
ಇದೀಗ ಎಲ್ಲಿ ನೋಡಿದ್ರೂ ಮೈಸುಡುವ ಬಿಸಿಲಿನದ್ದೇ ಕಾರುಬಾರಾಗಿದ್ದು, ಜನರು ಸೂರ್ಯನ ಶಾಖದಿಂದ ರಿಲ್ಯಾಕ್ಸ್ ಆಗೋದಕ್ಕೆ ಕರಾವಳಿ ತೀರಗಳತ್ತ ಮುಖಮಾಡಿದ್ದಾರೆ.

ಅದರಲ್ಲೂ ವಿಶಾಲವಾದ ಕಡಲತೀರಗಳಿಗೆ ಹೆಸರುವಾಸಿಯಾದ ಉತ್ತರಕನ್ನಡ ಜಿಲ್ಲೆಯ ಬೀಚ್ಗಳತ್ತ ಇದೀಗ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಕಾರವಾರ, ಗೋಕರ್ಣ, ಹೊನ್ನಾವರ ಹಾಗೂ ಮುರ್ಡೇಶ್ವರ ಕಡಲತೀರಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ.

ಕರಾವಳಿ ಭಾಗದಲ್ಲೂ ಬಿಸಿಲಿನ ಶಾಖ ಜೋರಾಗಿಯೇ ಇದೆಯಾದರೂ, ಕಡಲತೀರಗಳಲ್ಲಿ ತಣ್ಣಗೆ ಗಾಳಿ ಬೀಸುವುದರಿಂದ ಇಲ್ಲಿನ ಸಮುದ್ರದ ನೀರಿನಲ್ಲಿ ಈಜಾಡುತ್ತಾ ತಣ್ಣಗೆ ಬೀಸುವ ಗಾಳಿಗೆ ಮೈಯೊಡ್ಡಿ ಜನರು ಬಿಸಿಲಿನ ಬೇಗೆಯಿಂದ ಕೊಂಚ ರಿಲ್ಯಾಕ್ಸ್ ಆಗುತ್ತಿದ್ದಾರೆ.

ಈ ಬಾರಿ ಘಟ್ಟದ ಮೇಲಿನ ಪ್ರದೇಶಗಳಲ್ಲೂ ತೀವ್ರವಾಗಿ ತಾಪಮಾನ ಏರಿಕೆಯಾಗಿದ್ದು, ಕರಾವಳಿಯಲ್ಲೇ ಕೊಂಚ ಅನುಕೂಲಕರ ವಾತಾವರಣ ಇದೆ ಎನ್ನುವಂತಾಗಿದೆ. ಹೀಗಾಗಿ ಜನರು ಕುಟುಂಬಸ್ಥರೊಂದಿಗೆ ಒಟ್ಟಾಗಿ ವೀಕೆಂಡ್ಗಳಲ್ಲಿ ಇಲ್ಲಿನ ಕಡಲತೀರಗಳಿಗೆ ಭೇಟಿ ನೀಡುವ ಮೂಲಕ ರಜೆಯ ಮಜಾವನ್ನ ಕಳೆಯೋದಕ್ಕೆ ಇಷ್ಟಪಡುತ್ತಿದ್ದಾರೆ.

ಸದ್ಯ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ 26 ರಿಂದ 35 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಇರುತ್ತಿದ್ದು, ತೇವಾಂಶದ ಪ್ರಮಾಣ ಜಾಸ್ತಿಯಿರುವ ಹಿನ್ನಲೆ 40 ಡಿಗ್ರಿಯಷ್ಟು ಸೆಕೆಯ ಅನುಭವವಾಗುತ್ತದೆ. ಆದರೆ ಕಡಲತೀರಗಳ ಬಳಿ ಜೋರಾಗಿ ಗಾಳಿ ಬೀಸುವುದರಿಂದ ಹೆಚ್ಚು ಬಿಸಿಲಿದ್ದರೂ ಅಷ್ಟೊಂದು ಸೆಕೆ ಎನಿಸುವುದಿಲ್ಲ. ಜೊತೆಗೆ ಸಮುದ್ರದ ನೀರಿನ ತಾಪಮಾನ ಹಗಲಿನಲ್ಲಿ ಕೊಂಚ ಕಡಿಮೆಯಿರುವುದರಿಂದ ಬಂದಂತಹ ಪ್ರವಾಸಿಗರಿಗೆ ಬೀಚ್ಗಳಲ್ಲಿ ಎಂಜಾಯ್ ಮಾಡೋದಕ್ಕೆ ಅನುಕೂಲಕರ ವಾತಾವರಣ ಇದ್ದಂತಾಗಿದೆ.

ಹೀಗಾಗಿ ಕುಟುಂಬ ಸಮೇತರಾಗಿ ರಜೆಯನ್ನ ಕಳೆಯೋದಕ್ಕೆ ಕಡಲತೀರಗಳಿಗೆ ಜನರು ಮುಗಿಬೀಳುತ್ತಿದ್ದು, ಜಿಲ್ಲೆಯ ಬೀಚ್ಗಳಲ್ಲಿ ಸದ್ಯ ಪ್ರವಾಸಿಗರ ಕಲರವ ಜೋರಾಗಿದೆ.

ಇನ್ನು ಕಾರವಾರ ಕಡಲತೀರ ನೆರೆಯ ಗೋವಾಕ್ಕೆ ಹೋಲಿಸಿದರೆ, ಹೆಚ್ಚು ಜನಸಂದಣಿ ಹೊಂದಿಲ್ಲವಾದ್ದರಿಂದ ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಉತ್ತಮವಾಗಿದೆ ಅಂತಾರೇ ಪ್ರವಾಸಿಗರು.

ಒಟ್ಟಾರೆ ಬೇಸಿಗೆ ಬಿಸಿಯಿಂದ ಕಂಗೆಟ್ಟಿರುವ ಜನರು ಸಮುದ್ರದ ನೀರಿನಲ್ಲಿ ಈಜಾಡಿ ರಿಲ್ಯಾಕ್ಸ್ ಮಾಡುತ್ತಿದ್ದು, ಕಡಲತೀರಗಳು ಪ್ರವಾಸಿಗರ ಹಾಟ್ಸ್ಪಾಟ್ ಆಗಿದ್ದಂತೂ ಸತ್ಯ.