ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದ ಬಳಿ ಸೇತುವೆ ಬಿದ್ದಿದ್ದು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಇಲ್ಲದೆ ನದಿಯನ್ನ ದಾಟಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಬಿದ್ದ ರಕ್ಕಸ ಮಳೆಯಿಂದ ಸೇತುವೆ ಕುಸಿದು ಬಿದ್ದಿದ್ದು, ಮಂಚನಬೆಲೆ ಗ್ರಾಮ ಸೇರಿದಂತೆ ಹತ್ತಾರು ಗ್ರಾಮದ ಜನರು ಬದಲಿ ಮಾರ್ಗವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಕುಸಿದು ಬಿದ್ದಿರುವ ಸೇತುವೆಯ ಮೇಲೆಯೇ ಶಾಲಾ ವಿದ್ಯಾರ್ಥಿಗಳು ಪ್ರಾಣದ ಹಂಗು ತೊರೆದು ಹೋಗುತ್ತಿದ್ದರೆ, ಮತ್ತೊಂದೆಡೆ ತಾಯಂದಿರು ತಮ್ಮ ಮಕ್ಕಳನ್ನ ನದಿಯ ಮಧ್ಯೆ ಕೈ ಹಿಡಿದು ದಾಟಿಸಿ ಶಾಲೆಗೆ ಬಿಡುತ್ತಿದ್ದಾರೆ.
ಮಂಚನಬೆಲೆ ಗ್ರಾಮದ ಸೇತುವೆ ಹತ್ತಾರು ಹಳ್ಳಿಗಳ ಗ್ರಾಮಸ್ಥರಿಗೆ ಆಸರೆಯಾಗಿತ್ತು. ರೈತರು ಜಮೀನುಗಳಿಗೆ ತೆರಳಲು, ಹಾಲನ್ನ ಡೈರಿಗೆ ಹಾಕಲು, ಬೆಂಗಳೂರಿಗೆ ತೆರಳಲು ಇದೇ ಸೇತುವೆ ಆಧಾರವಾಗಿತ್ತು. ಆದರೆ ಇದೀಗ ಸೇತುವೆ ಇಲ್ಲದೇ ಇರುವುದರಿಂದ ಹತ್ತಾರು ಕಿಲೋ ಮೀಟರ್ ಸುತ್ತಿಕೊಂಡು ಬರುವ ಪರಿಸ್ಥಿತಿ ಗ್ರಾಮಸ್ಥರಿಗೆ ನಿರ್ಮಾಣವಾಗಿದೆ.
ಇನ್ನು ಸೇತುವೆ ಕುಸಿದು ಬಿದ್ದ ನಂತರ ಮಾಗಡಿ ಶಾಸಕ ಎ ಮಂಜುನಾಥ್, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸಂಸದ ಡಿ ಕೆ ಸುರೇಶ್ ಸೇರಿದಂತೆ ಹಲವು ಅಧಿಕಾರಿಗಳು ಸಹ ಸ್ಥಳ ಪರಿಶೀಲನೆ ಮಾಡಿ, ತಾತ್ಕಲಿಕವಾಗಿ ಸೇತುವೆ ನಿರ್ಮಾಣ ಮಾಡಿಕೊಡುತ್ತೇವೆ. ಆನಂತರ ನೂತನ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದರು.
ಭರವಸೆ ನೀಡಿ ಎರಡು ತಿಂಗಳುಗಳು ಕಳೆದು ತಾತ್ಕಾಲಿಕ ಸೇತುವೆ ನಿರ್ಮಾಣವಾಗಿಲ್ಲ. ಹೀಗಾಗಿ ಗ್ರಾಮಸ್ಥರು ಸಾಕಷ್ಟು ತೊಂದರೆ ಆನುಭವಿಸುತ್ತಿದ್ದಾರೆ. ಇನ್ನಾದರೂ ತಾತ್ಕಲಿಕ ಸೇತುವೆ ನಿರ್ಮಾಣ ಮಾಡಿ ಎಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅಂಗಲಾಚುತ್ತಿದ್ದಾರೆ.
ಒಟ್ಟಾರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲಾ ವಿದ್ಯಾರ್ಥಿಗಳು ಪ್ರಾಣದ ಹಂಗು ತೊರೆದು ಕುಸಿದು ಬಿದ್ದಿರುವ ಸೇತುವೆ ಮೇಲೆ ಶಾಲೆಗಳಿಗೆ ತೆರಳುತ್ತಿದ್ದಾರೆ. ಸ್ವಲ್ಪ ಆಯಾತಪ್ಪಿದರು ಅನಾಹುತ ಕಟ್ಟಿಟ್ಟ ಬುತ್ತಿ, ಆದಷ್ಟು ಬೇಗ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಾಗಿದೆ.