
ಸಾರಿಗೆ ಹಾಗೂ ಮುಜರಾಯಿ ಸಚಿವರು ಶ್ರೀ ರಾಮಲಿಂಗಾ ರೆಡ್ಡಿ ರವರು ಶಟಲ್ ಬ್ಯಾಡ್ಮಿಂಟನ್, ಕೇರಂ, ಚೆಸ್ ಮತ್ತು ಟೇಬಲ್ ಟೆನ್ನಿಸ್ ಆಡುವ ಮೂಲಕ ನೌಕರರಿಗೆ ಪ್ರೋತ್ಸಾಹಿಸಿ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಿದರು.

ಕೆಎಸ್ ಆರ್ ಟಿ ಸಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರಿಗೆ ಗುರುವಾರ (ನ.13)ರಂದು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ಅಧಿಕಾರಿ/ ಸಿಬ್ಬಂದಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ನಿಗಮದಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಯ ಉತ್ತಮ ಆರೋಗ್ಯ, ಒತ್ತಡ ನಿವಾರಣೆ ಹಾಗೂ ಕ್ರೀಡಾ ಮನೋರಂಜನೆಗಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿ ವರ್ಷವು ಘಟಕ, ವಿಭಾಗ, ಪ್ರಾದೇಶಿಕ ಕಾರ್ಯಗಾರ ಮತ್ತು ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರು ಹಾಗೂ ಅವರ ಮಕ್ಕಳಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

ಕ್ರೀಡಾ ಮತ್ತು ಸಾಂಸ್ಕೃತಿಕ ನಿಧಿಯಿಂದ ಕಾರ್ಯಾಗಾರಗಳಿಗೆ ತಲಾ ರೂ. 40,000 ರೂ.ಗಳಂತೆ 17 ವಿಭಾಗಗಳಿಗೆ, ಎರಡು ಕಾರ್ಯಾಗಾರಗಳಿಗೆ ಅನುದಾನವನ್ನು ಪ್ರತಿ ವರ್ಷ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷವಷ್ಟೇ ಸದರಿ ಕ್ರೀಡಾ ಸಂಕೀರ್ಣವನ್ನು ಮೇಲ್ದರ್ಜೆಗೇರಿಸಲಾಗಿತ್ತು.ನೌಕರರು ಪ್ರತಿನಿತ್ಯ ಈ ಕ್ರೀಡಾ ಸಂಕೀರ್ಣವನ್ನು ಕೆಲವೊಂದು ಆಟಗಳನ್ನು ನಿತ್ಯ ಆಡುವ ಮೂಲಕ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗೆಲುವು ಸೋಲು ಮುಖ್ಯವಲ್ಲ, ಭಾಗವಹಿಸುವಿಕೆ ಎಂಬುದು ಪ್ರಮುಖವಾದ್ದದ್ದು. ನೌಕರರು ಅತೀ ಒತ್ತಡದ ಕಾರ್ಯಶೈಲಿಯಲ್ಲಿ ಈ ರೀತಿಯ ಚಟುವಟಿಕೆ ಆಹ್ಲಾದಕರ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸದರಿ ಕಾರ್ಯಕ್ರಮದಲ್ಲಿ ನೌಕರರಿಗೆ ಮತ್ತು ಅಧಿಕಾರಿಗಳಿಗೆ ಚೆಸ್, ಕೇರಂ, ಶೆಟಲ್, ಟೇಬಲ್ ಟೆನ್ನಿಸ್ , ಸಂಗೀತ ಸ್ಪರ್ಧೆಗಳು, ಸಂಗೀತ ಕುರ್ಚಿ, ಗುಂಡು ಎಸೆತ, ವೇಗ ನಡಿಗೆ, ಮಡಿಕೆ ಹೊಡೆಯುವ ಆಟ ಇತ್ಯಾದಿಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅಕ್ರಂ ಪಾಷ , ಡಾ. ನಂದಿನಿ ದೇವಿ ಕೆ (IAS), ನಿರ್ದೇಶಕರು ಹಬಲ್ ಈಜಿಪ್ಟ್(ಸಿಬ್ಬಂದಿ & ಜಾಗೃತ) ನಿರ್ದೇಶಕರು (ಮಾಹಿತಿ ತಂತ್ರಜ್ಞಾನ) ಹಾಗೂ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.