
ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಪದವಿ ಕಲಾ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವತಿಯರು ಇಳಕಲ್ ಸೀರೆಯುಟ್ಟು ಸಂಭ್ರಮಿಸಿದ್ರೆ, ಯುವಕರು ಬಿಳಿ ಪಂಚೆ, ಜುಬ್ಬಾದಲ್ಲಿ ಮಿಂಚಿದ್ದಾರೆ.

ಬಸವೇಶ್ವರ ಪದವಿ ಕಲಾ ವಿಭಾಗ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸಂಭ್ರಮದಲ್ಲಿ ತೇಲಾಡಿದ್ದಾರೆ. ಇದಕ್ಕೆ ಕಾರಣ "ಸಂಕ್ರಾಂತಿ ಸಿರಿ" ಆಚರಣೆ. ಸಂಕ್ರಾಂತಿ ಸಿರಿ ಆಚರಣೆ ಹಿನ್ನೆಲೆ ಎಲ್ಲ ವಿದ್ಯಾರ್ಥಿನಿಯರು ಇಳಕಲ್ ಸೀರೆಯಲ್ಲಿ ಮಿಂಚುತ್ತಿದ್ದರೆ, ವಿದ್ಯಾರ್ಥಿಗಳು ಪಂಚೆ, ಜುಬ್ಬಾದಲ್ಲಿ ಕಂಗೊಳಿಸುತ್ತಿದ್ದರು.

ಕಲರ್ ಪುಲ್ ರಂಗೋಲಿ ಬಿಡಿಸಿ ಕಾಲೇಜು ಅಂದವನ್ನು ವಿದ್ಯಾರ್ಥಿನಿಯರು ಹೆಚ್ಚಿಸಿದ್ದರು. ನಮ್ಮ ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ಸಂಕ್ರಾಂತಿ ಸಂಭ್ರಮ ಆಯೋಜಿಸಿತ್ತು.

ಸಂಕ್ರಾಂತಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷ ಸ್ಥಾನಮಾನವಿದೆ, ಮಹತ್ವವಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಸಡಗರ ಇನ್ನು ಹೆಚ್ಚು ಅಂತಾನೆ ಹೇಳಬಹುದು. ಅದೇ ಪ್ರಕಾರ ಬಿವಿವಿ ಸಂಘದಲ್ಲಿ ಸಂಕ್ರಾಂತಿ ಸಡಗರವೇ ಆವರಿಸಿತ್ತು. ಹಗ್ಗಜಗ್ಗಾಟ, ಜನಪದ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ರಂಗೋಲಿ ಹಾಕಿ ಕಾಲೇಜಿಗೆ ಮೆರುಗು ನೀಡಿದ್ದು ಒಂದು ಕಡೆ ಆದ್ರೆ, ಮನೆಯಿಂದ ಪ್ರೊಫೆಸರ್ ಗಳು ವಿದ್ಯಾರ್ಥಿಗಳು ಉತ್ತರಕರ್ನಾಟಕದ ಹೋಳಿಗೆ ಖಡಕ್ ರೊಟ್ಟಿ, ಕಡಬು, ಚಟ್ನಿ ತರಕಾರಿ ಸೇರಿದಂತೆ ಜವಾರಿ ಊಟ ತಯಾರಿಸಿ ತಂದಿದ್ದರು. ತಾವೆ ಖುದ್ದಾಗಿ ತಯಾರಿಸಿ ತಂದಿದ್ದು ವಿಶೇಷವಾಗಿತ್ತು.

ತಂದಿದ್ದ ಆಹಾರ ಪದಾರ್ಥವನ್ನು ಕಾಲೇಜು ಉಪನ್ಯಾಸಕರೆಲ್ಲರೂ ಒಂದೆ ಕಡೆ ಕುಳಿತು ಒಟ್ಟಾಗಿ ಸವಿದರು. ದಿನಾಲು ಕಾಲೇಜು, ಕ್ಲಾಸ್ ಅಂತಿದ್ದ ವಿದ್ಯಾರ್ಥಿಗಳಿಗೆ ಸಂಕ್ರಾಂತಿ ಸಂಭ್ರಮ ವಿಭಿನ್ನ ಅನುಭವ ನೀಡ್ತು.

ಕಲರ್ ಕಲರ್ ಸೀರೆಯಲ್ಲಿ ಗಾಗಲ್ಸ್ ಹಾಕಿ ಪೋಜ್ನೀಡಿದ ವಿದ್ಯಾರ್ಥಿನಿಯರು, ಪಂಚೆಯಲ್ಲಿ ಮಿಂಚುತ್ತಿದ್ದ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬವನ್ನು ಎಂಜಾಯ್ ಮಾಡಿ ಹರ್ಷ ವ್ಯಕ್ತಪಡಿಸಿದರು..

ಒಟ್ಟಿನಲ್ಲಿ ದಿನಾಲು ಕಾಲೇಜು, ಅಸೈನ್ಮೆಂಟ್ ಅಂತಿದ್ದ ಕ್ಯಾಂಪಸ್ ನಲ್ಲಿ ಸಂಕ್ರಾಂತಿ ಕಳೆ ಮೈದಳೆದಿತ್ತು. ಎಲ್ಲ ವಿದ್ಯಾರ್ಥಿಗಳು ಸಂಕ್ರಾಂತಿ ಆಚರಿಸೋದರ ಜೊತೆಗೆ ದೇಶಿ ಸಂಸ್ಕೃತಿ ಬಿಂಬಿಸಿದ್ದು ಶ್ಲಾಘನೀಯ.