸಿದ್ದಾರೆ. 50 ಮೀಟರ್ ರೈಫಲ್ ಈವೆಂಟ್ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡುವ ಮೂಲಕ ಸ್ವಪ್ನಿಲ್, ಭಾರತದ ಪದಕಗಳ ಸಂಖ್ಯೆಯನ್ನು ಮೂರಕ್ಕೇರಿಸಿದ್ದಾರೆ.

ಇವರ ಗೆಲುವಿನಿಂದ ಇಡೀ ದೇಶದಲ್ಲಿ ಸಂತಸದ ಅಲೆ ಎದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಪ್ನಿಲ್ಗೆ ಕರೆ ಮಾಡಿ ಶುಭಾಷಯ ತಿಳಿಸಿದ್ದಾರೆ. ಇದೀಗ ಭಾರತಕ್ಕೆ ಮೂರನೇ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟ ಸ್ವಪ್ನಿಲ್ಗೆ ಬರೋಬ್ಬರಿ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಅಲ್ಲದೆ ಅವರು ಸೇವೆ ಸಲ್ಲಿಸುತ್ತಿರುವ ಸೆಂಟ್ರಲ್ ರೈಲ್ವೇಸ್ ಕೂಡ ಅವರಿಗೆ ಭರ್ಜರಿ ಗಿಫ್ಟ್ ನೀಡಿದೆ.

ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ ಸ್ವಪ್ನಿಲ್ ಫೈನಲ್ ಸುತ್ತಿನಲ್ಲಿ 451.4 ಕಲೆಹಾಕಿ ಕಂಚಿನ ಪದಕ ಗೆದ್ದರು. ಹೀಗಾಗಿ ದೇಶಕ್ಕೆ ಕೀರ್ತಿ ತಂದಿರುವ ಸ್ವಪ್ನಿಲ್ಗೆ ಮುಂಬಡ್ತಿ ನೀಡುವುದಾಗಿ ಸೆಂಟ್ರಲ್ ರೈಲ್ವೇ ಜನರಲ್ ಮ್ಯಾನೇಜರ್ ರಾಮಕರನ್ ಯಾದವ್ ಘೋಷಿಸಿದ್ದಾರೆ. ದೇಶಕ್ಕೆ ಹಾಗೂ ರೈಲ್ವೇಗೆ ಕೀರ್ತಿ ತಂದ ಕಾರಣ ಟಿಸಿ ಹುದ್ದೆಯಿಂದ ಬಡ್ತಿ ನೀಡಿದ್ದು, ‘ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ’ ಅಂದರೆ ಒಎಸ್ಡಿ ಆಗಿ ನೇಮಿಸಲಾಗುವುದು ಎಂದಿದ್ದಾರೆ.

ಇದರ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಸ್ವಪ್ನಿಲ್ ಕುಸಾಲೆ ಕುಟುಂಬಕ್ಕೆ ಕರೆ ಮಾಡಿ ಅಭಿನಂದಿಸಿದ್ದಾರೆ. ಭವಿಷ್ಯದಲ್ಲಿ ಕುಟುಂಬದವರ ಕನಸು ನನಸಾಗಿಸಲು ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, 1 ಕೋಟಿ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದಾರೆ.

ಒಲಿಂಪಿಕ್ ಪದಕ ಗೆದ್ದಿರುವ ಸ್ವಪ್ನಿಲ್ ಕುಸಾಲೆ, ಧೋನಿಯ ಅಪ್ಪಟ ಅಭಿಮಾನಿ. ವಿಶೇಷ ಸಂಗತಿಯೆಂದರೆ ಧೋನಿಯಂತೆ ಸ್ವಪ್ನಿಲ್ ಕೂಡ ಟಿಕೆಟ್ ಕಲೆಕ್ಟರ್ ಕೆಲಸದಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಧೋನಿ 7 ನೇ ನಂಬರ್ ಜೆರ್ಸಿ ತೊಟ್ಟು ಕಣಕ್ಕಿಳಿದರೆ, ಇತ್ತ ಸ್ವಪ್ನಿಲ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ 7 ನೇ ಭಾರತೀಯ ಶೂಟರ್ ಆಗಿದ್ದಾರೆ. ಹಾಗೆಯೇ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ 7 ನೇ ಸ್ಥಾನ ಪಡೆದಿದ್ದರು ಎಂಬುದು ಇಲ್ಲಿ ಗಮನಾರ್ಹ.